ಅದರ್ಶ ಹಗರಣ: ಅಶೋಕ್ ಚವಾಣ್ ಮೇಲೆ ಚಾರ್ಜ್ ಶೀಟ್?
ಸಿಬಿಐ ಸಲ್ಲಿಸಲಿರುವ ಮೊದಲ ಚಾರ್ಚ್ ಶೀಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅಲ್ಲದೆ ಮಾಜಿ ಸೇನಾಧಿಕಾರಿಗಳು,ಗಣ್ಯರ ಹೆಸರು ಸೇರ್ಪಡೆಯಾಗಿರುವ ಸಾಧ್ಯತೆಯಿದೆ.
ಅಶೋಕ್ ಅವರು ತಮ್ಮ ಅತ್ತೆ ಹಾಗೂ ಇಬ್ಬರು ಸಂಬಂಧಿಕರಿಗೆ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕೊಡಿಸಿರುವ ಹಗರಣ ಬೆಳಕಿಗೆ ಬಂದ ನಂತರ, ಮಹಾ ಸಿಎಂ ತಲೆದಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿತ್ತು.
ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ 31 ಮಹಡಿಯ ಆದರ್ಶ್ ಸೊಸೈಟಿ ಫ್ಲ್ಯಾಟ್ ಗಳನ್ನು ಕಾರ್ಗಿಲ್ ಸಮರದ ಹೀರೋಗಳು ಹಾಗೂ ಮೃತ ಯೋಧರ ಪತ್ನಿಯರಿಗೆ ನೀಡುವ ಸಲುವಾಗಿ ನಿರ್ಮಿಸಲಾಗಿತ್ತು, ಆದರೆ, ಇದನ್ನು ರಾಜಕಾರಣಿಗಳು ಹಾಗೂ ಅವರ ಸಂಬಂಧಿಗಳು, ನಿವೃತ್ತ ಸೇನಾಧಿಕಾರಿಗಳು ಬಳಸುತ್ತಿದ್ದರು. ಇದರಿಂದ ವಿವಾದ ಹುಟ್ಟಿಕೊಂಡಿತ್ತು.
ಸೇನೆಯ ಹಿರಿಯ ಅಧಿಕಾರಿಗಳಾದ ಎನ್ ಸಿ ವಿಜ್, ದೀಪಕ್ ಕಪೂರ್, ಮಾಧವೇಂದ್ರ ಸಿಂಗ್, ರಾಜಕಾರಣಿ ಶರದ್ ಪವಾರ್ ಸೇರಿದಂತೆ ಸುಮಾರು 103ಕ್ಕೂ ಅಧಿಕ ಗಣ್ಯರ ಹೆಸರು ಈ ಹಗರಣದಲ್ಲಿ ಸಿಲುಕಿಕೊಂಡಿತ್ತು. ಇಲ್ಲಿ ಫ್ಲ್ಯಾಟ್ ಹೊಂದಿದ್ದ ಸೇನೆಯ ನಿವೃತ್ತ ಅಧಿಕಾರಿಗಳು, ಕಾರ್ಗಿಲ್ ಹುತಾತ್ಮರ ಕುಟುಂಬಗಳಿಗೆ ಮರಳಿಸಿದ್ದರು. ಈ ನಡುವೆ ಫ್ಲ್ಯಾಟ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿತ್ತು..
ಜೂ.15ಕ್ಕೆ ಮೊದಲ ಚಾರ್ಚ್ ಶೀಟ್ ಸಲ್ಲಿಸಬೇಕಿದ್ದ ಸಿಬಿಐ ಇನ್ನಷ್ಟು ಕಾಲ ಅಗತ್ಯವಿದೆ ಎಂದು ಕೋರ್ಟೀಗೆ ಹೇಳಿತ್ತು. ಈ ಮಧ್ಯೆ ಅನೇಕ ಗಣ್ಯರು ಜಾಮೀನು ಪಡೆದು ಪ್ರಕರಣದಿಂದ ಹೊರ ನಡೆದಿದ್ದರು.
ಮಹಾರಾಷ್ಟ್ರದ ಆರ್ಥಿಕ ಕಾರ್ಯದರ್ಶಿ ಪ್ರದೀಪ್ ವ್ಯಾಸ್, ಪಿವಿ ದೇಶ್ ಮುಖ್, ನಿವೃತ್ತ ಬ್ರಿಗೇಡಿಯರ್ ಎಂ ಎಂ ವಾಂಚೂ, ಮಾಜಿ ಡಿಫೇನ್ಸ್ ಎಸ್ಟೇಸ್ಟ್ ಅಧಿಕಾರಿ ಆರ್ ಸಿ ಥಾಕೂರ್, ನಿವೃತ್ತ ಮೇಜರ್ ಜನರಲ್ ಎಆರ್ ಕುಮಾರ್, ನಿವೃತ್ತ ಮೇಜರ್ ಜನರಲ್ ಟಿಕೆ ಕೌಲ್, ಜೈರಾಜ್ ಪಾಠಕ್, ರಾಮಚಂದ್ ತಿವಾರಿ ಹಾಗೂ ಮಾಜಿ ಕಾಂಗ್ರೆಸ್ ಶಾಸಕ ಕೆಎಲ್ ಗಿಡ್ವಾಣಿ ಅವರು ಜಾಮೀನು ಪಡೆದಿದ್ದರು.
ಅಶೋಕ್ ಚವಾಣ್ ತಲೆದಂಡದ ನಂತರ ಸಿಬಿಐ ಈ ಪ್ರಕರಣದ ತನಿಖೆ ಆರಂಭಿಸಿ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ವಿಲಾಸ್ ರಾವ್ ದೇಶ್ ಮುಖ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಸಿಬಿಐ ಸಲ್ಲಿಸಲಿರುವ ದೋಷಾರೋಪಣ ಪಟ್ಟಿಯಲ್ಲಿ ಇನ್ನು ಯಾವ ಯಾವ ಗಣ್ಯರ ಹೆಸರು ಇದೆ ಎಂಬುದು ತಿಳಿದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.