ಟೆಕ್ಕಿ ಪವನ್ ಸಾವು: ಮೊದಲು ಸಹಿ ಹಾಕಿ- MEA
ಇತ್ತ ಬೆಂಗಳೂರಿನಲ್ಲಿ ಮೃತ ಪವನ್ ಕುಮಾರನ ಕುಟುಂಬದವರು ಆತನ ಶವಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿರುವಾಗ ಒಪ್ಪಿಗೆಯ ಪತ್ರಗಳಿಗೆ ಸಹಿ ಹಾಕದ ಹೊರತು ನಾವೇನೂ ಮಾಡಲಾಗುವುದಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ.
ಆದರೆ ಪವನ್ ಕುಟುಂಬಸ್ಥರು ಒಪ್ಪಿಗೆಯ ಪತ್ರಗಳಿಗೆ ಸಹಿ ಹಾಕಲು ಸುತರಾಂ ಸಿದ್ಧರಿಲ್ಲ. Cognizant ಕಂಪನಿ ತಮ್ಮ ಪುತ್ರನ ಸಾವಿನ ಬಗ್ಗೆ ಅನೇಕ ವಿಷಯಗಳನ್ನು ಇತ್ಯರ್ಥಪಡಿಸಬೇಕಾಗಿದೆ. ಮೊದಲು ಆ ಕೆಲಸವಾಗಲಿ ಎಂದು ಹಠ ಹಿಡಿದಿದ್ದಾರೆ.
ಆದರೆ ಇದರ ಹೊರತಾಗಿಯೂ ನ್ಯೂಯಾರ್ಕ್ ಕಾನ್ಸುಲೇಟಿನ ಡೆಪ್ಯುಟಿ ಕಾನ್ಸುಲ್ ಜನರಲ್ ಪವನ್ ಕುಮಾರ್ ಬಜಾಜ್ ಅವರು Cognizant ಕಂಪನಿಯ ಅಧಿಕಾರಿಗಳು, ಟೆಕ್ಕಿ ಪವನ್ ಕುಮಾರನ ತಂದೆ ಅಂಜಯ್ಯ ಮತ್ತು MEA ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.
ಯಾವುದೇ ಮೃತ ದೇಹವನ್ನು ಸ್ವದೇಶಕ್ಕೆ ವಾಪಸ್ ಕಳಿಸಬೇಕೆಂದರೆ ಅಥವಾ ಆ ದೇಶದಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕೆಂದರೆ ಮೃತ ವ್ಯಕ್ತಿಯ ತಂದೆ ಅಥವಾ ಹತ್ತಿರದ ರಕ್ತ ಸಂಬಂಧಿಗಳು authorisation letterಗೆ ಸಹಿ ಹಾಕುವುದು ಕಾನೂನು ಪ್ರಕಾರ ಕಡ್ಡಾಯ. ಆದರೆ ಅಂಜಯ್ಯ ಅವರು ಅಂತಹ ಯಾವುದೇ ಪತ್ರಕ್ಕೂ ಸಹಿ ಹಾಕಲು ತಾವು ಸಿದ್ಧವಿಲ್ಲ ಎಂದು ಬಜಾಜ್ ಗೆ ಹೇಳಿದ್ದಾರೆ.
ಅನುಕಂಪವೂ ಬೇಡ, ಆಧಾರವೂ ಬೇಡ, ಕಾರಣ ಹೇಳಿ ಹೋಗಿ ಸಾಕು: ಈ ಮಧ್ಯೆ, ಅನುಕಂಪದ ಆಧಾರ ಮೇಲೆ ಟೆಕ್ಕಿ ಪವನ್ ಕುಮಾರ್ ಸೋದರಿ ಗುಣಶೀಲಾಗೆ Cognizant ಕಂಪನಿ ಉದ್ಯೋಗ ಕಲ್ಪಿಸಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂಬುದನ್ನು ಪವನ್ ಕುಟುಂಬಸ್ಥರು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಇನ್ನು ಭಾರಿ ಪರಿಹಾರ ಮೊತ್ತ ನೀಡಬೇಕು ಎಂದೂ ನಾವು ಕೇಳುತ್ತಿಲ್ಲ.
ಅಂತಹ ಯಾವುದೇ ವಿಚಾರವೂ ತಮ್ಮ ಬಳಿಯಿಲ್ಲ. ನಾವು ಕೇಳುತ್ತಿರುವುದು ಇಷ್ಟೇ - ನ್ಯೂಜೆರ್ಸಿ ಪೊಲೀಸರು ದಾಖಲಿಸಿರುವ FIRನ ಒಂದು ಪ್ರತಿ, suicide note, ಲ್ಯಾಪ್ ಟಾಪ್ ಮತ್ತು ಕೇಸಿಗೆ ಸಂಬಂಧಪಟ್ಟ ಇತರೆ ದಾಖಲೆಗಳನ್ನಷ್ಟೇ ಎಂದು ಶಿಕ್ಷಕಿ ಗುಣಶೀಲಾ ಸ್ಪಷ್ಟಪಡಿಸಿದ್ದಾರೆ.
ಜತೆಗೆ ಕುಟುಂಬದವರ ಪೈಕಿ ಒಬ್ಬರನ್ನು ನ್ಯೂಜೆರ್ಸಿಗೆ ಕಳಿಸಬೇಕು ಎಂದು ಪಟ್ಟುಹಿಡಿದಿರುವುದ ನಿಜ. ಇದರಿಂದ ಅಲ್ಲಿ ನಡೆದಿದ್ದೇನು ಎಂದು ಅರಿಯಲು ನಮ್ಮ ಕುಟುಂಬಕ್ಕೆ ನೆರವಾಗಲಿದೆ. ಹಾಗೆಯೇ, ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ ಪವನ್ ಕುಮಾರ್ ಹೆಸರು ಶಾಮೀಲಾಗಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ಈ ರಾಮಾಯಣದ ಮಧ್ಯೆ ಪವನ್ ಕುಮಾರ್ ಶವವನ್ನು ಭಾರತಕ್ಕೆ ತಂದು, ಅಂತ್ಯಕ್ರಿಯೆಗೆ ಅನುವು ಮಾಡಿಕೊಡುವುದು ಯಾವಾಗಲೋ ಕಾದುನೋಡಬೇಕು.