'ನಾನೂ ಹಾದರ ಮಾಡಿದವನೆ, ಆದ್ರೆ ತಗ್ಲಾಕ್ಕೊಂಡೆ'
ಇದರಿಂದ ಹಾಲಿನಂತಹ ಹಾಲಪ್ಪ ಕೋಲಾಹಲವೆಬ್ಬಿಸುವಂತಹ ಮಾತುಗಳನ್ನಾಡಿದ್ದಾರೆ. ಇತ್ತ ಸಚಿವ ಮಹತ್ವಾಕಾಂಕ್ಷಿ ಗೋಪಾಲಕೃಷ್ಣ ಅವರು ಕಾಮುಕ ಪ್ರಸ್ತಾಪ ಮಾಡಿರುವಾಗಲೇ ಭುಜ ಮುಟ್ಟಿನೋಡಿಕೊಂಡಿರುವ ಹಾಲಪ್ಪ, ತಮ್ಮ ಬೆಂಬಲಿಗರೊಬ್ಬರ ಜತೆ ನಡೆಸಿದ್ದಾರೆ ಎನ್ನಲಾದ ದೂರವಾಣಿ ಮಾತುಕತೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಇದರಿಂದ, 'ಕಾಮುಕನಿಂದ ನಾನು ಸಚಿವ ಸ್ಥಾನ ವಂಚಿತನಾದೆ' ಎಂದು ಸಾಗರದ ಬೇಳೂರು ಗೋಪಾಲಕೃಷ್ಣ ಕಳೆದ ವಾರ ಬಿಟ್ಟ 'ಕಾಮ'ಬಾಣ ಸರಿಯಾಗಿಯೇ ನಾಟಿದೆ ಎನ್ನಲಾಗಿದೆ.
ಏನಾಯಿತೆಂದರೆ ಎರಡು ತಿಂಗಳ ಹಿಂದೆ ಸೊರಬ ಸಮೀಪದ ಶ್ರೀಪಾದ ಹೆಗಡೆ ಮನೆಯ ಮೇಲೆ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ ಕೆಲವರನ್ನು ಬಂಧಿಸಿದ್ದರು. ಆಗ ಶ್ರೀಪಾದ ಸೋದರ ಹಾಗೂ ಬಿಜೆಪಿ ಕಾರ್ಯಕರ್ತ ಮಹಾಬಲೇಶ್ ಅವರು ಮಾಜಿ ಸಚಿವ ಹಾಲಪ್ಪ ಅವರ ಮೊಬೈಲ್ಗೆ ಕರೆ ಮಾಡಿ ಪೊಲೀಸರಿಗೆ ಈ ಪ್ರಕರಣ ಕೈ ಬಿಡುವಂತೆ ಸೂಚಿಸಲು ಕೋರಿಕೆ ಸಲ್ಲಿಸಿದ್ದರು.
ಅನುಭವಾಮೃತ: ಈಗ ಬಹಿರಂಗವಾದ ದೂರವಾಣಿ ಸಂಭಾಷಣೆ ಪ್ರಕಾರ, ತಕ್ಷಣವೇ ಪೊಲೀಸರಿಗೆ 'ಆದೇಶ' ನೀಡುವಂತೆ ಮಹಾಬಲೇಶ್ ಒತ್ತಡ ಹಾಕುತ್ತಾರೆ. ಆ ಸಂದರ್ಭದಲ್ಲಿ ಇಸ್ಪೀಟ್ನಂತಹ ಸಣ್ಣ ವಿಚಾರಕ್ಕೆ ಕೇಸು ಯಾಕೆ? ಬಂಧನ ಯಾಕೆ? ಎಂದೆಲ್ಲ ಮಹಾಬಲ ಅವಲತ್ತುಕೊಳ್ಳುತ್ತಾರೆ. ಆಗ ಹೊರಬೀಳುತ್ತೆ ಅನುಭವಾಮೃತ. ಹಾಲಪ್ಪ ತಮ್ಮದೇ ಅತ್ಯಾಚಾರ ಕೇಸನ್ನು ಉಲ್ಲೇಖಿಸುತ್ತಾರೆ.
'ಯಾರ್ ಯಾರೋ ಏನೇನೋ ಹಾದರ ಮಾಡುತ್ತಾರೆ. ನಾನೂ ಮಾಡಿದವನೆ. ಆದರೆ ನಾನು ಮಾತ್ರ ಸಿಕ್ಕಿ ಹಾಕಿಕೊಂಡೆ...'ಎಂದು ಪರೋಕ್ಷವಾಗಿ ತಮ್ಮ ಅತ್ಯಾಚಾರ ಕೃತ್ಯವನ್ನು ಒಪ್ಪಿಕೊಂಡಂತೆ ಹೇಳಿದ್ದಾರೆ. ಅತ್ಯಾಚಾರ ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿಯೇ ದೂರವಾಣಿ ಸಂಭಾಷಣೆ ಹೊರ ಬಿದ್ದಿದೆ. ಇದರಿಂದ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೋ ಎಂಬ ಕುತೂಹಲ ಮೂಡಿದೆ.