ಯಡಿಯೂರಪ್ಪ, ಸೋಮಣ್ಣ ವಿರುದ್ಧ ಲೋಕಾ ತನಿಖೆ
ಜೂನ್ 20ರಂದು ಎಲ್ಲ ಆರೋಪಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರು ಆದೇಶಿಸಿದ್ದರು. ನ್ಯಾಯಾಲಯದ ಆದೇಶದಂತೆ ಯಡಿಯೂರಪ್ಪ, ಸೋಮಣ್ಣ ಮತ್ತಿತರರು ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ಬಿಎಸ್ ಯಡಿಯೂರಪ್ಪ ಹಾಗೂ ವಿ ಸೋಮಣ್ಣ ಅವರಿಗೆ ಜಾಮೀನು ಮಂಜೂರಾಗಿತ್ತು. ಈ ಇಬ್ಬರಲ್ಲದೆ ಸೋಮಣ್ಣ ಅವರ ಪತ್ನಿ ಶೈಲಜಾ, ಲಿಂಗರಾಜು ಹಾಗೂ ಸೋಮಣ್ಣ ಅವರ ಪುತ್ರರ ಮೇಲೂ ಆರೋಪ ಕೇಳಿ ಬಂದಿತ್ತು.
ಆದರೆ, ಜಾಮೀನು ಆದೇಶ ಪ್ರಶ್ನಿಸಿದ ಅರ್ಜಿ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಲಯ ಸೋಮಣ್ಣ ಹಾಗೂ ಅವರ ಪುತ್ರನ ಮೇಲೆ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ ಪಿ ಗಿರೀಶ್ ಅವರಿಗೆ ನ್ಯಾ ಸುಧೀಂದ್ರರಾವ್ ಅವರು ಬುಧವಾರ (ಜು.11) ಮಧ್ಯಾಹ್ನ ಆದೇಶಿಸಿದ್ದಾರೆ.
ಏನಿದು ಪ್ರಕರಣ?: ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಬಳಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ ಇದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಕೀಲ ಎಚ್.ಯೋಗೇಂದ್ರ ಅವರು ಲೋಕಾಯುಕ್ತ ವಿಶೇಷ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದಾರೆ.
ಸರ್ವೇ ನಂ.77ರಲ್ಲಿನ ಸುಮಾರು 33 ಗುಂಟೆ(1 ಗುಂಟೆ =1/40 1 ಎಕರೆ) ಜಮೀನಿಗೆ ದೇವೇಗೌಡ ಎಂಬುವರು ಮಾಲೀಕರಾಗಿದ್ದರು.
ಇದನ್ನು ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡು 2010ರಲ್ಲಿ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ. ಮಾಲೀಕರಿಗೆ ಪರಿಹಾರ ಕೂಡ ನೀಡಲಾಗಿದೆ. ಆದರೆ ಈ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ದೇವೇಗೌಡರ ಪತ್ನಿ ಲಿಂಗಮ್ಮ ಕೋರಿಕೊಂಡರು.
ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವ ಸತ್ಯಾಂಶ ತಿಳಿದಿದ್ದರೂ ಯಡಿಯೂರಪ್ಪನವರು ಇದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಆದೇಶಿಸಿದರು. ನಂತರ ಈ ಜಮೀನನ್ನು ಸೋಮಣ್ಣ ಕುಟುಂಬದ ಒಡೆತನದ ವಿಎಸ್ಎಸ್ ಎಜುಕೇಷನ್ ಟ್ರಸ್ಟ್ಗೆ ಮಾರಾಟ ಮಾಡಲಾಗಿದೆ ಎಂದು ಯೋಗೇಂದ್ರ ಆರೋಪಿಸಿದ್ದಾರೆ. ಈ ದೂರಿನಲ್ಲಿ ಸೋಮಣ್ಣ ಅವರ ಪತ್ನಿ ಶೈಲಜಾ ಹಾಗೂ ಪುತ್ರ ಬಿಎಸ್.ನವೀನ್ ಅವರನ್ನೂ ಆರೋಪಿಯನ್ನಾಗಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ, ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟನ್ನು ತಿರಸ್ಕರಿಸಿದ್ದ ಲೋಕಾಯುಕ್ತ ನ್ಯಾಯಾಧೀಶರು ಎಲ್ಲ ಆರೋಪಿಗಳ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು. ನಾಗದೇವನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ 22 ಗುಂಟೆ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಕಾನೂನುಬಾಹಿರವಾಗಿದೆ ಎಂದು ಸಾಫ್ಟ್ವೇರ್ ಇಂಜಿನಿಯರ್ ರವಿಕೃಷ್ಣಾ ರೆಡ್ಡಿ ಅವರು ದೂರು ದಾಖಲಿಸಿದ್ದರು.