ಇನ್ನು ಆರು ತಿಂಗಳಲ್ಲಿ ಚುನಾವಣೆ ನಿಶ್ಚಿತ : ಕೋಡಿಮಠ ಶ್ರೀ
'ಸದಾನಂದ ಗೌಡರ ಸರ್ಕಾರ ಬಂದಾಗಲೂ ಇದೇ ಮಾತನಾಡಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರೆಯಲಿದೆ. ಹಲವು ಬಾರಿ ಬಿಜೆಪಿ ಸರ್ಕಾರ ಗಡಾಂತರದಿಂದ ಪಾರಾಗಿದೆ. ಆದರೆ, ಈ ಬಾರಿ ಕಷ್ಟ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ಎದುರಿಸಬೇಕಾಗುತ್ತದೆ. ಇನ್ಮುಂದೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದು ಕಷ್ಟ. ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆ ಹೆಚ್ಚಾಗಿದೆ. ಎಂದು ಕೋಡಿಮಠಶ್ರೀಗಳು ಹೇಳಿದ್ದಾರೆ.
ರಾಜಕೀಯ ಅಸ್ಥಿರತೆ 2020ರವರೆಗೂ ಮುಂದುವರೆಯಲಿದೆ. ಯಡಿಯೂರಪ್ಪ ಅವರ ಜನಪ್ರಿಯತೆ, ಗೆಲುವು ತಾತ್ಕಾಲಿಕವಾದದ್ದು, ಬಿಜೆಪಿ ಸ್ಥಿರ ಸರ್ಕಾರ ನಡೆಸುವ ಕನಸು ನನಸಾಗಲು ಕಾಲ ಪಕ್ವವಾಗಿಲ್ಲ ಎಂದರು. ವಿಪಕ್ಷಗಳಿಗೂ ಗ್ರಹಗತಿ ಸರಿ ಇಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರಾಜಕೀಯ ಅಸ್ಥಿರತೆ ಮುಂದುವರೆಯುತ್ತದೆ ಎಂದು ಅರಸೀಕೆರೆಯ ಕೋಡಿಮಠದ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಸದಾನಂದ ಗೌಡರು ಉತ್ತಮ ರಾಜಕಾರಣಿ. ಅವರ ಒಳ್ಳೆಯತನವೇ ಅವರಿಗೆ ಉನ್ನತ ಸ್ಥಾನ ದೊರಕಿಸಿಕೊಟ್ಟಿದೆ. ಆ ಒಳ್ಳೆಯತನ ಅವರಿಗೆ ಮುಳುವಾಗಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಆಪ್ತರೊಬ್ಬರಿಂದ ಬಹಳಷ್ಟು ವಿರೋಧ ವ್ಯಕ್ತವಾಗುತ್ತದೆ. ಆದರೂ 2013ರ ವರೆಗೆ ತೊಂದರೆ ಇಲ್ಲ. ಆತಂಕ ಪರಿಹಾರವಾದರೆ ಒಳ್ಳೆಯ ಯೋಗವಿದೆ. ಇಲ್ಲದಿದ್ದರೆ ಅಧಿಕಾರ ಅನಿಶ್ಚಿತ ಎಂದು ಸ್ವಾಮೀಜಿ ಈ ಮುಂಚೆ ಹೇಳಿದ್ದಾರೆ.
ಇತರೆ ಜನ ಪ್ರತಿನಿಧಿಗಳಿಗೆ ಆತಂಕಕಾರಿ ವಿಷಯವನ್ನು ಸ್ವಾಮೀಜಿ ಹೇಳಿದ್ದಾರೆ. 'ಮತ್ತಷ್ಟು ರಾಜಕೀಯ ಮುಖಂಡರು ಜೈಲಿಗೆ ಹೋಗಲಿದ್ದಾರೆ' ಎನ್ನುವ ಮೂಲಕ ಜನಪ್ರತಿನಿಧಿಗಳನ್ನು ಭಯದ ಮಡುವಿಗೆ ತಳ್ಳಿದ್ದಾರೆ. ಮುಂಗಾರು ಮಳೆ ಕ್ಷೀಣವಾಗಿದ್ದು ಇನ್ನು 15ದಿನಗಳಲ್ಲಿ ಉತ್ತಮ ಮಳೆ ಕಾಣಬಹುದು, ಹಿಂಗಾರು ಮಳೆ ಉತ್ತಮವಾಗಿರುತ್ತದೆ.
ಯಡಿಯೂರಪ್ಪ ಭವಿಷ್ಯ: ಯಡಿಯೂರಪ್ಪ ಮತ್ತೆ ತಮಗೆ ಸಿಎಂ ಆಗುವ ಯೋಗಾನುಯೋಗ ಇದೆಯೇ ಎಂಬ ಪ್ರಶ್ನೆಗೆ "ಯಡಿಯೂರಪ್ಪ ಅವರಿಗೆ ಸಿಎಂ ಆಗುವ ಯೋಗ ಮುಂದಿನ 6 ವರ್ಷಗಳ ಕಾಲ ಇಲ್ಲ. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ಯತ್ನಿಸಲು ಸೂಕ್ತ ಕಾಲವೂ ಕೂಡಿ ಬಂದಿಲ್ಲ, ಯಡಿಯೂರಪ್ಪ ಅವರು ಮೌನದಿಂದ ಇರುವುದು ಒಳ್ಳೆಯದು" ಎಂದು ಶ್ರೀಗಳು ಹೇಳಿದರು.