ಉಪರಾಷ್ಟ್ರಪತಿ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿ ಅನ್ಸಾರಿ
ಪ್ರಧಾನಿ ಮನಮೋಹನ್ ಸಿಂಗ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪ್ರಧಾನಿ ಮನೆಯಲ್ಲಿ ಯುಪಿಎ ಅಂಗಪಕ್ಷಗಳು ಸಭೆ ಸೇರಿ ಅನ್ಸಾರಿ ಅವರನ್ನು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ತಮ್ಮ ತಮ್ಮ ಅನುಮತಿ ಸೂಚಿಸಿದೆ.
ತೃಣಮೂಲ ಕಾಂಗ್ರೆಸ್ ಮಾತ್ರ ಅನ್ಸಾರಿ ಮರು ಆಯ್ಕೆಗೆ ವಿರೋಧ ಪಕ್ಷ ಪಡಿಸಿದೆ. ಪಕ್ಷದ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಭಾನುವಾರ ( ಜು 15) ತಮ್ಮ ಅಂತಿಮ ನಿಲುವು ಪ್ರಕಟಿಸಲಿದ್ದಾರೆ. ಟಿಎಂಸಿ ಗೋಪಾಲಕೃಷ್ಣ ಗಾಂಧಿ ಅಥವಾ ಕೃಷ್ಣ ಬೋಸ್ ಅವರನ್ನು ಕಣಕ್ಕಿಳಿಸಬೇಕೆಂದು ಒತ್ತಾಯಿಸಿತ್ತು.
ಎನ್ಸಿಪಿಯ ಶರದ್ ಪವಾರ್ ಸಭೆಯಲ್ಲಿ ಭಾಗವಹಿಸದಿದ್ದರೂ ಪಕ್ಷ ಅನ್ಸಾರಿ ಅವರನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
75 ವರ್ಷದ ಅನ್ಸಾರಿ ಈ ಹಿಂದೆ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಕೂಡಾ ಸೇವೆ ಸಲ್ಲಿಸಿದ್ದರು. ಉಪರಾಷ್ಟ್ರಪತಿ ಹುದ್ದೆಗೆ 2007ರಲ್ಲಿ ನಡೆದ ಚುನಾವಣೆಯಲ್ಲಿ ಅನ್ಸಾರಿ NDA ಮೈತ್ರಿಕೂಟದ ನಜ್ಮಾ ಹೆಪ್ತುಲ್ಲಾ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು.
ಪ್ರಧಾನಿ ಸಿಂಗ್ ಆಡ್ವಾಣಿ, ಸುಷ್ಮಾ ಸ್ವರಾಜ್ ಅವರ ಜೊತೆ ಮಾತುಕತೆ ನಡೆಸಿ ಅನ್ಸಾರಿ ಅವರನ್ನು ಬೆಂಬಲಿಸುವಂತೆ ಕೋರಿದ್ದಾರೆ. ಆದರೆ ಬಿಜೆಪಿ ಕಡೆಯಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಸ್ಪರ್ಧೆಯಲ್ಲಿ ಗೆಲ್ಲಲು 396 ವೋಟಿನ ಅವಶ್ಯಕತೆಯಿದ್ದು ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲವಿಲ್ಲದಿದ್ದರೂ ಅನ್ಸಾರಿ ಅವರಿಗೆ 444 ವೋಟು ಅನಾಯಾಸವಾಗಿ ಲಭಿಸಲಿದೆ.