ಶಿಷ್ಯನ ಅಕ್ರಮ ಬಂಧನವಾಗಿಲ್ಲ: ನಿತ್ಯಾನಂದ ನಿರಾಳ
'ವಿವಾದದ ಕೇಂದ್ರ ಬಿಂದುವಾದ ಬಿಡದಿ ಧ್ಯಾನಪೀಠಂ ಆಶ್ರಮದಲ್ಲಿ ತಮ್ಮ ಮಗ ಸಂತೋಷ್ನನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ. ಆದ್ದರಿಂದ ನಮ್ಮ ಪುತ್ರನನ್ನು ಹುಡುಕಿಕೊಡಿ' ಎಂದು ಶಿವಮೊಗ್ಗ ನಿವಾಸಿಗಳಾದ ಮುನ್ನೂರು ಕೃಷ್ಣಮೂರ್ತಿ ಹಾಗೂ ಜಯಂತಿ ದಂಪತಿ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಇಂದು ಕೈಗೆತ್ತಿಕೊಳ್ಳುತ್ತಿದ್ದಂತೆ ನಾಟಕೀಯ ಬೆಳವಣಿಗೆಯಲ್ಲಿ ಸಂತೋಷ್ ದಿಢೀರನೆ ನ್ಯಾಯಾಲಯದಲ್ಲಿ ಪ್ರತ್ಯಕ್ಷಗೊಂಡನು. ಇದರಿಂದ ಸಂತೋಷ್ ಸ್ವಯಂ ಪ್ರೇರಿತವಾಗಿ ಹಾಜರಾಗಿರುವುದು ನ್ಯಾಯಾಲಯಕ್ಕೆ ಮನವರಿಕೆಯಾಗಿ, ನ್ಯಾಯಾಲಯವು ಕೃಷ್ಣಮೂರ್ತಿ ಹಾಗೂ ಜಯಂತಿ ದಂಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿತು.
ಕೋರ್ಟ್ ಆವರಣದಲ್ಲೇ ಪ್ರಜ್ಞೆ ತಪ್ಪಿಬಿದ್ದ ತಾಯಿ: ಕೋರ್ಟ್ ತೀರ್ಪಿನಿಂದ ನಿತ್ಯಾನಂದ ಸ್ವಾಮಿ ನಿರಾಳಗೊಂಡರು. ಆದರೆ ಕೋರ್ಟ್ ಆಚೆ ಬರುತ್ತಿದ್ದಂತೆ ಸಂತೋಷನ ತಾಯಿ ಜಯಂತಿ ಅವರು ನ್ಯಾಯಾಲಯದ ಆವರಣದಲ್ಲೇ ಪ್ರಜ್ಞೆ ತಪ್ಪಿಬಿದ್ದರು. ತಮ್ಮ ಪುತ್ರ ಸಂತೋಷ ತಮ್ಮೊಂದಿಗೆ ಬರಲು ನಿರಾಕರಿಸಿದ್ದು ಜಯಂತಿ ಅವರಿಗೆ ಆಘಾತ ತಂದಿತ್ತು.
ಸಂತೋಷ ಹೋಟೆಲ್ ಮ್ಯಾನೇಜಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದು, 2009ರಿಂದ ಆಶ್ರಮದಲ್ಲಿಯೇ ವಾಸವಾಗಿದ್ದಾನೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.