ಮಡಿಕೇರಿಯಲ್ಲಿ ಮಿಸ್ಡ್ ಕಾಲ್ ಮರ್ಡರ್ ಮಿಸ್ಟರಿ!
ಕೊಲೆಯಾದವಳು ಕೊಯಮತ್ತೂರಿನಲ್ಲಿ ಕೆಲಸದಲ್ಲಿದ್ದ 30 ವರ್ಷದ ಗೀತಾ ಅಲಿಯಾಸ್ ಲತಾ. ಮರ್ಡರ್ ಮಾಡಿದವನು ಕೊಡಗಿನ ಟಿ. ಶೆಟ್ಟಿಗೆರೆಯ ರವಿ ಅಲಿಯಾಸ್ ಕರ್ತಮಾಡ ಕುಟ್ಟಣ್ಣ. ಲತಾಳ ಕೊಲೆಯಾಗಿದ್ದು ಜೂನ್ 16ರಂದು ವಿರಾಜಪೇಟೆಯ ಲಾಡ್ಜ್ವೊಂದರಲ್ಲಿ. ಲೈಂಗಿಕ ಸಂಪರ್ಕ ಸಾಧಿಸಿದ ನಂತರ ಕತ್ತು ಹಿಸುಕಿ ಬರ್ಬರವಾಗಿ ಆಕೆಯನ್ನು ಕೊಲೆ ಮಾಡಲಾಗಿತ್ತು.
ಈ ದಾರುಣ ಕಥೆಯ ಆರಂಭ ಆಗಿದ್ದು ಆರು ತಿಂಗಳ ಹಿಂದೆ. ರವಿಗೆ ಅಚಾನಕ್ಕಾಗಿ ಲತಾಳಿಂದ ಮಿಸ್ಡ್ ಕಾಲ್ ಬಂದಿದೆ. ಯಾರಿರಬಹುದು ಎಂದು ಚಿಂತಿಸಿದ ರವಿ ನಂತರ ಲತಾಗೆ ಮತ್ತೆ ಕರೆ ಮಾಡಿದ್ದಾನೆ. ಲತಾಳ ಮಾತಿಗೆ ಮರುಳಾದ ರವಿ ಆಕೆಯೊಡನೆ ಸ್ನೇಹ ಬೆಳೆಸಿದ್ದಾನೆ. ನಂತರ ಸಾಕಷ್ಟು ದಿನ ಮಾತುಕತೆ ನಡೆದ ನಂತರ ಇಬ್ಬರೂ ಭೇಟಿಯಾಗಲು ನಿರ್ಧರಿಸಿದ್ದಾರೆ. ಆಕೆಯನ್ನು ವಿರಾಜಪೇಟೆಗೆ ರವಿ ಆಹ್ವಾನಿಸಿದ್ದಾನೆ.
ಅವರಿಬ್ಬರು ವಿರಾಜಪೇಟೆಯಲ್ಲಿ ಭೇಟಿಯಾದಾಗ ರವಿಗೆ ಭಾರೀ ಆಘಾತ ಕಾದಿತ್ತು. ಆತನ ಕಲ್ಪನೆಯ ರಾಜಕುಮಾರಿ ರಾಜಕುಮಾರಿಯ ಹಾಗೆ ಇರಲಿಲ್ಲ, ಬದಲಿಗೆ ಆಕೆ ಅಷ್ಟೇನು ಸುಂದರವಾಗಿರಲಿಲ್ಲ. ಇದರ ಜೊತೆಗೆ ರವಿಗೆ ಮತ್ತೊಂದು ಆಘಾತ ಕಾದಿತ್ತು. ಅದೇನೆಂದರೆ, ಲತಾ ತಾನು ಮದುವೆಯಾಗಿರುವುದು ಮತ್ತು ತನಗೆ ಇಬ್ಬರು ಮಕ್ಕಳು ಇರುವುದನ್ನು ಸ್ನೇಹ ಬೆಳೆಸಿದಾಗ ಬಹಿರಂಗಪಡಿಸಿರಲಿಲ್ಲ.
ನಂತರ ಹೇಗಿದ್ದರೂ ಭೇಟಿಯಾಗಿದ್ದೇವೆ, ಮದುವೆಯಂತೂ ಸಾಧ್ಯವಿಲ್ಲ ಎಂದು ಅರಿತ ರವಿ ಆಕೆಯೊಡನೆ ಲಾಡ್ಜಿನಲ್ಲಿ ಒಂದು ದಿನ ಕಳೆಯಲು ಆಕೆಯನ್ನು ಕೇಳಿಕೊಂಡಿದ್ದಾನೆ. ಒಪ್ಪಿದ ಲತಾ ಮತ್ತು ರವಿಯ ನಡುವೆ ಲೈಂಗಿಕ ಸಂಪರ್ಕ ಏರ್ಪಟ್ಟಿದೆ. ಆದರೆ, ಮದುವೆಯ ವಿಷಯಕ್ಕೆ ಬಂದಾಗ ಇಬ್ಬರ ನಡುವೆ ಸಮ್ಮತ ಇಲ್ಲದ್ದರಿಂದ ಕಲಹ ಶರುವಾಗಿದೆ. ರವಿ ಲತಾಳನ್ನು ಕತ್ತು ಹಿಸುಕಿ ಕೊಂದುಬಿಟ್ಟಿದ್ದಾನೆ.
ಕೊಲೆಯ ಜಾಡು ಹಿಡಿದ ಪೊಲೀಸರು ಲತಾಳ ಮೊಬೈಲಿಗೆ ಬಂದ ಕರೆಗಳನ್ನು ಜಾಲಾಡಿದಾಗ ರವಿ ಈ ಕೊಲೆಯ ಹಿಂದಿರುವುದು ತಿಳಿದುಬಂದಿದೆ. ಅಲ್ಲದೆ, ಲಾಡ್ಜಿನಲ್ಲಿದ್ದ ಸಿಸಿಟಿವಿಯಿಂದ ಕೊಲೆಯ ಹಿಂದೆ ರವಿಯ ಕೈವಾಡ ಇರುವುದು ಬಯಲಾಗಿದೆ. ಲಾಡ್ಜಿಗೆ ಬಂದಾಗ ರವಿ ಮೈಸೂರಿನ ವಿಳಾಸ ನೀಡಿದ್ದ. ಅಲ್ಲಿ ಸಿಗದಿದ್ದಾಗ ಆತನ ಜಾಡು ಹಿಡಿದು ಬೆಂಗಳೂರಿಗೆ ಪೊಲೀಸರು ಬಂದಿದ್ದಾರೆ. ಬೆಂಗಳೂರಿನ ಎಂಟಿಆರ್ನಲ್ಲಿ ಕೆಲಸ ಮಾಡುತ್ತಿದ್ದ ರವಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ಕೊಲೆಯ ಹಿಂದಿನ ಕಥೆಯನ್ನು ರವಿ ಬಿಚ್ಚಿಟ್ಟಿದ್ದಾನೆ. ಅವರಿಬ್ಬರ ನಡುವೆ ಸ್ನೇಹ ಬೆಳೆದಿದ್ದು, ಆಕೆಯನ್ನು ಕಂಡಾಗ ಆತನಿಗೆ ಭ್ರಮನಿರಸನವಾಗಿದ್ದು, ಲಾಡ್ಜಿನಲ್ಲಿ ಆಕೆಯನ್ನು ಕೂಡಿದ್ದು, ನಂತರ ಕೊಲೆ ಮಾಡಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ರವಿಯನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.