ಯಡಿಯೂರಪ್ಪರ ಲಕ್ಕಿ ಮನೆ ಕಳೆದುಕೊಂಡ ಶೋಭಾ
ನನಗೆ ಬಂಗಲೆ ಬೇಕಾಗಿಲ್ಲ. ಚಿಕ್ಕಮನೆಯಲ್ಲೇ ಇರುತ್ತೇನೆ.. ಇಂಥದ್ದೇ ಮನೆ ಬೇಕು ಎಂದು ಒತ್ತಾಯಿಸುವುದಿಲ್ಲ. ಮನೆ ಖಾಲಿ ಇದ್ದರೆ ಮಾತ್ರ ಮುಖ್ಯಮಂತ್ರಿ ನೀಡುತ್ತಾರೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನಿವಾಸವನ್ನು ತಮಗೇ ನೀಡುವಂತೆ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸೋಮವಾರ ಮನವಿ ಮಾಡಿದ್ದರು. ಶೋಭಾ ಮನವಿಯನ್ನು ಪುರಸ್ಕರಿಸಿರುವ ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಅವರಿಗೆ ರೇಸ್ ಕೋರ್ಸ್ ರಸ್ತೆಯ ನಿವಾಸವನ್ನು ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ರೇಸ್ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ಈ ಹಿಂದೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಿದ್ದರು. ಯಡಿಯೂರಪ್ಪನವರು ವಾಸವಿದ್ದ ರೇಸ್ಕೋರ್ಸ್ ಬಂಗಲೆಯನ್ನು ಇದೀಗ ಅವರದೇ ಬಣದ ಸಚಿವರಾದ ಶೋಭಾ ಕರಂದ್ಲಾಜೆಗೆ ನೀಡುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ, ಜಾರಕಿಹೊಳಿ ಅವರು ಮನೆ ಗೃಹಪ್ರವೇಶಕ್ಕೆ ಸಜ್ಜಾಗಿದ್ದಾರೆ.
ಯಡಿಯೂರಪ್ಪ ಅವರ ಅದೃಷ್ಟದ ಮನೆ ಎಂದೇ ಪರಿಗಣಿಸಲಾಗಿದ್ದ ರೇಸ್ ಕೋರ್ಸ್ ನಿವಾಸವನ್ನು ಇತ್ತೀಚೆಗೆ ಯಡಿಯೂರಪ್ಪ ಅವರು ಖಾಲಿ ಮಾಡಿದ್ದರು. 2006ರಿಂದ ಈ ಮನೆಯಲ್ಲಿ ವಾಸವಾಗಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ 1.7 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಳಿಸಿದ್ದರು.
ನಂತರ, ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಯಡಿಯೂರಪ್ಪ ಅವರ ಮನೆ ನೀಡುವಂತೆ ಸಿಎಂ ಸದಾನಂದ ಗೌಡರಿಗೆ ಮನವಿ ಸಲ್ಲಿಸಿದ್ದರು. ಅದರಂತೆ, ಸದಾನಂಡ ಗೌಡ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ (ಜು.10) ಜಾರಕಿಹೊಳಿ ಅವರಿಗೆ ಮನೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದರು.
ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಜಾರಕಿಹೊಳಿ ಅವರಿಗೆ ಹಂಚಿಕೆ ಮಾಡಿದ್ದ ಆದೇಶವನ್ನು ರದ್ದುಗೊಳಿಸಿ ಸಚಿವೆ ಶೋಭಾ ಕರಂದ್ಲಾಕೆ ಅವರಿಗೆ ಮನೆ ಹಂಚಿಕೆ ಮಾಡಿದ್ದರು. ಜಾರಕಿಹೊಳಿ ಹಾಗೂ ಕರಂದ್ಲಾಜೆ ಪರ ಸಿಬ್ಬಂದಿಗಳು ಮನೆ ಬೀಗಕ್ಕಾಗಿ ಒಂದು ಸುತ್ತಿನ ಕಿತ್ತಾಟ ನಡೆಸಿದ್ದು ಆಗಿತ್ತು. ಇದಕ್ಕೆ ಮುಕ್ತಾಯ ಹಾಡುವಂತೆ ಶುಕ್ರವಾರ ಮನೆ ಬೀಗದ ಕೈ ಹಾಗೂ ಜವಾಬ್ದಾರಿಯನ್ನು ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಲಾಗಿದೆ.