ಇವರನ್ನು ಆರಿಸಿ ಕಳಿಸಿದ್ದೇ ನಮ್ಮ ತಪ್ಪಾ: ಬರಗೆಟ್ಟ ಜನ
ಬೆಂಗಳೂರು, ಜುಲೈ 4: ಇತ್ತ ರಾಜಧಾನಿಯಲ್ಲಿ ಮುಖ್ಯಮಂತ್ರಿ ಮುಖ್ಯಮಂತ್ರಿ ಸದಾನಂದ ಗೌಡರು ವಂದನಾರ್ಪಣೆ ಘಟ್ಟ ಪ್ರವೇಶಿಸುವುದಕ್ಕೂ ಮುನ್ನ ಇಡೀ ನಾಡು ಬರದಿಂದ ತತ್ತರಿಸಿದೆ. ಅಮೆರಿಕ ಸೇರಿದಂತೆ ಇಡೀ ವಿಶ್ವ ಶತಮಾನದಲ್ಲೇ ಗರಿಷ್ಠ ಬರ ಕಂಡಿದೆ. ಅಂಥದ್ದರಲ್ಲಿ ನಮ್ಮದೇನು ಎಂದು ಬಿಜೆಪಿ ಮಂದಿ ಸಮಾಧಾನಪಟ್ಟುಕೊಳ್ಳಬಹುದಾದರೂ ನಿಜವಾಗಿಯೂ ಗ್ರಾಮಾಂತರ ಭಾಗದಲ್ಲಿ ಜನರ ಬವಣೆ ನೋಡಿದರೆ ಬಿಜೆಪಿಗೆ ಅಂಥ ರೋಗವೇನು ಬಂದಿದೆ ಎಂದು ಬೇಸರವಾಗುತ್ತದೆ.
ನಾಡಿಗೆ ಬರ ಬಂದಿರುವಾಗಲೇ ಆಡಳಿತಾರೂಢ ಪಕ್ಷದೊಳಗಿನ ಕಿತ್ತಾಟದಿಂದಾಗಿ ಆಡಳಿತ ಯಂತ್ರಕ್ಕೆ ಗರ ಬಡಿದಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ರೈತಾಪಿ ಜನ ತಲೆ ಮೇಲೆ ಕೈಹೊತ್ತಿದ್ದಾರೆ. ಕೃಷಿ, ಜಲ ಮತ್ತು ಗ್ರಾಮೀಣಾಭಿವೃದ್ಧಿಯ ಜವಾಬ್ದಾರಿ ಹೊತ್ತ ಸಚಿವಾಲಯಗಳು ನಿಶ್ಚಿಂತೆಯಿಂದ, ನಿಶ್ಚಲವಾಗಿವೆ. ಇಲ್ಲಿನ ಇಲಾಖೆಗಳಲ್ಲಿನ ಸಿಬ್ಬಂದಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದರತ್ತ ಗಿರಕಿ ಹೊಡೆಯುತ್ತಿದ್ದಾರೆ.
ತಾಜಾ ಸುದ್ದಿಗಳ ಪ್ರಕಾರ ಕೊನೆಗಾಲದಲ್ಲಾದರೂ ಕರ್ತವ್ಯ ಪ್ರಜ್ಞೆ ಮೆರೆದಿರುವ ನಮ್ಮ ಜನನಾಯಕರು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬರ ವಿಷಯ ಮುಂದಿಟ್ಟುಕೊಂಡು ಸಂಬಂಧಪಟ್ಟ ಸಚಿವರಾದಿಯಾಗಿ ಸಭೆ ನಡೆಸುತ್ತಿದ್ದಾರೆ.
ಅಂಕಿ ಅಂಶಗಳ ಪ್ರಕಾರ ಈ ಹಂಗಾಮಿನಲ್ಲಿ ಶೇ. 15 ಬೆಳಗಳಷ್ಟೇ ಬಿತ್ತುವುದಕ್ಕೆ ಸಾಧ್ಯಾವಾಗಿದೆ. ಕುಡಿಯುವ ನೀರು ಬಹುತೇಕ ಎಲ್ಲ ಸ್ಥಳಗಳಲ್ಲೂ ಇದೆ. ಕೃಷಿ ಸಚಿವ ಉಮೇಶ್ ಕತ್ತಿ ಸಾಹೇಬರು, ಗ್ರಾಮೀಣಾಭಿವೃದ್ಧಿ ಸಚಿವ ಸನ್ಮಾನ್ಯ ಜಗದಿಶ್ ಶೆಟ್ಟರ್ ಮತ್ತು ಜಲಸಂಪನ್ಮೂಲ ಖಾತೆಯ ಘನ ಸಚಿವ ಬಸವರಾಜ ಬೊಮ್ಮಾಯಿ ಅವರು ನಾಡಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯದೆ ಮುಖ್ಯಮಂತ್ರಿಯನ್ನು ಅಕ್ಷರಶಃ ಒದ್ದೋಡಿಸುವುದು ಹೇಗೆ ಎಂಬುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇನ್ನು ಆ ಮುಖ್ಯಮಂತ್ರಿಯೋ ತಲೆಯ ಮೇಲೆ ಹತ್ತಿಪ್ಪತ್ತು ಖಾತೆಗಳನ್ನು ಹೊತ್ತು ಹೈರಾಣರಾಗಿರುವಾಗ ಹೇಗೆ ತಾನೆ ಪುರೋಭಿವೃದ್ಧಿಯತ್ತ ಗಮನ ಹರಿಸಿಯಾರು?
ಬರ ಪರಿಹಾರ ಕಾರ್ಯಾರ್ಥ ಮುಖ್ಯಮಂತ್ರಿ ಸದಾನಂದರು ತಡವಾಗಿಯಾದರೂ ಎಚ್ಚೆತ್ತರಾದರೂ ಭಿನ್ನಮತ್ತ ಅವರನ್ನು ಬರ ಪ್ರದೇಶಗಳತ್ತ ತೆರಳದಂತೆ ಕೈಕಾಲು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಈ ಮಧ್ಯೆ, ಬರಗೆಟ್ಟ ಜನ ನಾವು ಮಾಡಿದ ತಪ್ಪಾದರೂ ಏನು? ನಿಮ್ಮನ್ನು ಆರಿಸಿ ಕಳಿಸಿದ್ದೇ ನಮ್ಮ ತಪ್ಪೆ? ಎಂದು ನಿಗಿನಿಗಿ ಅಂತ ಕೆಂಡದಂತ ಕೋಪ ವ್ಯಕ್ತಪಡಿಸುತ್ತಿದ್ದಾರೆ.