ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಭಾ ಬಗ್ಗೆ ಭಿನ್ನಮತೀಯರಲ್ಲಿ ಭುಗಿಲೆದ್ದ ಅಸಮಾಧಾನ

By Prasad
|
Google Oneindia Kannada News

Shobha Karandlaje faces wrath of colleagues
ಬೆಂಗಳೂರು, ಜು. 4 : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಸದಾನಂದ ಗೌಡರ ಬಣದ ನಡುವೆ ಗದ್ದುಗೆಗಾಗಿ ಹಗ್ಗ ಜಗ್ಗಾಟ ನಡೆದಿರುವ ಸಂದರ್ಭದಲ್ಲಿ, ಒಂದು ತುದಿಯಲ್ಲಿ ಅಧಿಕಾರದ ಹೋರಾಟಕ್ಕೆ 'ಇಂಧನ' ತುಂಬಿ ಹಗ್ಗ ಹಿಡಿದು ಎಳೆಯಬೇಕಾಗಿದ್ದ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಯಡಿಯೂರಪ್ಪ ಬಣದಲ್ಲೇ ಭಾರೀ ಅಸಮಾಧಾನ ಭುಗಿಲೆದ್ದಿದೆ.

ಪಕ್ಷದಲ್ಲಿ ಭಿನ್ನಮತ ಉಲ್ಬಣವಾಗಿರುವ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಅವರು ಹೇಳದೆ ಕೇಳದೆ ಮಾನಸ ಸರೋವರ ಯಾತ್ರೆಗೆ ತೆರಳಿರುವುದು, ಇಲ್ಲಿ ನಾಯಕತ್ವಕ್ಕೆ ಪಟ್ಟುಹಿಡಿದು ಬಹಿರಂಗ ಹೇಳಿಕೆ ನೀಡಿ ಬಿಜೆಪಿ ಹೈಕಮಾಂಡ್ ಮತ್ತು ಮತದಾರರ ಕೆಂಗಣ್ಣಿಗೆ ಗುರಿಯಾಗಿರುವವರ ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿ ಇಷ್ಟೊಂದು ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿದಲ್ಲಿ ಇವರು ಮಾನಸ ಸರೋವರ ಯಾತ್ರೆಗೆ ಏಕೆ ತೆರಳಬೇಕಿತ್ತು ಎಂದು ಕೆಲ ಭಿನ್ನಮತೀಯ ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶೋಭಾ ಕರಂದ್ಲಾಜೆ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ, ಜಗದೀಶ್ ಶೆಟ್ಟರ್ ಪರವಾಗಿ ಇಲ್ಲಿಯವರೆಗೆ ಒಂದೂ ಹೇಳಿಕೆ ನೀಡಿಲ್ಲ. ಇದು ಅಚ್ಚರಿಯ ಸಂಗತಿ ಅಲ್ಲವೇ ಅಲ್ಲ. ಏಕೆಂದರೆ, ಯಡಿಯೂರಪ್ಪ ಅಧಿಕಾರವಹಿಸಿಕೊಂಡ ಆರಂಭದಲ್ಲಿ ಭಿನ್ನಮತ ಸ್ಫೋಟಗೊಂಡಾಗ, ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕಿತ್ತೊಗೆಯಬೇಕು ಎಂದು ರೆಡ್ಡಿ ಬ್ರದರ್ಸ್ ತಿರುಗಿಬಿದ್ದಿದ್ದು ಜಗದೀಶ್ ಶೆಟ್ಟರ್ ಸಲುವಾಗಿ. ಆಗ, ಬೇರೆ ದಾರಿಯಿಲ್ಲದೆ ಅತ್ತುಕರೆದು ಯಡಿಯೂರಪ್ಪನವರು ಶೋಭಾ ಕರಂದ್ಲಾಜೆಯನ್ನು ಬದಿಗೆ ಸರಿಸಿ, ಮನಸ್ಸಿಲ್ಲದೆ ಶೆಟ್ಟರ್ ಅವರನ್ನು ಮಂತ್ರಿಯನ್ನಾಗಿ ಮಾಡಿದ್ದರು. ಇದನ್ನು ಶೋಭಾ ಮರೆತಿರಲಿಕ್ಕೆ ಸಾಧ್ಯವಿಲ್ಲ.

ಅಚ್ಚರಿಯ ಸಂಗತಿಯೆಂದರೆ, ಸದಾನಂದ ಗೌಡರನ್ನು ಕೆಳಗಿಳಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ನಡೆಸಿರುವ ಯುದ್ಧದಲ್ಲಿ ಯಡಿಯೂರಪ್ಪನವರು ಕೂಡ ಕತ್ತಿ ಗುರಾಣಿ ಹಿಡಿದು ನೇರವಾಗಿ ಯುದ್ಧಕಿಳಿದಿಲ್ಲ. ಅವರ ಪರವಾಗಿ ಅವರ ಹಿಂಬಾಲಕರೇ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೂ ಕೂಡ ಶೋಭಾ ತೆರೆಮರೆಯ ಬೆಂಬಲಕ್ಕೆ ಕಾರಣವೆನ್ನಬಹುದು. ಅಲ್ಲದೆ, ತಮ್ಮ ರಾಜೀನಾಮೆ ಪತ್ರವನ್ನು ಶೋಭಾ ಅವರು ಮುಖ್ಯಮಂತ್ರಿಗೆ ನೇರವಾಗಿ ತಲುಪಿಸಿರಲಿಲ್ಲ. ಉಳಿತ ಸಚಿವರ ಮುಖಾಂತರ ಕೊಟ್ಟಿದ್ದರು. ಅದನ್ನು ಸದಾನಂದ ಗೌಡ ತಿರಸ್ಕರಿಸಿದ್ದರು.

ಕೆಲ ದಿನಗಳ ಹಿಂದೆ ಧರ್ಮೇಂದ್ರ ಪ್ರಧಾನ್ ಅವರು ಬೆಂಗಳೂರಿಗೆ ಬಂದು ಎರಡೂ ಬಣಗಳನ್ನು ಭೇಟಿ ಮಾಡಿ ಚರ್ಚಿಸಿದಾಗಲೂ ಶೋಭಾ ಕರಂದ್ಲಾಜೆ ಯಾವ ದೃಶ್ಯದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಶೋಭಾ ಕರಂದ್ಲಾಜೆ ಅವರಿಗೆ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗುವುದು ನಿಜಕ್ಕೂ ಬೇಕಾ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುವಂತೆ ಮಾಡಿದೆ. "ಶೆಟ್ಟರ್‌ಗಾಗಿ ನಾವು ನಡೆಸಿದ ಹೋರಾಟಕ್ಕೆ ನಮಗೆ ಭಿನ್ನಮತೀಯರು, ದ್ರೋಹಿಗಳು ಎಂಬ ಪಟ್ಟ ಕಟ್ಟಿದ್ದಾರೆ. ನಾವೇನು ಶೋಭಾ ಕರಂದ್ಲಾಜೆಯಷ್ಟು ಸೌಭಾಗ್ಯವಂತರಲ್ಲ ನೋಡಿ" ಎಂದು ಯಡಿಯೂರಪ್ಪ ಬಣದ ಶಾಸಕರೊಬ್ಬರು ವ್ಯಂಗ್ಯವಾಡಿದ್ದಾರೆ.

ಸದಾನಂದ ಗೌಡರನ್ನು ಕಿತ್ತೊಗೆದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ಪ್ರತಿಷ್ಠಾಪಿಸಬೇಕೆಂದು ಕೂಗೆದ್ದಾಗಲೆಲ್ಲ ಮೊದಲ ಸಾಲಿಗೆ ಬಂದು ಹೇಳಿಕೆ ನೀಡುತ್ತಿದ್ದ ಶೋಭಾ ಕರಂದ್ಲಾಜೆಯವರು, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದಾಗ ಯಾಕೆ ಮುಂದೆ ಬರುತ್ತಿಲ್ಲ ಎಂಬುದು ಎಲ್ಲ ಭಿನ್ನಮತೀಯರನ್ನು ಕಾಡುತ್ತಿರುವ ಪ್ರಶ್ನೆ. ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರ ಸ್ನೇಹಿತರ ಜೊತೆ ಮಾನಸ ಸರೋವರ ಯಾತ್ರೆಗೆ ತೆರಳಿರುವ ಶೋಭಾ ಜು.12ರಂದು ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಆಗ ಈ ಪ್ರಶ್ನೆಗೆ ಉತ್ತರ ಸಿಗಬಹುದು.

English summary
When drama is going on to replace Sadananda Gowda with Jagadish Shettar as CM of Karnataka, Shobha Karandlaje has taken a trip to Manasarovar yatra. The supporters of Yeddyurappa who are up in arms against DVS are venting ire on Shobha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X