ವಿಶ್ವಪಾರಂಪರಿಕಾ ಪಟ್ಟಿಗೆ ರಾಜ್ಯದ 8 ತಾಣಗಳು
ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯನ್ನು ವಿಶ್ವದ ಎಂಟು ಅತ್ಯಂತ ವೈಭವಯುತ ಜೀವ ವೈವಿಧ್ಯಗಳ ಪೈಕಿ ಒಂದು ಎಂದು ಗುರುತಿಸಲಾಗಿದೆ. ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾದ ಘಟ್ಟದ ಅರಣ್ಯಗಳು ಭಾರತೀಯ ಮಳೆ ಮಾರುತ ವಿನ್ಯಾಸದ ಮೇಲೆ ಪರಿಣಾಮ ಬೀರುತ್ತವೆ.
ಪಶ್ಚಿಮ ಘಟ್ಟ ಪರ್ವತ ಶ್ರೇಣಿ ಗುಜರಾತ್ ಮತ್ತು ಮಹಾರಾಷ್ಟ್ರದ ಗಡಿಯಲ್ಲಿ ಆರಂಭಗೊಳ್ಳುತ್ತದೆ ಹಾಗೂ ಮಹಾರಾಷ್ಟ್ರ, ಗೋವ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳ ಮೂಲಕ ಹಾದು ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳುತ್ತದೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೊ) ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಿದೆ.
ಜರ್ಮನಿಯ ಐತಿಹಾಸಿಕ ನಾಟಕ ಗೃಹ (ಒಪೇರಾ ಹೌಸ್), ಪೋರ್ಚುಗಲ್ನ ಒಂದು ಗಡಿ ಪಟ್ಟಣ ಮತ್ತು ಅದರ ಸುತ್ತಲಿನ ಕೋಟೆ ಮತ್ತು ಚಾಡ್ನ ಪರಸ್ಪರ ಸಂಪರ್ಕವುಳ್ಳ 18 ಸರೋವರಗಳು- ವಿಶ್ವ ಪರಂಪರೆ ತಾಣ ಪಟ್ಟಿಗೆ ಸೇರಿದ ಇತರ ಕೆಲವು ಸ್ಥಳಗಳು. ರಾಜಸ್ಥಾನದ ಏಳು ಬೆಟ್ಟಗಳ ಕೋಟೆ ಪಟ್ಟಿಗೆ ಸೇರ್ಪಡೆಗೊಳ್ಳುವಲ್ಲಿ ವಿಫಲವಾಗಿದೆ.
ಕರ್ನಾಟಕದ 8 ಸ್ಥಳಗಳು : ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪುಷ್ಪಗಿರಿ, ಬ್ರಹ್ಮಗಿರಿ, ತಲಕಾವೇರಿ, ಕುದುರೆಮುಖ, ಸೋಮೇಶ್ವರ ಮೀಸಲು ಅರಣ್ಯ, ಸೋಮೇಶ್ವರ ರಕ್ಷಿತಾರಣ್ಯ, ಆಗುಂಬೆ ಸಂರಕ್ಷಿತ ಅರಣ್ಯ ಹಾಗೂ ಬಲಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಯುನೆಸ್ಕೋ ಮಾನ್ಯತೆ ಸಿಕ್ಕಿದೆ. ಕೊಡಗು ಜಿಲ್ಲೆಯ 652 ಚ.ಕಿ.ಮೀ ವ್ಯಾಪ್ತಿ ಪ್ರದೇಶ ಇದರಲ್ಲಿ ಸೇರಿದೆ.
ಪಶ್ಚಿಮ ಘಟ್ಟ ಶ್ರೇಣಿ ದೇಶದ ಶೇ 6 ರಷ್ಟು ಭೂ ಭಾಗವನ್ನು ಮಾತ್ರ ವ್ಯಾಪಿಸಿದೆ. ಆದರೆ, ದೇಶದಲ್ಲಿ ಕಾಣಬಹುದಾದ ಜೀವ ಪ್ರಭೇದಗಳ ಪೈಕಿ ಶೇ 30 ರಷ್ಟು ಈ ಘಟ್ಟಗಳಲ್ಲೇ ಇದೆ. ಶೇ 30 ರಷ್ಟು ಏಷ್ಯಾದ ಆನೆಗಳು, ಶೇ 17ರಷ್ಟು ಹುಲಿಗಳು, 5 ಸಾವಿರಕ್ಕೂ ಅಧಿಕ ಹೂ ಬಿಡುವ ಸಸ್ಯ, 139 ಸಸ್ತನಿಗಳು, 508ಕ್ಕೂ ಅಧಿಕ ಪಕ್ಷಿ ಪ್ರಭೇದಗಳು ಹಾಗೂ 179 ಉಭಯಚರವಾಸಿಗಳು ಕಾಣ ಸಿಗುತ್ತದೆ.ಇವುಗಳಲ್ಲಿ 325 ಜೀವ ಪ್ರಭೇದಗಳು ವಿನಾಶದ ಅಂಚಿನಲ್ಲಿದೆ. ಹಲವು ಜೀವನದಿಗಳ ಉಗಮ ಸ್ಥಾನವೂ ಪಶ್ಚಿಮ ಘಟ್ಟದಲ್ಲೇ ಆಗುತ್ತದೆ.
ಥ್ಯಾಂಕ್ಸ್ ಟು ವಾಜಪೇಯಿ: 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೂರದರ್ಶಿತ್ವದ ಫಲವಾಗಿ ಇಂದು ಯುನೆಸ್ಕೋ ಮಾನ್ಯತೆ ಸಿಗುತ್ತಿದೆ. ಅರಣ್ಯ ಪ್ರದೇಶವನ್ನು ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸುವ ಪ್ರಸ್ತಾವನೆಯನ್ನು ವಾಜಪೇಯಿ ಸರ್ಕಾರ ಮುಂದಿಟ್ಟಿತ್ತು. ಈಗಲೂ ಭಾರತ ಸರ್ಕಾರ ಮುಂದುವರೆಸಿಕೊಂಡು ಬಂದಿದೆ.
ವಿಶ್ವದ 17 ರಾಷ್ಟ್ರಗಳು ಭಾರತದ ಪರ ಮಂಡಿಸಿದ ವಾದ, ಭಾರತದ ನಿಯೋಗ ನೀಡಿದ ಸಮರ್ಥನೆಗೆ ತಲೆದೂಗಿದ ಯುನೆಸ್ಕೋ ಸಮಿತಿ, ಪಶ್ಚಿಮ ಘಟ್ಟ ಶ್ರೇಣಿಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದರು.
ಕೈಗಾರೀಕರಣ, ವಾಣಿಜ್ಯ ಆಧಾರಿತ ಕೃಷಿ, ಗಣಿಗಾರಿಕೆಯಿಂದ ಜೀವ ಪ್ರಭೇದಗಳಿಗೆ ತೊಂದರೆ ಉಂಟಾಗುವ ಭೀತಿ ಎದುರಾಗಿತ್ತು. ಪಶ್ಚಿಮ ಘಟ್ಟಗಳ ರಕ್ಷಣೆ ಸಲುವಾಗಿ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ ಕೂಡಾ ಅರಣ್ಯ ಪ್ರದೇಶದಲ್ಲಿ ಉಂಟಾಗುತ್ತಿರುವ ಹಾವಳಿಯ ಬಗ್ಗೆ ವರದಿ ನೀಡಿದ್ದರು. ಹೀಗಾಗಿ ವಿಶ್ವ ಪಾರಂಪರಿಕಾ ಪಟ್ಟಿಗೆ ಪಶ್ಚಿಮಘಟ್ಟ ಸೇರ್ಪಡೆಯಾಗಿರುವುದು ಸಂತಸ ತಂದಿದೆ.
ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದು ವೈಲ್ಡ್ ಲೈಫ್ ಫಸ್ಟ್ ಸಂಸ್ಥೆ ಸಂಚಾಲಕ ಪ್ರವೀಣ್ ಭಾರ್ಗವ್ ಹೇಳಿದ್ದಾರೆ. ಅನೇಕ ವರ್ಷಗಳಿಂದ ಪಶ್ಚಿಮಘಟ್ಟ ಶ್ರೇಣಿಯನ್ನು ವಿಶ್ವ ಪಾರಂಪರಿಕ ತಾಣಕ್ಕೆ ಸೇಪರ್ಡೆಗೊಳಿಸಲು ಈ ಸಂಸ್ಥೆ ನಿರಂತರವಾಗಿ ಪ್ರಯತ್ನಿಸಿತ್ತು.