ಸ್ಕಾರ್ಫ್ ವಿವಾದ; ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ
'ಸಮವಸ್ತ್ರವೆಂಬುದು ಯಾವುದೇ ಕೋಮಿನ ವಿದ್ಯಾರ್ಥಿಗಳನ್ನು ಅವಮಾನಿಸುವುದಲ್ಲ ಬದಲಾಗಿ ವಿದ್ಯಾರ್ಥಿಗಳ ನಡುವಿನ ಆರ್ಥಿಕ, ಸಾಮಾಜಿಕ ಮತ್ತು ಜಾತಿಯ ಅಸಮಾನತೆಯನ್ನು ಹೋಗಲಾಡಿಸುವ ವೈಜ್ಞಾನಿಕ ವಿಧಾನ. ಆದರೆ ರಾಮಕುಂಜೇಶ್ವರ ಕಾಲೇಜ್ ನಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವ ಉದ್ದೇಶದಿಂದ ಕೆಲವೊಂದು ಕೋಮುವಾದಿ ಬಾಹ್ಯ ಶಕ್ತಿಗಳು ವಿದ್ಯಾರ್ಥಿಗಳನ್ನು ಪ್ರಚೋದಿಸುವ ಮೂಲಕ ಪ್ರತಿಭಟನೆ ನಡೆಸಲು ಪ್ರೇರಣೆ ನೀಡಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವ ಅಧ್ಯಕ್ಷ ಕೆ. ರಾಮ್ಭಟ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರ ಸಭೆಯ ನಂತರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮ್ ಭಟ್, 'ಸ್ಕಾರ್ಪ್ ವಿಚಾರವು ಕೇವಲ ರಾಮಕುಂಜ ಕಾಲೇಜಿಗೆ ಮಾತ್ರ ಸೀಮಿತವಾಗಿರುವ ಸಮಸ್ಯೆಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ರಾಜ್ಯಾದ್ಯಂತ ಉದ್ಭವಿಸುವ ಸಾಧ್ಯತೆಯಿದೆ. ಎಲ್ಲಾ ವಿದ್ಯಾ ಸಂಸ್ಥೆಗಳು ನ್ಯಾಯದ ವಿರುದ್ಧ ವಾಗಿರುವ ಇಂತಹ ಪ್ರತಿಭಟನೆಯನ್ನು ಒಟ್ಟಾಗಿ ಎದುರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ' ಎಂದರು.
ಕೆಎಫ್ಡಿ ಕೈವಾಡ?: ಶಿರವಸ್ತ್ರ(ಸ್ಕಾರ್ಫ್) ವಿಚಾರದಲ್ಲಿ ರಾಮಕುಂಜ ಕಾಲೇಜ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕೆಎಫ್ಡಿಯ ಕೈವಾಡವಿದೆ ಎಂದ ರಾಮ್ಭಟ್, ಸಮಾಜದಲ್ಲಿ ಅಸಮಾನತೆ ಸೃಷ್ಟಿಸುವ ಇಂಥ ಸಂಘಟನೆಗಳ ಪ್ರಚೋದನೆ ಮತ್ತು ಒತ್ತಡಕ್ಕೆ ಮಣಿದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಈ ದುಡುಕುತನಕ್ಕೆ ಕೆಲ ಪೋಷಕರು ಬೆಂಬಲಿಸಿರುವುದು ವಿಷಾದನೀಯ. ಉತ್ತಮ ಶಿಕ್ಷಣ ಬಯಸುವವರು ಯಾರೂ ಈ ಪ್ರತಿಭಟನೆಗೆ ಬೆಂಬಲ ನೀಡ ಬಾರದು ಎಂದು ರಾಮ್ಬ್ ಭಟ್ ಕೋರಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡನೆ: ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜ್ನಲ್ಲಿ ಶಿರವಸ್ತ್ರ ಧರಿಸಿದ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಹೊರಹಾಕಿರುವುದು ಖಂಡನೀಯ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತುಫೈಲ್ ಹೇಳಿದ್ದಾರೆ.
ಕಾಲೇಜು ಆವರಣದ ಗೇಟಿಗೆ ಬೀಗ ಜಡಿದು ವಿದ್ಯಾರ್ಥಿಗಳಿಗೆ ಒಳ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ, ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿ 10 ವಿದ್ಯಾರ್ಥಿಗಳನ್ನು ಗೇಟಿನಿಂದ ಹೊರದಬ್ಬ ಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗಿದ್ದು, ಇದರಿಂದಾಗಿ ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿದೆ. ಮುಸ್ಲಿಂ ಧಾರ್ಮಿಕ ನಂಬಿಕೆ ಯಂತೆ ಶಿರವಸ್ತ್ರ ಧಾರಣೆ ಕಡ್ಡಾಯವಾಗಿದ್ದು, ಇದಕ್ಕೆ ಅವಕಾಶ ನೀಡುವಂತೆ ಇಲ್ಲಿನ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಗೆ ಹಿಂದೆಯೇ ಮನವಿ ಸಲ್ಲಿಸಿದ್ದರು ಎಂದು ಆರೋಪಿಸಿದರು.
ಮಾಜಿ ಶಿಕ್ಷಣ ಸಚಿವ ಬಿ. ಎ.ಮೊಯ್ದಿನ್ ಅವರು ಮಾತನಾಡಿ, 'ಸ್ಕಾರ್ಫ್ ಎನ್ನುವುದು ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತ ವಾದುದಲ್ಲ. ಅದು ಭಾರತದ ಸಾಂಪ್ರ ದಾಯಿಕ ಧಿರಿಸಾಗಿದೆ. ಸ್ಕಾರ್ಫ್ ಎಂದರೆ ಮುಖ ಮುಚ್ಚಿಕೊಳ್ಳುವ ವಸ್ತ್ರವಲ್ಲ. ಬದಲಿಗೆ ತಲೆಕೂದಲನ್ನು ಮುಚ್ಚಿಕೊಳ್ಳುವ ಧಿರಿಸು. ಶಾಲೆಯ ಸಮವಸ್ತ್ರಕ್ಕೆ ವಿದ್ಯಾರ್ಥಿಗಳು ಗೌರವ ಕೊಡುವುದು ಅತ್ಯಗತ್ಯ. ಆದುದ ರಿಂದ ಸಮವಸ್ತ್ರಕ್ಕೆ ಪೂರಕವಾಗಿಯೇ ಸ್ಕಾರ್ಫ್ನ್ನು ಧರಿಸಲಿ' ಎಂದು ಹೇಳಿದರು.
ಉಪ್ಪಿನಂಗಡಿಯೆನ್ನುವುದು ಸರ್ವ ಧರ್ಮ ಸಮನ್ವಯಕ್ಕೆ ಹೆಸರಾದ ಸ್ಥಳ. ಸಂಗಮ ಕ್ಷೇತ್ರವೆಂದು, ದಕ್ಷಿಣದ ಕಾಶಿಯೆಂದು ಇದು ಹೆಸರು ಪಡೆದಿದೆ. ಇಂತಹ ಸ್ಥಳದಲ್ಲಿ ಅನಾವಶ್ಯಕ ರಾಜಕೀಯ ಸೃಷ್ಟಿಸುವುದು ಸರಿಯಲ್ಲ ಎಂದಿ ರುವ ಮೊಯ್ದಿನ್, ಮುಸ್ಲಿಂ ಮಹಿಳೆಯರು ಶಾಲೆ, ಕಾಲೇಜುಗಳಿಗೆ ಕಾಲಿಡುತ್ತಿ ರುವುದೇ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಬೇಕು. ಅವರಿಗೆ ಕಲಿಯಲು ಇನ್ನಷ್ಟು ಪ್ರೋತ್ಸಾಹವನ್ನು ಕೊಡಬೇಕು.
ಹೀಗಿರುವಾಗ, ಕೇವಲ ಸ್ಕಾರ್ಫ್ ಎನ್ನುವ ತಲೆ ವಸ್ತ್ರದ ಹೆಸರಲ್ಲಿ ಅವರನ್ನು ತಡೆಯುವುದು ಸರಿಯಲ್ಲ. ಡ್ರೆಸ್ ಕೋಡ್ ಎನ್ನುವುದು ಯಾವುದೇ ಶಾಲೆ, ಕಾಲೇಜುಗಳಿಗೆ ಅನ್ವಯವಾಗುವುದಿಲ್ಲ. ಅವರು ಕಾಲೇಜಿನೊಳಗೆ ಬುರ್ಖಾ ಹಾಕಿಕೊಂಡು ಬಂದಿದ್ದ್ದರಾದರೆ ನಾನ ದನ್ನು ವಿರೋಧಿಸುತ್ತಿದ್ದೆ. ಆದರೆ ಭಾರತ ದಲ್ಲಿ ತಲೆಮುಚ್ಚುವುದು ಕೇವಲ ಮುಸ್ಲಿಮರು ಮಾತ್ರವಲ್ಲ, ಹಿಂದೂಗಳೂ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಈ ಕ್ಷುಲ್ಲಕ ಕಾರಣವನ್ನು ಮುಂದಿಟ್ಟು ರಾಜಕೀಯ ನಡೆಸುವುದು ಸರಿಯಲ್ಲ ಎಂದರು.