ಮೈಸೂರಿನಿಂದ ಶಿರಡಿಗೆ ನೇರ ಏಕ್ಸ್ ಪ್ರೆಸ್ ರೈಲು
ಮೈಸೂರಿನಿಂದ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತಾಧಿಗಳ ಅನುಕೂಲಕ್ಕಾಗಿ ಹೊಸದಾಗಿ ರೈಲುಗಳ ಸಂಚಾರ ಜು.9 ರಿಂದ ಆರಂಭವಾಗಲಿದೆ. ಮೈಸೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್(Tr No. 56207/8) ಹಾಗೂ ಮೈಸೂರು- ಶ್ರವಣಬೆಳಗೊಳ ಡೈಲಿ ಪ್ಯಾಸೆಂಜರ್ ಟ್ರೈನ್(56215/6) ಪ್ರತಿದಿನ ಸಂಚರಿಸಲಿದೆ. ಇದೇ ರೀತಿ ಮೈಸೂರಿನಿಂದ ಶಿರಡಿ ಏಕ್ಸ್ ಪ್ರೆಸ್(16217/8) ವಾರಕ್ಕೊಮ್ಮೆ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಿಸಿದೆ.
ಈ ಮೂರು ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ ಶನಿವಾರ ಹಸಿರು ನಿಶಾನೆ ತೋರಿಸಿದರು. ಬೆಳಗ್ಗೆ 11.35ಕ್ಕೆ ಮೈಸೂರಿನಿಂದ ಹೊರಟ ಟ್ರೈನ್ ಕೆ.ಆರ್.ನಗರ, ಹಂಪಾಪುರ, ಹೊಸಅಗ್ರಹಾರ, ಹೊಳೆ ನರಸೀಪುರ, ಹಾಸನ, ಶಾಂತಿ ಗ್ರಾಮ, ಚನ್ನರಾಯಪಟ್ಟಣ ಮೂಲಕ ಹಾದು ಅದೇ ದಿನ ಸಂಜೆ 4.20ಕ್ಕೆ ಶ್ರವಣ ಬೆಳಗೊಳ ತಲುಪಲಿದೆ. ಬಳಿಕ ಅದೇ ರೈಲು ಸಂಜೆ 4.50ಕ್ಕೆ ಶ್ರವಣಬೆಳಗೊಳದಿಂದ ಹೊರಟು ರಾತ್ರಿ 9.05 ಕ್ಕೆ ಮೈಸೂರು ತಲುಪಲಿದೆ.
ಅದೇ ರೀತಿ ಪ್ರತಿ ಸೋಮವಾರ ಬೆಳಗ್ಗೆ 5.30ಕ್ಕೆ ಮೈಸೂರಿನಿಂದ ಶಿರಡಿಗೆ ರೈಲು ಸಂಚರಿಸಲಿದೆ. ಬೆಂಗಳೂರು, ಹಿಂದುಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ್, ಬಾಗಲಕೋಟೆ, ಬಿಜಾಪುರ, ಸೊಲ್ಲಾಪುರ, ಅಹಮದ್ ನಗರ್, ಬೀಳಾಪುರದ ಮೂಲಕ ಮಂಗಳವಾರ ಬೆಳಗ್ಗೆ 11.30ಕ್ಕೆ ಶಿರಡಿ ತಲುಪಲಿದೆ.
ಭಕ್ತಾಧಿಗಳು ದೇವರ ದರ್ಶನ ಪಡೆದು ಮತ್ತೆ ಇದೇ ರೈಲಿನಲ್ಲಿ ಹಿಂದಿರುವ ಅವಕಾಶ ಕಲ್ಪಿಸಲಾಗಿದೆ. ಏಕೆಂದರೆ ಇದೇ ರೈಲು ರಾತ್ರಿ 11.55ಕ್ಕೆ ಶಿರಡಿಯಿಂದ ಮತ್ತೆ ಮೈಸೂರಿಗೆ ಹಿಂದಿರುಗಲಿದೆ. ರಾತ್ರಿ ಹೊರಟ ಟ್ರೈನು ಗುರುವಾರ ಬೆಳಗ್ಗೆ 6.55ಕ್ಕೆ ಮೈಸೂರು ತಲುಪಲಿದೆ.
ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿದ ಸಂದರ್ಭ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್, ಸಂಸದ ಎ.ಎಚ್. ವಿಶ್ವನಾಥ್, ಶಾಸಕ ಶಂಕರ ಲಿಂಗೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.