ರೆಡ್ಡಿ ಬೇಲ್ ಡೀಲ್: ಹತ್ತಲ್ಲ ಇಪ್ಪತ್ತು ಕೋಟಿಯದ್ದು
ಈ ಮಧ್ಯೆ, ACBಯು ಮತ್ತೊಬ್ಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಇದೇ ಲಂಚ ಪ್ರಕರಣದಲ್ಲಿ ಮಂಗಳವಾರ ಬಂಧಿಸಿದೆ. ಸೂರ್ಯಪ್ರಕಾಶ ಬಾಬು ಬಂಧಿತ ಉದ್ಯಮಿ. ಜಾಮೀನು ಲಂಚ ಸಂದಾಯದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಇದುವರೆಗೆ ಐವರನ್ನು ಬಂಧಿಸಿದಂತಾಗಿದೆ.
ಜನಾರ್ದನ ರೆಡ್ಡಿಯ ಜಾಮೀನಿಗಾಗಿ KMF ಸೋಮಶೇಖರ ರೆಡ್ಡಿ ಮತ್ತು ಆತನ ಮತ್ತೊಬ್ಬ ಸಂಬಂಧಿ ದಶರಥ ರೆಡ್ಡಿ ಇಬ್ಬರೂ ನನಗೆ 20 ಕೋಟಿ ರುಪಾಯಿ ಹಣ ನೀಡಿದರು ಎಂದು ಯಾದಗಿರಿ ರಾವ್ ಹೇಳಿಕೆ ನೀಡಿದ್ದಾನೆ.
ನನಗೆ ಅನೇಕ ಅಡ್ವೊಕೇಟುಗಳು ಮತ್ತು ಪೊಲೀಸ್ ಅಧಿಕಾರಿಗಳ ಪರಿಚಯವಿದೆ. ಡಿಎಸ್ ಪಿ ಸರ್ವೇಶ್ವರ ರೆಡ್ಡಿಯ ಜಾಮೀನು ವಿಷಯದಲ್ಲೂ ನಾನು ಮಧ್ಯಸ್ಥಿಕೆ ವಹಿಸಿದೆ. ಆದ್ದರಿಂದ ಜನಾರ್ದನ ರೆಡ್ಡಿಗೂ ಜಾಮೀನು ಕೊಡಿಸು ಎಂದು ಸೋಮಶೇಖರ ರೆಡ್ಡಿ ಹೇಳಿದಾಗ ನಾನು ಸಲೀಸಾಗಿ ಒಪ್ಪಿಕೊಂಡೆ ಎಂದು ಯಾದಗಿರಿ ರಾವ್ ತಪ್ಪೊಪ್ಪಿಗೆ ನೀಡಿದ್ದಾನೆ.
ಸರ್ವೇಶ್ವರ ರೆಡ್ಡಿಗೆ ಜಾಮೀನು ದೊರಕಿಸಲು ಕೇವಲ 10 ಲಕ್ಷ ರು. ತೆಗೆದುಕೊಂಡಿದ್ದೆ. ನಿವೃತ್ತ ಜಡ್ಜ್ ಚಲಪತಿ ರಾವ್ ಮಧ್ಯಸ್ಥಿಕೆಯಲ್ಲಿ ಜಡ್ಜ್ ಪಟ್ಟಾಭಿಗೆ 10 ಲಕ್ಷ ತಲುಪಿಸಿ, ಜಾಮೀನು ಲಭ್ಯವಾಗುವಂತೆ ನೋಡಿಕೊಂಡೆ.
ಆದರೆ ಜನಾರ್ದನ ರೆಡ್ಡಿ ಪ್ರಕರಣದಲ್ಲಿ KMF ಸೋಮಶೇಖರ ರೆಡ್ಡಿ ಒಡ್ಡಿದ್ದ ಷರತ್ತುಗಳು ಹೆಚ್ಚಾಗಿದ್ದವು ಮತ್ತು ಅಪಾಯಕಾರಿಯಾಗಿದ್ದವು. ಆದ್ದರಿಂದ ಡೀಲನ್ನು 20 ಕೋಟಿಗೆ ಏರಿಸಿದೆ ಎಂಬ ಸತ್ಯವನ್ನು ಯಾದಗಿರಿ ಬಹಿರಂಗಪಡಿಸಿದ್ದಾನೆ.
ಜಡ್ಜ್ ಪಟ್ಟಾಭಿ ಅವರು ಜನಾರ್ದನ ರೆಡ್ಡಿಗೆ ಜಾಮೀನು ನೀಡುವ ವೇಳೆಗೆ 10 ಕೋಟಿ ಸಂದಾಯ ಮಾಡಿದ KMF ಸೋಮಶೇಖರ ಹೈಕೋರ್ಟಿನಲ್ಲೂ ಜಾಮೀನು ಊರ್ಜಿತವಾದರೆ ಮತ್ತೆ 10 ಕೋಟಿ ರು. ನೀಡುವುದುದಾಗಿ ಹೇಳಿದ್ದರು ಎಂದು ಯಾದಗಿರಿ ಬಾಯ್ಬಿಟ್ಟಿದ್ದಾನೆ.