ವಕ್ಫ್ ಆಸ್ತಿ 2.5 ಲಕ್ಷ ಕೋಟಿ ಹಂಚಲು ಆಗ್ರಹ
ನಗರದ ಕೇಂದ್ರ ಭಾಗದಲ್ಲಿ ವಕ್ಫ್ ಗೆ ಸೇರಿದ ಸುಮಾರು 2.6 ಲಕ್ಷ ಕೋಟಿ ಆಸ್ತಿ ಇದೆ. ಈ ಆಸ್ತಿಗಳ ಒಟ್ಟು ಆದಾಯದಿಂದ ರಾಜ್ಯದ ಇಡೀ ಮುಸ್ಲಿಮ್ ಸಮುದಾಯದ ಅಭಿವೃದ್ಧಿ ಮಾಡಲು ಸಾಧ್ಯ. ಈ ಬಗ್ಗೆ ಮುಸ್ಲಿಮರಿಗೆ ಜಾಗೃತಿ ಮೂಡಿಸಲು ರಾಜ್ಯದೆಲ್ಲೆಡೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಸಂಸ್ಥೆ ಹೇಳಿದೆ.
ವಕ್ಫ್ ಆಸ್ತಿ ಎಲ್ಲವೂ ಧರ್ಮ ಹಾಗೂ ದೀನ ದಲಿತರ ಏಳಿಗೆಗಾಗಿ ದಾನಿಗಳು ನೀಡಿದ ಕೊಡುಗೆ. ಕರ್ನಾಟಕ ವಕ್ಫ್ ಬೋರ್ಡ್ ತನ್ನ ಆಸ್ತಿಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಿದೆ. ಈಗಲೂ ಅನೇಕರು ನಿರ್ಗತಿಕರಾಗಿ ಸೂರಿಲ್ಲದೆ ಕಷ್ಟಪಡುತ್ತಿದ್ದಾರೆ. ಅನಕ್ಷರತೆ, ಬಡತನ ಕಿತ್ತು ತಿನ್ನುತ್ತಿದೆ. ಆದರೆ, ದಾನಿಗಳು ನೀಡಿದ ಹಣ ದುರುಪಯೋಗವಾಗುತ್ತಿದೆ ಎಂದು ಎನ್ ಜಿಒ ಸಂಸ್ಥೆ ಹೇಳಿದೆ.
ವಕ್ಫ್ ಆಸ್ತಿಗಳನ್ನು ಸಂರಕ್ಷಿಸಲು ಸರ್ಕಾರ ಹಿಂದೆ ಬಿದ್ದಿದೆ. ಮಮ್ತಾಜ್ ಅಲಿಖಾನ್ ನಂತರ ಸರ್ಕಾರದಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ವಕ್ಫ್ ಬೋರ್ಡ್ ಸದಸ್ಯರ ಕಚ್ಚಾಟದಿಂದ ವಕ್ಫ್ ಭೂಮಿ ಕಬಳಿಕೆ ಬಹಿರಂಗವಾಗದೆ ಉಳಿಯುವ ಶಂಕೆ ಇದೆ.[ವಿವರಗಳಿಗೆ ಓದಿ]
ಮುಸ್ಲಿಂ ಸಮುದಾಯದಕ್ಕೆ ವಕ್ಫ್ ಬೋರ್ಡ್ ನ ಆಸ್ತಿ ವಿವರದ ಬಗ್ಗೆ ಅರಿವಿಲ್ಲ. ವಕ್ಫ್ ನಿಂದ ಬರುವ ಆದಾಯ ದೀನ ದಲಿತರ ಉಪಯೋಗಕ್ಕೆ ಮೀಸಲು ಎಂಬುದನ್ನು ಎಲ್ಲರಿಗೂ ಮನದಟ್ಟು ಮಾಡಿಕೊಡಬೇಕಿದೆ.
ಕನಕಪುರ ತಾಲೂಕಿನಲ್ಲಿ ವಕ್ಫ್ ಬೋರ್ಡ್ ಗೆ ಸೇರಿದ ಸುಮಾರು 6 ಎಕರೆ 28 ಗುಂಟೆ ಭೂಮಿಯನ್ನು ಸ್ಥಳೀಯ ಮದ್ಯದ ದೊರೆಗಳು ಕಬಳಿಸಿದ್ದಾರೆ. ಕೋರ್ಟ್ ಆದೇಶ, ಸರ್ಕಾರದ ಹುಕಂಗೆ ಬೆಲೆಯೇ ಇಲ್ಲ. ಸ್ಥಳೀಯ ಮುಸ್ಲಿಂ ಸಮುದಾಯದವನ್ನು ರೌಡಿಗಳಿಂದ ಹೆದರಿಸಿಟ್ಟುಕೊಳ್ಳಲಾಗಿದೆ ಎಂದು ಎನ್ ಜಿಒ ಆರೋಪಿಸಿದೆ.
ರಾಜ್ಯ ಅಲ್ಪ ಸಂಖ್ಯಾತರ ಆಯೋಗಕ್ಕೆ ದೂರು ನೀಡಲಾಯಿತು. ಆಯೋಗ ಸ್ಥಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ಕ್ರಮ ಜರುಗಿಸುವಂತೆ ಹೇಳಿದರೂ ಪ್ರಯೋಜನವಾಗಲಿಲ್ಲ.
ಬಹುಕೋಟಿ ವಕ್ಫ್ ಭೂ ಹಗರಣದ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಭೂ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಸರ್ಕಾರ ಈ ಹಿಂದೆ ಆದೇಶಿಸಿದ್ದರೂ ಲೋಕಾಯುಕ್ತ ತನಿಖೆ ಇನ್ನೂ ಕಾರ್ಯಗತವಾಗಿಲ್ಲ. ಹೀಗಾಗಿ ಮುಸ್ಲಿಮರಿಗೆ ವಕ್ಫ್ ಬೋರ್ಡ್ ಅವ್ಯವಹಾರ, ಭೂ ಹಗರಣದ ಬಗ್ಗೆ ವಿಸ್ತಾರವಾಗಿ ವಿವರಿಸಲು ಜಾಗೃತಿ ಅಭಿಯಾನಕ್ಕೆ ಮುಂದಾಗಿದ್ದೇವೆ ಎಂದು ವಕ್ಫ್ ಸರಂಕ್ಷಣಾ ಸಮಿತಿ ಹೇಳಿದೆ.