ಜಡ್ಜ್ ಪಟ್ಟಾಭಿ ಲಂಚ: ಶ್ರೀರಾಮುಲೂ ಸಹ ಭಾಗಿ
ಇತ್ತ ತನಗೂ, ಜನಾರ್ದನ ರೆಡ್ಡಿ ಜೈಲಿನಲ್ಲಿರುವುದಕ್ಕೂ ಏನೂ ಸಂಬಂಧವೇ ಇಲ್ಲ ಎಂದು ಕರ್ನಾಟಕವನ್ನು ತನ್ನ ಪಾದಯಾತ್ರೆಯಿಂದ ಪವಿತ್ರಗೊಳಿಸಲು, ಅಮಾಯಕನಂತೆ pose ಕೊಡುತ್ತಿದ್ದ ಬಿ ಶ್ರೀರಾಮುಲು ಎಂಬ 'ಜನನಾಯಕ'ನೂ ಸಹ ನ್ಯಾಯಾಧೀಶರಗಳಿಗೇ ತಿನ್ನಬಾರದ್ದನ್ನು ತಿನ್ನಿಸಲು ತನ್ನ ಕುಟುಂಬಸ್ಥರಿಗೆ ನೆರವಾಗಿದ್ದಾರೆ ಎಂಬ ಮಾಹಿತಿ ತಡವಾಗಿ ಹೊರಬಿದ್ದಿದೆ.
ಜಾಮೀನು ಹಣ ಹಸ್ತಾಂತರದಲ್ಲಿ ಭಾಗಿಯಾಗಿರುವ ಕೆ. ಲಕ್ಷ್ಮೀನರಸಿಂಹ ರಾವ್ ಎಂಬ ನ್ಯಾಯಾಧೀಶನೇ ಇದನ್ನು ಹೇಳಿದ್ದಾನೆ. ಅದೂ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳ ಎದುರು ಲಿಖಿತ ಹೇಳಿಕೆಯಲ್ಲಿಯೇ ದಾಖಲಿಸಿದ್ದಾನೆ. ಜನಾರ್ದನ ರೆಡ್ಡಿ ಜೈಲುಪಾಲಾಗಿ ಇನ್ನೂ ಒಂದು ವರ್ಷವೂ ಆಗಿಲ್ಲ. ಈ ಮಧ್ಯೆ ಏನೆಲ್ಲ ನಡೆದುಹೋಗಿದೆ ನೋಡಿ.
ವಿವರ: 'ಓಬಳಾಪುರಂ ಗಣಿ ಹಗರಣದ A1 ಆರೋಪಿ, ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ನೀಡಲು ರೆಡ್ಡಿ ಕುಟುಂಬ ತನಗೆ 100 ಕೋಟಿ ರೂಪಾಯಿಗಳ ಲಂಚದ ಆಮಿಷ ಒಡ್ಡಿತ್ತು' ಎಂದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಈ ಜಡ್ಜ್ ಮಹಾಶಯ ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾರೆ.
'ಇದನ್ನು ಕೇಳಿ ನನಗೇ ಆಶ್ಚರ್ಯವಾಯಿತು. ಜನಾರ್ದನ ರೆಡ್ಡಿಯ ಸಂಬಂಧಿ ದಶರಥ ರೆಡ್ಡಿಯ ಕಿರಿಯ ವಕೀಲ ಈ 100 ಕೋಟಿ ಆಮಿಷ ವಿಷಯವನ್ನು ನನಗೆ ತಿಳಿಸಿದ. 'ಹೇಗಾದರೂ ಮಾಡಿ ರೆಡ್ಡಿಗೆ ಜಾಮೀನು ದೊರಕಿಸಿಕೊಡಬೇಕಾಗಿದೆ. ಸಿಬಿಐ ಜಡ್ಜ್ ಆಗಿದ್ದ ನಾಗಮಾರುತಿ ಶರ್ಮಾಗೆ ಲಂಚದ ಪ್ರಲೋಭೆ ಒಡ್ಡಲು ಸೂಕ್ತ ಮಾರ್ಗಗಳಿಗಾಗಿ ಹುಡುಕಾಡುತ್ತಿದ್ದೇವೆ. ನೀವೇನಾದರೂ help ಮಾಡ್ತೀರಾ' ಎಂದು ಆತ ನನ್ನನ್ನು ಕೇಳಿದ್ದ' ಎಂದು ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಗಳ ಎದುರು ವಿಚಾರಣೆ ವೇಳೆ ಜಡ್ಜ್ ಲಕ್ಷ್ಮೀನರಸಿಂಹ ರಾವುಗಾರು ಹೇಳಿದ್ದಾರೆ.
'ದಶರಥನ ಕಿರಿಯ ವಕೀಲನ ಮಾತನ್ನು ಕೇಳಿದವನೇ, ನಾನು ಆತನ ಆಜ್ಞಾನುವರ್ತಿಯಾದೆ. ಸೀದಾ ಸಿಬಿಐ ಜಡ್ಜ್ ನಾಗಮಾರುತಿ ಶರ್ಮಾ ಅವರನ್ನು ಕೇಳಿಯೇ ಬಿಟ್ಟೆ. ಆದರೆ ಆ ಜಡ್ಜ್ ಮುಖದ ಮೇಲೆ ಹೊಡೆದಂಗೆ ನನ್ನ offer ಅನ್ನು ತಿರಸ್ಕರಿಸಿದರು' ಎಂದು ಲಕ್ಷ್ಮೀನರಸಿಂಹ ರಾವುಗಾರು ವಿವರಿಸಿದ್ದಾರೆ.
ದಶರಥ ರೆಡ್ಡಿಯ ಕಿರಿಯ ವಕೀಲ ರವಿ ಸೂರ್ಯಪ್ರಕಾಶ ಬಾಬು ಜಡ್ಜ್ ಲಕ್ಷ್ಮೀನರಸಿಂಹ ಅವರ ಬಳಿ ಬಂದು 'ತಾನು ಜನಾರ್ದನ ರೆಡ್ಡಿಯ ಸೋದರ ಶ್ರೀರಾಮುಲುನನ್ನು ಬಳ್ಳಾರಿಯಲ್ಲಿ ಭೇಟಿ ಮಾಡಿದ್ದಾಗಿಯೂ, ಅವರೆಲ್ಲ ಜಾಮೀನಿಗಾಗಿ ಕೋಟ್ಯಂತರ ರುಪಾಯಿ ಲಂಚ ಕೊಡಲು ಸಿದ್ಧವಿರುವುದಾಗಿಯೂ, ಈ ಸಂಬಂಧ ಕಂಪ್ಲಿಯ ಶಾಸಕ ಟಿ ಎಚ್ ಸುರೇಶ್ ಬಾಬು ಅವರನ್ನು ಮುಂದಿನ ಕಾರ್ಚಾರಣೆಗಾಗಿ ಸಂಪರ್ಕಿಸುವಂತೆ ರಾಮುಲು ಸೂಚಿಸಿದ್ದಾರೆ' ಎಂದು ತಿಳಿಸಿದ್ದಾಗಿಯೂ ಜಡ್ಜ್ ಲಕ್ಷ್ಮೀನರಸಿಂಹ ಲಿಖಿತವಾಗಿ ಹೇಳಿದ್ದಾರೆ.
ಕುತೂಹಲದ ಸಂಗತಿಯೆಂದರೆ - ಯಾವಾಗ 'ಜಾಮೀನಿಗಾಗಿ ಲಂಚ' ಹರಿದಾಡುತ್ತಿರುವ ವಿಷಯ ಕಿವಿಗೆ ಬಿತ್ತೋ ಖಡಕ್ ಜಡ್ಜ್ ನಾಗಮಾರುತಿ ಶರ್ಮಾ ಅವರು ಆ ವಿಷಯವನ್ನು ಗುಟ್ಟಾಗಿ ಮತ್ತೊಬ್ಬ ಖಡಕ್ ಅಧಿಕಾರಿ ಸಿಬಿಐ ಲಕ್ಷ್ಮಿನಾರಾಯಣ ಅವರ ಕಿವಿಗೆ ಹಾಕಿದರಾ? ಏನೋ, ಸಿಬಿಐ ಮರ್ಮ ಬಲ್ಲವರು ಯಾರು?
ಒಟ್ಟಿನಲ್ಲಿ ಇಡೀ ನ್ಯಾಯಾಂಗಕ್ಕೇ ಅಪಚಾರವಾಗುವಂತೆ ಜಡ್ಜಿಗೇ ಲಂಚ ತಿನ್ನಿಸುವ ಪ್ರಕರಣ ನಡೆದೇ ಹೋಯಿತು. ಗಮನಿಸಿ, ಯಾವಾಗ ಜಡ್ಜ್ ನಾಗಮಾರುತಿ ಶರ್ಮಾ ಅವರು ಲಂಚ ತೆಗೆದುಕೊಳ್ಳಲು ನಿರಾಕರಿಸಿದರೋ ತಕ್ಷಣ ಅವರನ್ನು ಆ ಸ್ಥಾನದಿಂದ ವರ್ಗ ಸಹ ಮಾಡಿಸಲಾಗಿದೆ. ಆ ಜಾಗಕ್ಕೆ ಪುಲ್ಲಯ್ಯ, ಆನಂತರ ಜಡ್ಜ್ ಪಟ್ಟಾಭಿ ಬಂದು ಕುಳಿತುಕೊಳ್ಳುತ್ತಾರೆ.
ರೆಡ್ಡಿ ಸೋದರರು ಇಡೀ ನ್ಯಾಯಾಂಗವನ್ನೇ ಐಲುಪೈಲುಗೊಳಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಮೊದಮೊದಲು 5-10 ಕೋಟಿ ಎಂದವರು ಮುಂದೆ ನೂರಾರು ಕೋಟಿಗಳ ಪ್ರಸ್ತಾಪವಿಟ್ಟಾಗ 'ತಾವು ನ್ಯಾಯದೇವತೆಯ ಪುತ್ರರು ಎಂಬುದನ್ನೂ ಮರೆತು ಕಾಸಿಗಾಗಿ ಬಾಯ್ಬಿಡುವ ಹುಲುಮಾನವ' ಎಂಬಂತೆ ಈ ಜಡ್ಜುಗಳು ವರ್ತಿಸುತ್ತಾರೆ. ಹೀಗೆ ರೆಡ್ಡಿಗಳು ಜಡ್ಜುಗಳಿಗೆ ಕಾಳು ಹಾಕಿದ ಪರಿ ನೋಡಿದರೆ ಇಡೀ ನ್ಯಾಯಾಂಗ ವ್ಯವಸ್ಥೆಯೇ ತಲೆತಗ್ಗಿಸುವಂತಾಗಿದೆ.
ಕೊನೆಗೆ ಒಂದೇ ಶಾಲೆಯ ಸಹಪಾಠಿಗಳಾದ ಟಾಪ್-ತ್ರಿ (ಪ್ರಕರಣದಲ್ಲಿ ಪ್ರಸ್ತುತ ಬಂಧನದಲ್ಲಿರುವವರು) ಜಡ್ಜುಗಳು ಪರಸ್ಪರ ತಮ್ಮ ತಮ್ಮಲ್ಲೇ ಕಿತ್ಲಾಡಿಕೊಳ್ಳುತ್ತಾರೆ. ನೂರು ಕೋಟಿಯ ಅಫರ್ ಇದ್ದರೂ ಕೇವಲ 10 ಕೋಟಿಗೆ ಬಾಯ್ಬಿಟ್ಟ ಜಡ್ಜ್ ಪಟ್ಟಾಭಿ ಬಗ್ಗೆ ಖದೀಮ ಜಡ್ಜುಗಳ ಮಧ್ಯೆಯೇ ಅಪನಂಬಿಕೆ ಶುರುವಾಗುತ್ತದೆ. ಮತ್ತು ಮುನಿಸಿಗೂ ಕಾರಣವಾಗುತ್ತದೆ. ಈ ಮಧ್ಯೆ, ಡೀಲ್ ತನ್ನ ಕೈತಪ್ಪಿತು ಎಂದು ಮತ್ತೊಬ್ಬ ಜಡ್ಜ್ ಬೊಂಬಡಾ ಹೊಡೆಯುತ್ತಾನೆ.
ಹೀಗೆ ಖುದ್ದು ಜಡ್ಜುಗಳು ಕಿತ್ಲಾಡಿಕೊಳ್ಳುತ್ತಿರುವಾಗಲೇ ಸಿಬಿಐ ಲಕ್ಷಿನಾರಾಯಣಗೆ ಎಲ್ಲೋ ಏನೋ ನಡೀತಿದೆ ಎಂಬುದುರ ವಾಸನೆ ಬಡಿಯುತ್ತದೆ. ಮುಂದೆ ಏನಾಯಿತು ಎಂದು ಖುದ್ದಾಗಿ ಅ ಜಡ್ಜುಗಳೇ ಒಬ್ಬೊಬ್ಬರಾಗಿ ಕಟಕಟೆಯಲ್ಲಿ ನಿಂತು ಈಗ ಬಾಯ್ಬಿಡುತ್ತಿದ್ದಾರೆ. ತೆಲುಗು ಸಿನಿಮಾಗೆ ಸಖತ್ ಸರಕು ಆಗಬಹುದಾದ ಈ ಸಿನಿಮಾ ಇನ್ನೂ ಈಗಷ್ಟೇ ಆರಂಭವಾಗಿದೆ. ಮುಕ್ತಾಯ !?