ಸದ್ಯಕ್ಕೆ ನಂದಿನಿ ಬೆಲೆ ಏರಿಕೆ ಇಲ್ಲ: ಸೋಮಶೇಖರ
ಬಳ್ಳಾರಿಯಲ್ಲಿ ಮಂಗಳವಾರ(ಜು.17) ಸುದ್ದಿಗಾರರೊಂದಿಗೆ ಮಾತನಾಡಿರುವ ಸೋಮಶೇಖರ ರೆಡ್ಡಿ, ನಂದಿನಿ ಹಾಲಿನ ಬೆಲೆ ಏರಿಕೆಯಾಗುತ್ತದೆ ಎಂದು ಕೇಳಿಬಂದಿರುವ ವರದಿಗಳನ್ನು ಅಲ್ಲಗಳೆದರು. ನಾಲ್ಕು ತಿಂಗಳ ಕಾಲ ನಂದಿನಿ ಹಾಲಿನ ಬೆಲೆಯನ್ನು ಏರಿಕೆ ಮಾಡುವ ಸಾಧ್ಯತೆಯಿಲ್ಲ ಎಂದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಸಮಾಲೋಚನೆ ನಡೆಸಿ ಹಾಲಿನ ಬೆಲೆ ಏರಿಕೆ ಮಾಡದಿರಲು ನಿರ್ಧಾರಕ್ಕೆ ಬರಲಾಗುವುದು. ನಂದಿನಿ ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂಬ ವಾದ ನಿಜವಾದರೂ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸೋಮಶೇಖರ ರೆಡ್ಡಿ ಹೇಳಿದರು.
ರಾಜ್ಯದ 136 ತಾಲೂಕುಗಳಲ್ಲಿ ಬರಗಾಲವಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಉತ್ಪಾದನೆ ಕೂಡಾ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕೆಲವು ಹಾಲು ಒಕ್ಕೂಟಗಳು ಹಾಲಿನ ದರವನ್ನು 3 ರು. ಏರಿಕೆ ಮಾಡುವಂತೆ ಒತ್ತಾಯಿಸುತ್ತಿದೆ. ಆದರೆ, ಸದ್ಯಕ್ಕಂತೂ ಬೆಲೆ ಏರಿಕೆ ಮಾಡುವ ಆಲೋಚನೆ ಕೆಎಂಎಫ್ ಮುಂದಿಲ್ಲ ಎಂದು ಸೋಮಶೇಖರ ರೆಡ್ಡಿ ಹೇಳಿದರು.
ಬರದ ಹಿನ್ನೆಲೆಯಲ್ಲಿ ಮೇವು ಮತ್ತು ಇತರ ವಸ್ತುಗಳ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ ಹೀಗಾಗಿ ನೀಲಿ ಹಾಗೂ ಹಸಿರು ಪ್ಯಾಕೆಟ್ನಲ್ಲಿ ಮಾರಾಟವಾಗುವ ನಂದಿನಿ ಹಾಲಿನ ಬೆಲೆ 3 ರೂ. ಹೆಚ್ಚಳ ಮಾಡುವಂತೆ ಬೆಲೆ ಏರಿಕೆ ಕುರಿತು ಜೂ.27 ರಂದು ನಡೆದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿತ್ತು. ಅದರಂತೆ ನಂದಿನಿ ಹಾಲು ಲೀಟರ್ ಗೆ 3 ರು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು.
ಕಳೆದ ನಾಲ್ಕು ತಿಂಗಳಿಂದ ದಾಖಲೆ ಪ್ರಮಾಣದಲ್ಲಿ ಹಾಲು ಖರೀದಿ ಪ್ರಮಾಣ ಹೆಚ್ಚಿರುವುದರಿಂದ ಕರ್ನಾಟಕ ಹಾಲು ಫೆಡರೇಶನ್ (ಕೆಎಂಎಫ್) ತನ್ನ ಮಾರಾಟದ ದ್ರವೀಕೃತ ಹಾಲು ಮಾರಾಟದ ಗುರಿ ಶೇ 20ರಷ್ಟು ಹೆಚ್ಚಿಸಿಕೊಂಡಿದೆ ಎಂದು ಕೆಎಂಎಫ್(ಮಾರುಕಟ್ಟೆ) ವಿಭಾಗದ ಮುಖ್ಯಸ್ಥ ಡಿ ಶ್ರೀನಾಥ್ ಹೇಳಿದ್ದರು.
ಈಗ ದಿನನಿತ್ಯ 4ರಿಂದ 5 ಲಕ್ಷ ಲೀಟರ್ ಹಾಲು ಹೆಚ್ಚು ಉಳಿಕೆಯಾಗುತ್ತಿತ್ತು, ಖರೀದಿಯಲ್ಲಾಗಿರುವ ಅನಿರೀಕ್ಷಿತ ಬೆಳವಣಿಗೆಯಿಂದ 14 ಲಕ್ಷ ಲೀಟರ್ ಹಾಲು ಒಂದೆಡೆ ಶೇಖರಣೆಯಾಗುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ 43 ಲಕ್ಷ ಕಿಲೋ ಹಾಲು ಖರೀದಿ ಮಾಡಲಾಗುತ್ತಿದ್ದರೆ, ಈಗ 52 ಲಕ್ಷ ಕಿಲೋಗೆ ಹೆಚ್ಚಿದೆ ಎಂದು ಫೆಡರೇಶನ್ ವರದಿ ಮಾಡಿದೆ.