ಒಕ್ಕಲಿಗ, ಲಿಂಗಾಯತ ಜಗಳದಲ್ಲಿ ಬಡವಾದ ದಲಿತ
ಮಂಗಳವಾರ(ಜು.10) ಹೋಟೆಲ್ ಕ್ಯಾಪಿಟಲ್ ನಲ್ಲಿ ಬಿಜೆಪಿ ಶಾಸಕಾಂಗ ಸಭೆ ವಿಫಲವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ನೂತನ ಶಾಸಕಾಂಗ ನಾಯಕರಾಗಿ ಹಾಗೂ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಎರಡು ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಬಗ್ಗೆ ಇನ್ನೂ ಹೈಕಮಾಂಡ್ ನಾಯಕರು ಗುಟ್ಟು ಬಿಟ್ಟು ಕೊಟ್ಟಿಲ್ಲ.
ಸದಾನಂದ ಗೌಡರು ಮಂಗಳವಾರ ಸಂಜೆ ರಾಜ್ಯಪಾರ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಅಧಿಕೃತವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ನಾಳೆ ಜಗದೀಶ್ ಶೆಟ್ಟರ್ ಅವರು ರಾಜ್ಯದ 27ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶೆಟ್ಟರ್ ಅವರ ಜೊತೆಗೆ 33 ಜನ ಶಾಸಕರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ದಲಿತರಿಗೆ ಅನ್ಯಾಯ: ಜಾತಿ ರಾಜಕೀಯ ಮತ್ತು ಸಿಎಂ, ಡಿಸಿಎಂ ಪಟ್ಟಕ್ಕಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರು ಕಚ್ಚಾಡುತ್ತಿರುವ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಸ್ಥಾನವನ್ನು ಗೋವಿಂದ ಕಾರಜೋಳ ಅವರಿಗೆ ನೀಡಬೇಕು ಎಂದು ಹೈಕಮಾಂಡಿಗೆ ಮಾದಿಗ ದಂಡೋರ ಸಮಿತಿಗೆ ಆಗ್ರಹಿಸಿದೆ.
ಗೋವಿಂದ ಕಾರಜೋಳ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಮಾದಿಗ ದಂಡೋರ ಸಮಿತಿ ಮುಖ್ಯಸ್ಥ ಪಾವಗಡ ರಮೇಶ್ ಎಚ್ಚರಿಸಿದ್ದಾರೆ.
ದಲಿತರಿಗೆ ಒಕ್ಕಲಿಗರ ಬೆಂಬಲ: ಸದಾನಂದ ಗೌಡರನ್ನು ಸಿಎಂ ಆಗಿ ಮುಂದುವರೆಸಬೇಕು ಎಂದು ಪಟ್ಟು ಹಿಡಿದು ಕೂತಿರುವ ಪಟ್ಟನಾಯಕನಹಳ್ಳಿಯ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಅವರು ಒಕ್ಕಲಿಗರಿಗೆ ಪಟ್ಟ ಸಿಗದಿದ್ದರೆ, ದಲಿತರಿಗೆ ಸ್ಥಾನ ನೀಡಿ ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜ್ಯ ರಾಜಕೀಯದಲ್ಲಿ ಬದಲಾವಣೆ ಬೇಕಾದರೆ ಒಕ್ಕಲಿಗರ ಬದಲು ದಲಿತ ಮುಖಂಡರನ್ನು ಉನ್ನತ ಸ್ಥಾನದಲ್ಲಿ ಕೂರಿಸಿ ಸಮಾನತೆ ಮೆರೆಯಲು ಹೈಕಮಾಂಡ್ ಗೆ ಅವಕಾಶವಿದೆ. ಒಕ್ಕಲಿಗರನ್ನು ಕೆಳಗಿಳಿಸಿ ಲಿಂಗಾಯತರನ್ನು ಕೂರಿಸಿದರೆ ಸಹಿಸಲು ಸಾಧ್ಯವಿಲ್ಲ ಎಂದು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿಗಳು ಹೇಳಿದ್ದಾರೆ.
ಸ್ವಾಮೀಜಿಗಳು ಒಕ್ಕಲಿಗರಿಗೆ ಹೊಸ ಚೈತನ್ಯವನ್ನು ತುಂಬುತ್ತಿದ್ದು, ಒಕ್ಕಲಿಗರ ಹೋರಾಟಕ್ಕೆ ದಲಿತ ಸಂಘಟನೆಗಳ ಬೆಂಬಲವೂ ಸಿಗುವ ಸಾಧ್ಯತೆಯಿದೆ. ಮೈಸೂರು, ಬೆಂಗಳೂರು, ಸುಳ್ಯ, ಮಂಗಳೂರಿನ ನಂತರ ಮಂಡ್ಯದಲ್ಲಿ ಒಕ್ಕಲಿಗರ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದೆ.