ಮಾನಸಿಕ ಹಿಂಸೆ, ಕೆಲಸ ಸಿಗದೆ ಟೆಕ್ಕಿ ನೇಣಿಗೆ ಶರಣು
42 ವರ್ಷದ ಪ್ರಸಾದ್ ರಾವ್ ಅವರು ಕೆಲಸ ಕಳೆದುಕೊಂಡು ಅನೇಕ ತಿಂಗಳುಗಳಾಗಿತ್ತು. ಬೇರೆ ಕಡೆ ಉದ್ಯೋಗ ಅರಸಿ ವಿಫಲರಾಗಿದ್ದರು. ಪತ್ನಿ ವಂದನಾ ಉದ್ಯೋಗಿಯಾಗಿದ್ದು, ತನಗೆ ಉದ್ಯೋಗವಿಲ್ಲ ಎಂಬ ಕೊರಗು ಪ್ರಸಾದ್ ರನ್ನು ಕಾಡುತ್ತಿತ್ತು. ಬೇರೆ ದಾರಿಗಾಣದೆ ಆತುರದ ನಿರ್ಧಾರ ಕೈಗೊಂಡು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಅರೆಕೆರೆ ಮುಖ್ಯರಸ್ತೆಯ ವಿಜಯ ಬ್ಯಾಂಕ್ ಕಾಲೋನಿ ಸಮೀಪದ ಮಹಾವೀರ್ ಗ್ಲೇಸಿಯರ್ ಅಪಾರ್ಟ್ಮೆಂಟ್ ನಲ್ಲಿ ಪ್ರಸಾದ್ ರಾವ್ ಹಾಗೂ ವಂದನಾ ದಂಪತಿ ವಾಸವಾಗಿದ್ದರು. ಎರಡು ತಿಂಗಳ ಹಿಂದೆ ಕನ್ನಿಂಗ್ ಹ್ಯಾಮ್ ರಸ್ತೆ ಬಳಿ ಎಂಎನ್ ಸಿ ಕಂಪನಿಯಲ್ಲಿ ಪ್ರಸಾದ್ ಉದ್ಯೋಗದಲ್ಲಿದ್ದರು. ಅನಿವಾರ್ಯ ಕಾರಣದಿಂದ ಉದ್ಯೋಗ ತೊರೆದಿದ್ದರು. ಕೆಲ ಕಾಲ ಹಾಗೂ ಹೀಗೂ ಕಾಲ ಕಳೆದ ಪ್ರಸಾದ್ ನಂತರ ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದರು. ಕೀಳರಿಮೆಯಿಂದ ಹೊರಬರಲಾರದ ಪ್ರಸಾದ್ ಸಾವು ಪತ್ನಿ ವಂದನಾಗೆ ಆಘಾತ ತಂದಿದೆ.
ಎಂಬಿಎ ಪದವಿಧರೆಯಾದ ವಂದನಾ ಬಿಟಿಎಂ ರಿಂಗ್ ರಸ್ತೆಯಲ್ಲಿರುವ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪ್ರಸಾದ್ ರಾವ್ ರನ್ನು ಮದುವೆಯಾದ ಆರು ತಿಂಗಳಲ್ಲೇ ವೈಧವ್ಯ ಪ್ರಾಪ್ತಿಯಾಗಿರುವುದು ದುರಂತ. ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದ ಪ್ರಸಾದ್ ಅವರು ವಂದನಾರನ್ನು ಇಷ್ಟಪಟ್ಟು ಮದುವೆಯಾಗಿದ್ದರು. ವಂದನಾರಿಗೆ ಕೂಡಾ ಇದು ಎರಡನೇ ಮದುವೆಯಾಗಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಇಬ್ಬರು ಸಂತಸದಿಂದ ಕಾಲಕಳೆದಿದ್ದರು. ವಂದನಾ ಇದ್ದಾಗ ಖುಷಿಯಾಗಿರುತ್ತಿದ್ದ ಪ್ರಸಾದ್, ಆಕೆ ಕೆಲಸಕ್ಕೆ ತೆರಳಿದ ಮೇಲೆ ಖಿನ್ನರಾಗುತ್ತಿದ್ದರು ಎನ್ನಲಾಗಿದೆ.
ಪ್ರಸಾದ್ ಅವರ ಖಿನ್ನತೆ ಬಗ್ಗೆ ಅರಿವಿದ್ದ ಅವರ ಸೋದರ ಪ್ರಕಾಶ್ ರಾವ್ ಹಲವು ಬಾರಿ ಸಮಾಧಾನಪಡಿಸಿದ್ದರು. ಅಂತರ್ಜಾಲದ ಮೂಲಕ ಅನೇಕ ಜಾಬ್ ಸೈಟ್ ಗಳಲ್ಲಿ ಹುಡುಕು, ತಾಳ್ಮೆಯಿಂದಿರು ಎಲ್ಲವೂ ಸರಿ ಹೋಗುತ್ತೆ ಎಂದು ಪ್ರಸಾದ್ ಗೆ ಹೇಳುತ್ತಿದ್ದರಂತೆ. ಸಾಯುವ ಹಿಂದಿನ ದಿನ ಕೂಡ ಪ್ರಕಾಶ್ ರಾವ್ ಜೊತೆ ಪ್ರಸಾದ್ ಗಂಟೆಗಟ್ಟಲೆ ಮಾತನಾಡಿದ್ದರು. ಆದರೆ, ಸಾವಿನ ಸೂಚನೆ ಸಿಕ್ಕಿರಲಿಲ್ಲ.
ಮೊದಲ ಪತ್ನಿ ಸವಿತಾ ಜೊತೆ ಸುಖವಾಗಿದ್ದ ಪ್ರಸಾದ್ ಗೆ ಆಗ ಕೂಡಾ ಕೆಲಸ ಒತ್ತಡ ಬಾಧಿಸುತ್ತಿತ್ತು. ಇದರಿಂದಾಗಿ ಕೌಟುಂಬಿಕ ಕಲಹ ಹೆಚ್ಚಾಗಿತ್ತು. ಸವಿತಾ ಹಾಗೂ ಪ್ರಸಾದ್ ದಂಪತಿಗೆ 14 ವರ್ಷದ ಮಗನೊಬ್ಬನಿದ್ದಾನೆ. ಆದರೂ ದಿನ ನಿತ್ಯದ ಜಗಳದಿಂದ ಬೇಸತ್ತಿದ್ದ ಪ್ರಸಾದ್, ಸವಿತಾರಿಂದ ವಿಚ್ಛೇದನ ಬಯಸಿದ್ದರು. ವಿಚ್ಛೇದನ ಕೂಡಾ ಸುಲಭವಾಗಿ ಸಿಕ್ಕಿತ್ತು.