ಉದಾಸಿ ಭ್ರಷ್ಟಾಚಾರದ ದಾಖಲೆ ತೆರೆದಿಟ್ಟ ಕುಮಾರಸ್ವಾಮಿ
ಅರಣ್ಯ ಸಚಿವ ಸಿಪಿ ಯೋಗೇಶ್ವರ್ ಅವರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಉದಾಸಿ ವಿರುದ್ಧ ನೀಡಿರುವ ಪತ್ರವನ್ನೇ ಆಧಾರವಾಗಿಟ್ಟುಕೊಂಡು ಲೋಕೋಪಯೋಗಿ ಸಚಿವ ಉದಾಸಿ ಮೇಲೆ ತನಿಖೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಣದ ಪ್ರಮುಖ ಸಚಿವ ಸಿ.ಎಂ.ಉದಾಸಿ ಬೆಳಗಾವಿಯಲ್ಲಿ ನಿರ್ಮಿಸುತ್ತಿರುವ ಸುವರ್ಣ ಸೌಧ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಬೆಳಗಾವಿಯಲ್ಲಿ ನಿರ್ಮಾಣ ಮಾಡುತ್ತಿರುವ ಸುವರ್ಣಸೌಧ ಕಾಮಗಾರಿಯ ಟೆಂಡರ್ ಮೊತ್ತವನ್ನು 236 ಕೋಟಿ ರು.ಗಳಿಂದ ಏಕಾಏಕಿ 500 ಕೋಟಿ ರೂಗಳಿಗೆ ಹೆಚ್ಚಿಸಲಾಗಿದ್ದು ಏಕೆ? ಇದರ ಲೆಕ್ಕ ಯಾರ ಬಳಿ ಇದೆ? ಭ್ರಷ್ಟಾಚಾರ ನಡೆದಿಲ್ಲ ಎಂದು ಸಚಿವ ಉದಾಸಿ ಸಾಬೀತು ಮಾಡಬಲ್ಲರೇ? ಎಂದು ಪ್ರಶ್ನಿಸಿದ ಕುಮಾರ್, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸವುದು ಒಳ್ಳೆಯದು ಎಂದರು.
ಗುತ್ತಿಗೆದಾರರು 1 ಕೋಟಿ ರೂಪಾಯಿ ಕಾಮಗಾರಿಗೆ 10 ಲಕ್ಷ ರೂ ಮುಂಗಡ ಲಂಚ ನೀಡಿದರೆ ಟೆಂಡರ್ ಇಲ್ಲದೆಯೂ ಕಾಮಗಾರಿ ಮಂಜೂರಾಗುತ್ತದೆ. ರಾಮನಗರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಅವ್ಯವಹಾರ, 300 ಕೋಟಿ ರು ಗೋಲ್ ಮಾಲ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದರು.
ಯೋಗಿ ಬರೆದ ಪತ್ರ: ಸುವರ್ಣಸೌಧ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಚಿವರೊಬ್ಬರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸಚಿವ ನಿಜಕ್ಕೂ ಪ್ರಾಮಾಣಿಕರಿದ್ದರೆ ಸಿಬಿಐ ತನಿಖೆಗೆ ಸಿದ್ಧರಾಗಬೇಕು. ಅವರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಅಗತ್ಯಬಿದ್ದರೆ ಬಿಡುಗಡೆ ಮಾಡುತ್ತೇನೆ ಎಂದರು.
ಸುವರ್ಣಸೌಧ ಕಾಮಗಾರಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಏಕೆ ಬಿಡುಗಡೆ ಮಾಡಲಾಯಿತು. ಯಾವ ಆಧಾರದಲ್ಲಿ ಹಣ ಬಿಡುಗಡೆಯಾಗಿದೆ. ಈ ಬಗ್ಗೆ ಸಚಿವರು ಸ್ಪಷ್ಟೀಕರಣ ಕೊಡಬೇಕು. ಜನರ ತೆರಿಗೆ ಹಣವನ್ನು ಮನಸ್ಸಿಗೆ ಬಂದಂತೆ ವೆಚ್ಚ ಮಾಡಲು ಸಾಧ್ಯವಿಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ನಡೆದರೂ ಸುಮ್ಮನೆ ನೋಡುತ್ತಾ ಕೂರಲು ಜೆಡಿಎಸ್ ಪಕ್ಷಕ್ಕೆ ಆಗುವುದಿಲ್ಲ.
ಮುಖ್ಯಮಂತ್ರಿ ಸದಾನಂದಗೌಡರ ಬಳಿ ಸಚಿವ ಉದಾಸಿ ಭ್ರಷ್ಟಾಚಾರ ನಡೆಸಿರುವ ಮಾಹಿತಿ, ದಾಖಲೆ ಇದೆ. ಹೀಗಾಗಿ ಸಿಎಂ ತನಿಖೆಗೆ ಆದೇಶಿಸಬಹುದೆಂಬ ಭಯದಿಂದ ಅವರ ವಿರುದ್ದ ಬಂಡಾಯ ಸಾರುವ ಕೆಲಸ ಮಾಡಿದ್ದಾರೆ. ಈ ರೀತಿ ಬ್ಲಾಕ್ ಮೇಲ್ ರಾಜಕೀಯ ಮಾಡುವ ಬದಲು ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಹೊಸ ಜನಾದೇಶ ಪಡೆಯುವಂತೆ ಸವಾಲು ಹಾಕಿದರು.
ಬಿಜೆಪಿಯಲ್ಲಿ ಬಹುತೇಕ ಭ್ರಷ್ಟ ಸಚಿವರಿದ್ದಾರೆ. ಅವರಲ್ಲಿನ ಹುಳುಕು ಮುಚ್ಚಿಕೊಳ್ಳಲು ಅನಗತ್ಯವಾಗಿ ದೇವೇಗೌಡರ ಕುಟುಂಬದ ವಿರುದ್ದ ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳಿಗೆ ಗೌಡರ ಕುಟುಂಬ ಹೆದರುವ ಪ್ರಶ್ನೆಯೇ ಇಲ್ಲ. ಇಂತಹ ಸಾವಿರ ಜನರನ್ನು ದೇವೇಗೌಡರು ಅವರ ರಾಜಕೀಯ ಜೀವನದಲ್ಲಿ ನೋಡಿದ್ದಾರೆ ಎಂದರು.