ಒಲಿಂಪಿಕ್ಸ್ ಗೆ ತೆರಳಲು ಕಲ್ಮಾಡಿಗೆ ಅನುಮತಿ
ಜುಲೈ 27 ರಿಂದ ಆಗಸ್ಟ್ 12ರ ತನಕ ನಡೆಯುವ ವಿಶ್ವದ ಜನಪ್ರಿಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸುರೇಶ್ ಕಲ್ಮಾಡಿ ಅವರು ಕೋರ್ಟ್ ಅನುಮತಿ ಕೋರಿದ್ದರು. ಶುಕ್ರವಾರ ಕಲ್ಮಾಡಿ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾ. ತಲ್ವಂತ್ ಸಿಂಗ್ ಅವರು ಕಲ್ಮಾಡಿಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ 10 ಲಕ್ಷ ರುಪಾಯಿ ಬಾಂಡ್ ಹಾಗೂ ಅಷ್ಟೇ ಮೊತ್ತದ ಭದ್ರತೆ ನೀಡಲು ಸೂಚಿಸಿದ್ದಾರೆ.
ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಫೆಡರೇಷನ್(IAAF) ನ ಸದಸ್ಯರಾಗಿರುವ ಕಲ್ಮಾಡಿ ಅವರು ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಹಾಜರಿರುವುದಾಗಿ ಭರವಸೆ ನೀಡಿದ್ದಾರೆ. ಬಹುಕೋಟಿ ಕಾಮನ್ ವೆಲ್ತ್ ಗೇಮ್ಸ್ ಹಗರಣದ ಪ್ರಮುಖ ಆರೋಪಿಯಾಗಿರುವ ಕಲ್ಮಾಡಿ ಅವರು ಒಲಿಂಪಿಕ್ಸ್ ಗೆ ತೆರಳುವುದರ ಬಗ್ಗೆ ಕ್ರೀಡಾ ಸಚಿವ ಅಜಯ್ ಮಾಕೆನ್ ಅವರು ಅಕ್ಷೇಪವ್ಯಕ್ತಪಡಿಸಿದ್ದರು.
ಬಹುಕೋಟಿ ಕಾಮನ್ ವೆಲ್ತ್ ಕ್ರೀಡಾಕೂಟ ಹಗರಣದ ಆರೋಪಿ ಸಂಸದ ಸುರೇಶ್ ಕಲ್ಮಾಡಿ ಅವರಿಗೆ ದೆಹಲಿ ಹೈಕೋರ್ಟ್ ಜನವರಿ 19, 2012 ರಂದು ಜಾಮೀನು ಮಂಜೂರು ಮಾಡಿತ್ತು.
ಭ್ರಷ್ಟಾಚಾರದ ಆರೋಪದ ಮೇಲೆ ಸುರೇಶ್ ಅವರನ್ನು ಬಂಧಿಸಲಾಗಿತ್ತು. ಕಾಮನ್ ವೆಲ್ತ್ ಗೇಮ್ಸ್ ಆಯೋಜಕ ಸಮಿತಿಯ ಅಧ್ಯಕ್ಷರಾಗಿದ್ದ ಕಲ್ಮಾಡಿ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದ ಬಗ್ಗೆ ಆರೋಪಗಳು ಕೇಳಿ ಬಂದಿತ್ತು.
ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿ ಸುಮಾರು 10 ತಿಂಗಳುಗಳ ಕಾಲ ತಿಹಾರ್ ಜೈಲಿನಲ್ಲಿ ಕಾಲ ಕಳೆದಿದ್ದರು. 5 ಲಕ್ಷ ಶ್ಯೂರಿಟಿ ನೀಡಿದ ಮೇಲೆ ಕಲ್ಮಾಡಿ ಜೈಲಿನಿಂದ ಹೊರ ಬಿದ್ದಿದ್ದರು.
ಪುಣೆ ಮಾಜಿ ಸಂಸದ ಮತ್ತು ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಬುದ್ಧಿಮಾಂದ್ಯತೆ ರೋಗದಿಂದ ಬಳಲುತ್ತಿರುವುದನ್ನು ವೈದ್ಯರು ಖಚಿತಪಡಿಸಿದ್ದರು.
67 ವರ್ಷದ ಸುರೇಶ್ ಕಲ್ಮಾಡಿ ಅವರಿಗೆ ಮರೆವಿನ ರೋಗ ಪ್ರಾಥಮಿಕ ಹಂತದಲ್ಲಿದ್ದು, ಮುಂದೆ ಅವರು ತಮ್ಮ ಸ್ಮರಣ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ. ಅವರ ವ್ಯಕ್ತಿತ್ವ ಕೂಡಾ ಆಗಾಗ ಬದಲಾಗುತ್ತಿದೆ.
ಕಲ್ಮಾಡಿ ಅವರ ಈ ರೋಗ ಕಾಮನ್ ವೆಲ್ತ್ ಹಗರಣದ ವಿಚಾರಣೆ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನಾರಾಯಣ್ ಜಯಪ್ರಕಾಶ್ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.