ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಟೆಕ್ಕಿ ಪವನ್ ಶವಪರೀಕ್ಷೆ?
ತಮ್ಮ ಮಗನ ವಿರುದ್ಧ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಲಾಗಿದೆ. ಆ ಕಳಂಕ ತೊಡೆದು ಹಾಕಲು ತಮ್ಮ ಪುತ್ರನ ಶವಪರೀಕ್ಷೆಯನ್ನು ಮತ್ತೊಮ್ಮೆ ಬೆಂಗಳೂರಿನಲ್ಲಿ ನಡೆಸಬೇಕು ಎಂದು ಪವನ್ ಕುಮಾರ್ ಅಂಜಯ್ಯ ಮಾತಾಪಿತೃಗಳು ಪಟ್ಟುಹಿಡಿದಿದ್ದಾರೆ. ಇದರೊಂದಿಗೆ ಟೆಕ್ಕಿ ಪವನ್ ದುರಂತ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
Cognizant ಕಂಪನಿಯ ವಕ್ತಾರರ ಪ್ರಕಾರ ನ್ಯೂಜೆರ್ಸಿ ವೈದ್ಯಕೀಯ ಸಂಸ್ಥೆಯಿಂದ ಪವನ್ ಶವವನ್ನು ಅಲ್ಲಿನ ಶವಾಗಾರ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಇದರಿಂದ ಯಾವುದೇ ಕ್ಷಣ ಪವನ್ ಶವವನ್ನು ಭಾರತಕ್ಕೆ ಹೊತ್ತೊಯ್ಯಲು ಅನುವು ಮಾಡಿಕೊಡಲಾಗಿದೆ.
ಶವಾಗಾರ ಕೇಂದ್ರವು ವಿವಿಧ ವಿಮಾನ ಯಾನ ಸಂಸ್ಥೆಗಳನ್ನು ಸಂಪರ್ಕಿಸಿದ್ದು, ಶವವನ್ನು ಭಾರತಕ್ಕೆ ಹಸ್ತಾಂತರಿಸುವ ಏರ್ಪಾಟುಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ನ್ಯೂಯಾರ್ಕಿನಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿಯ ನೆರವನ್ನೂ ಪಡೆಯಲಾಗಿದೆ.
ಈ ಮಧ್ಯೆ, ಪವನ್ ಶವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಂತೆ ನೇರವಾಗಿ ಪಾವಗಡಕ್ಕೆ ತೆಗೆದುಕೊಂಡುಹೋಗಲಾಗುವುದು ಎಂದು Cognizant ಕಂಪನಿಯ ಹೇಳಿದೆ. ಮತ್ತು ಕಂಪನಿಯ ಈ ಹೇಳಿಕೆಯಿಂದ ಮತ್ತೆ ಪವನ್ ಸಾವಿನ ಪ್ರಕರಣ ಕಗ್ಗಂಟಾಗುವ ಲಕ್ಷಣಗಳಿವೆ.
ಏಕೆಂದರೆ ಟೆಕ್ಕಿ ಪವನ್ ಪೋಷಕರು ಕಂಪನಿಯ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪವನ್ ದೇಹದ ಮರಣೋತ್ತರ ಪರೀಕ್ಷೆಯನ್ನು ಮತ್ತೊಮ್ಮೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಅಥವಾ ಬೋರಿಂಗ್ ಆಸ್ಪತ್ರೆಯಲ್ಲಿ ನಡೆಸಬೇಕು.
ಮತ್ತು ಈ ಆಸ್ಪತ್ರೆಯು ನೀಡುವ ಶವಪರೀಕ್ಷೆ ವರದಿಯೊಂದಿಗೆ ಅಮೆರಿಕದ ವರದಿಯನ್ನು ತಾಳೆ ಹಾಕಲಾಗುವುದು. ಎಲ್ಲವೂ ಸರಿಯಾಗಿದ್ದರೆ well and good. ಇಲ್ಲವಾದಲ್ಲಿ ಸುತರಾಂ ನಾವು ಪವನ್ ಅಂತ್ಯಕ್ರಿಯೆಗೆ ಅವಕಾಶ ನೀಡುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.