ಮುತಾಲಿಕ್ ರಾಜ್ಯಕ್ಕೆ ಕಾಲಿಟ್ಟರೆ ಬಂಧಿಸಿ : ಬಿಜೆಪಿ ಸರ್ಕಾರ
ಮುಖ್ಯಮಂತ್ರಿ ಮನೋಹರ್ ಪಾರಿಕ್ಕಾರ್ ಅವರು ಗೋವಾ ಅಸೆಂಬ್ಲಿಯಲ್ಲಿ ಮಾತನಾಡಿ Criminal Procedure Code 144 ಅನ್ವಯ ಮುತಾಲಿಕ್ ಅವರಿಗೆ ತಡೆ ಒಡ್ಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
'ಆತ ಗೋವಾಗೆ ಬಂದರೆ ತಕ್ಷಣವೇ ಬಂಧಿಸಲಾಗುವುದು. ಆ ಪ್ರದೇಶಕ್ಕೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವರದಿ ಅನ್ವಯ ಜಿಲ್ಲಾಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಳ್ಳಲಿದ್ದಾರೆ ಎಂದು ಮನೋಹರ್ ಪಾರಿಕ್ಕಾರ್ ಅವರು ವಿಧಾನಸಭೆಯಲ್ಲಿ ಹೇಳಿದರು.
ಸಿಎಂ ಮನೋಹರ್ ಪಾರಿಕ್ಕಾರ್ ಅವರ ಸಂಪುಟ ಕೈಗೊಂಡಿರುವ ಕ್ರಮಕ್ಕೆ ವಿರೋಧ ಪಕ್ಷಗಳು ಕೂಡಾ ಒಮ್ಮತ ವ್ಯಕ್ತಪಡಿಸಿದ್ದು, ಎಲ್ಲರೂ ಸರ್ವಾನುಮತದಿಂದ ಪ್ರಮೋದ್ ಮುತಾಲಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಮುತಾಲಿಕ್ ವಿರುದ್ಧ ತಿರುಗಿ ಬೀಳಲು ಏನು ಕಾರಣ? : ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ ಮುತಾಲಿಕ್, ಶ್ರೀರಾಮಸೇನೆಯ ಬಲಪಂಥೀಯ ಚಿಂತನೆಯುಳ್ಳ ಉಗ್ರವಾದಿ ವಿಭಾಗವನ್ನು ಗೋವಾದಲ್ಲಿ ಆರಂಭಿಸುವುದಾಗಿ ಘೋಷಿಸಿದ್ದರು. ಮುತಾಲಿಕ್ ಅವರಿಂದ ಇನ್ನೂ ಕೆಲ ಪ್ರಚೋದನಕಾರಿ ಹೇಳಿಕೆಗಳು ಕೇಳಿ ಬಂದಿತ್ತು. ಮುತಾಲಿಕ್ ಭಾಷಣ ಖಂಡಿಸಿ ಗೋವಾದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಯಾರೋ ಒಬ್ಬ ಮನಸ್ಸಿಗೆ ಬಂದಂತೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಿಡಲು ನಮ್ಮ ಸರ್ಕಾರ ಕಣ್ಮುಚ್ಚಿ ಕುಳಿತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಮನೋಹರ್ ಭರವಸೆ ನೀಡಿದ್ದರು. ಅದರಂತೆ ಸರ್ಕಾರ ಮುತಾಲಿಕ್ ಅವರ ಮೇಲೆ ನಿರ್ಬಂಧ ಹೇರಲು ಮುಂದಾಗಿದೆ.
ಅಷ್ಟೇ ಅಲ್ಲ ಶ್ರೀರಾಮಸೇನೆಯಲ್ಲಿರುವ ಗೋವಾ ಮೂಲದ ಯುವಕರಿಗೂ ಚುರುಕು ಮುಟ್ಟಿಸಲು ಮನೋಹರ್ ಚಿಂತನೆ ನಡೆಸಿದ್ದಾರೆ. ಮುತಾಲಿಕ್ ಅವರನ್ನು ಗೋವಾಗೆ ಕರೆಸಿಕೊಂಡು ಸನಾತನ ಧರ್ಮ ಉದ್ಧಾರದ ಕೆಲಸ ಮಾಡುವ ಹುಚ್ಚು ಕಲ್ಪನೆ ಹಲವರಿಗೆ ಇದೆ ಎಂಬುದು ತಿಳಿದು ಬಂದಿದೆ.
ಗೋವಾದಲ್ಲಿ ಮುತಾಲಿಕ್ ಬೆನ್ನ ಹಿಂದೆ ಯಾರಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅದು ಯಾರೇ ಆಗಲಿ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗುವುದು. ಧರ್ಮದ ಹೆಸರಿನಲ್ಲಿ ಗೊಂದಲ ಗಲಭೆ ಸೃಷ್ಟಿಸುವ ಸಂಘಟನೆಗಳು ನಮಗೆ ಬೇಕಿಲ್ಲ ಎಂದು ಪಾರಿಕ್ಕಾರ್ ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಗಮನಕ್ಕೆ ಮುತಾಲಿಕ್ ಅವರ ಗೋವಾ ಪ್ರವೇಶದ ಬಗ್ಗೆ ಫಟೊರ್ಡಾದ ಪಕ್ಷೇತರ ಶಾಸಕ ವಿಜಯ್ ಸರ್ದೇಸಾಯಿ ಅವರು ಮೊದಲಿಗೆ ವಿಷಯ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರದ ಬೆಳೆವಣಿಗೆಯಲ್ಲಿ ಪಕ್ಷಾತೀತವಾಗಿ ಮುತಾಲಿಕ್ ವಿರುದ್ಧ ಗೋವಾ ತಿರುಗಿಬಿದ್ದಿದೆ.