ಕೇರಳ ಅನಂತ ಪದ್ಮನಾಭ ನಿಧಿ ಮೌಲ್ಯ 10 ಲಕ್ಷ ಕೋಟಿ?
ಕಳೆದ ಫ್ರೆಬವರಿ ತಿಂಗಳಿನಲ್ಲಿ ದೇಗುಲದ ಇ ಮತ್ತು ಎಫ್ ಕೊಠಡಿಗಳಲ್ಲಿರುವ ಸಂಪತ್ತಿನ ಮೌಲ್ಯಮಾಪನ ಕಾರ್ಯಕ್ಕೆ ಮುಂದಾದಾಗ ನಿಧಿಯ ಮೌಲ್ಯ 1 ಲಕ್ಷ ಕೋಟಿ ಇರಬಹುದು ಎಂದು ಅಂದಾಜಿಸಲಾಗಿತ್ತು.
ಸುಪ್ರೀಂಕೋರ್ಟ್ ನ ಆದೇಶದ ಮೇರೆಗೆ ವೇಲಾಯುಧನ್ ನಾಯರ್ ನೇತೃತ್ವದ ಪರಿಣತರ ತಂಡ ಸಭೆ ಸೇರಿ ಗುರುವಾರ(ಜು.5) ದಿಂದ ವಾಲ್ಟ್ A ನಿಧಿ ಮೌಲ್ಯಮಾಪನ ನಿರ್ಧರಿಸಲಾಗಿದೆ. ಈ 'ಎ' ಕೊಠಡಿಯ ಮೌಲ್ಯ ಮಾಪನ ಮುಗಿಯಲು ಸುಮಾರು 6 ತಿಂಗಳುಗಳ ಕಾಲ ಅವಕಾಶ ಕೋರಲಾಗಿದೆ. ಗುರುವಾರ ಬೆಳಗ್ಗೆ 9 ಗಂಟೆಗೆ ಮೌಲ್ಯ ಮಾಪನ ಆರಂಭವಾಗಿದ್ದು, 2 ಸೀಲು ಮಾಡಿದ ಮರದ ಬಾಗಿಲು ಹಾಗೂ ಲೋಹದ ಬಾಗಿಲನ್ನು ತೆರಳಲಾಗುತ್ತದೆ.
ಈ ಖಜಾನೆಯಲ್ಲಿ ಸರಪಳಿ ಮಾಲೆ, ನಾಣ್ಯಗಳು, ಕಿರೀಟ ಮುಂತಾದ ಆಭರಣಗಳು ಇದೆ. ಕಬ್ಬಿಣದ ಖಜಾನೆಯಲ್ಲಿ ದೇವರ ಆಭರಣಗಳು, ಮುತ್ತು, ಹವಳ, ಪಚ್ಚೆ, ವಜ್ರ ವೈಢೂರ್ಯ ತುಂಬಿದೆ. ಸಿ ಹಾಗೂ ಡಿ ಕೊಠಡಿಯ ಖಜಾನೆ ಮೌಲ್ಯಮಾಪನ ಬಹುತೇಕ ಮುಗಿದಿದೆ. ಮೌಲ್ಯಮಾಪನದ ಪ್ರತಿ ಹಂತವನ್ನು ಚಿತ್ರೀಕರಿಸಲಾಗುತ್ತಿದ್ದು, ಇಸ್ರೋ ಸರ್ವರ್ ಗಳಲ್ಲಿ ಶೇಖರಿಸಲಾಗುತ್ತಿದೆ.
ಈವರೆಗೂ ಸಿಕ್ಕಿರುವ ಪ್ರಮುಖ ಆಭರಣಗಳಲ್ಲಿ 27.5ಕೆಜಿ ತೂಕದ ಚಿನ್ನದ ಹೂದಾನಿ, 360 ಚಿನ್ನದ ಕುಂಡಗಳು, 12 ಪದರವುಳ್ಳ 10.5 ಕೆಜಿ ತೂಕದ 18 ಅಡಿ ಉದ್ದದ ಸರಪಳಿ ಚಿನ್ನದ ಸರ ಮುಂತಾದವು ಸೇರಿದೆ.
ಈ ಹಿಂದಿನ ಕಥೆ: ಸುಪ್ರೀಂಕೋರ್ಟ್ ನ ಆದೇಶದ ಮೇರೆಗೆ ವೇಲಾಯುಧನ್ ನಾಯರ್ ನೇತೃತ್ವದ ಪರಿಣತರ ತಂಡಕ್ಕೆ ಇನ್ನೂ ಹಲವು ಕ್ಷೇತ್ರಗಳ ಪ್ರತಿನಿಧಿಗಳು ದೇಗುಲದ ಇ ಮತ್ತು ಎಫ್ ಕೊಠಡಿಗಳಲ್ಲಿರುವ ಸಂಪತ್ತಿನ ಮೌಲ್ಯಮಾಪನ ಮತ್ತು ದಾಖಲೀಕರಣ ಪ್ರಕ್ರಿಯೆ ಸೋಮವಾರ ಸಂಜೆ (ಫೆ.20) ಆರಂಭಿಸಿತ್ತು. ಈ ಪ್ರಕ್ರಿಯೆ ಎಷ್ಟು ಕಾಲ ಬೇಕಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಕೇರಳ ಎಲೆಕ್ಟ್ರಾನಿಕ್ ಕಾರ್ಪೊರೇಶನ್(Keltron) ಅತ್ಯಾಧುನಿಕ ಸಾಧನ, ಪರಿಕರಗಳನ್ನು ಖರೀದಿಸಲಾಗಿದೆ. ಅಮೂಲ್ಯ ಸಂಪತ್ತಿನ ವ್ಯವಸ್ಥಿತ ಮೌಲ್ಯಮಾಪನ ಕ್ಷಿಪ್ರವಾಗಿ ನಡೆಯಲಿದೆ. ಸುಪ್ರೀಂಕೋರ್ಟ್ ನೇಮಿಸಿರುವ 12 ಮಂದಿ ಸದಸ್ಯರು ಮೌಲ್ಯಮಾಪನ ಕಾರ್ಯದ ಬಗ್ಗೆ ನಿಗಾವಹಿಸಲಿದ್ದಾರೆ. ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಆರು ರಹಸ್ಯ ಕೊಠಡಿಗಳ ಪೈಕಿ ಐದು ಕೊಠಡಿಗಳನ್ನು ತೆರೆಯಲಾಗಿದೆ.
ಐದು ಕೊಠಡಿಯಲ್ಲಿ ಸಿಕ್ಕಿರುವ ಸಂಪತ್ತು ಎಲ್ಲರನ್ನು ಬೆರಗುಗೊಳಿಸಿದೆ. ಸುಮಾರು 150 ವರ್ಷಗಳಿಂದ ರಹಸ್ಯವಾಗಿದ್ದ ಈ ಸಂಪತ್ತಿನ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ನಡುವೆ ಬಿ ಕೊಠಡಿಯ ಬಗ್ಗೆ ಇನ್ನೂ ಸುಪ್ರೀಂಕೋರ್ಟ್ ತೀರ್ಪು ನೀಡಿಲ್ಲ. ದೇಗುಲದ ರಹಸ್ಯ ಹೊರ ತೆಗೆಯಲು ಕಾರಣಕರ್ತರಾಗಿದ್ದ ಅರ್ಜಿದಾರ ಸುಂದರರಾಜನ್ ಕಳೆದ ವರ್ಷ ಮೃತಪಟ್ಟರೆ, ಮತ್ತೊಬ್ಬ ಅರ್ಜಿದಾರ ಕೂಡಾ ಕಳೆದ ತಿಂಗಳು ಸಾವನ್ನಪ್ಪಿದ್ದಾರೆ.