ಯಡಿಯೂರಪ್ಪ ಬಣದ 8 ಸಚಿವರ ರಾಜೀನಾಮೆ
ಮೊದಲ ಹಂತದಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ 8 ಜನ ಸಚಿವರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ತಮ್ಮ ರಾಜೀನಾಮೆ ನೀಡಿದ್ದಾರೆ. ಶುಕ್ರವಾರ(ಜೂ.29) ಸಂಜೆ ಸದಾನಂದ ಗೌಡರ ಅನುಗ್ರಹ ನಿವಾಸಕ್ಕೆ ತೆರಳಿ ಮೂರು ಸಾಲಿನ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
ಇದೀಗ ಬಂದ ಸುದ್ದಿ:(ಸಮಯ 7.30) ಯಡಿಯೂರಪ್ಪ ಬಣದ ಎಂಟು ಜನ ಸಚಿವರು ನೀಡಿದ ರಾಜೀನಾಮೆಯನ್ನು ಅಂಗೀಕರಿಸದಿರುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಸೂಚಿಸಿದ್ದಾರೆ.
ಶಾಸಕಾಂಗ ಸಭೆ ಕರೆಯದೆ ಶಾಸಕರು, ಸಚಿವರನ್ನು ನಿರ್ಲಕ್ಷಿಸಿರುವ ಸದಾನಂದ ಗೌಡರ ಮೇಲೆ ಕಾರ್ಯಕರ್ತರು ವಿಶ್ವಾಸ ಕಳೆದುಕೊಂಡಿದ್ದಾರೆ. ಪಕ್ಷ ಇಬ್ಭಾಗವಾಗುವುದನ್ನು ತಪ್ಪಿಸಿ ಸರ್ಕಾರವನ್ನು ಉಳಿಸಿಕೊಳ್ಳಲು ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಜಗದೀಶ್ ಶೆಟ್ಟರ್ ಹಾಗೂ ಸಿಎಂ ಉದಾಸಿ ಜೊತೆಗೆ ಉಳಿದ ಬೆಂಬಲಿಗರು ರಾಜೀನಾಮೆ ನೀಡಿದ್ದಾರೆ.
ಯಡಿಯೂರಪ್ಪ ಬೆಂಬಲಿಗ ಸಚಿವರಾದ ಉಮೇಶ್ ಕತ್ತಿ, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ರೇವೂ ನಾಯಕ ಬೆಳಮಗಿ, ಬಸವರಾಜ್ ಬೊಮ್ಮಾಯಿ ನೇರವಾಗಿ ಮುಖ್ಯಮಂತ್ರಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಆದರೆ, ರಾಜೀನಾಮೆ ನೀಡಿದ ಎಲ್ಲಾ ಸಚಿವರುಗಳು ತಮ್ಮ ಶಾಸಕ ಸ್ಥಾನವನ್ನು ಹಾಗೆ ಉಳಿಸಿಕೊಂಡಿದ್ದಾರೆ.
ಆದರೆ, ಈ ಪೈಕಿ ಶೋಭಾ ಕರಂದ್ಲಾಜೆ ಮತ್ತು ರಾಜೂಗೌಡ ಅವರ ರಾಜೀನಾಮೆ ಸಲ್ಲಿಕೆ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆದರೆ. ಇಬ್ಬರೂ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ನಂತರ ಎಲ್ಲರೂ ಖಾಸಗಿ ಕಾರಿನಲ್ಲಿ ಕೂತು ಜಗದೀಶ್ ಶೆಟ್ಟರ್ ನಿವಾಸಕ್ಕೆ ತೆರಳಿದ್ದಾರೆ.
ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ಸದಾನಂದ ಗೌಡರು, ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ರಾಜೀನಾಮೆ ನೀಡ ಬಯಸಿರುವ ಉಳಿದ ಸಚಿವರು ನೇರವಾಗಿ ನನ್ನನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬಹುದು. ಶಾಸಕಾಂಗ ಸಭೆ ಕರೆಯಲು ಯಾವುದೇ ಅಭ್ಯಂತರವಿಲ್ಲ. ಹೈ ಕಮಾಂಡ್ ಅವರ ಆದೇಶದಂತೆ ನಾನು ನಡೆದುಕೊಳ್ಳುತ್ತೇನೆ ಎಂದು ಸದಾನಂದ ಗೌಡರು ಹೇಳಿದ್ದಾರೆ.
ಸದಾನಂದ ಗೌಡ ನಾಯಕತ್ವದಲ್ಲಿ ವಿಶ್ವಾಸ ಕೊರತೆ ಎದುರಾಗಿರುವುದರಿಂದ ನಾವು ರಾಜೀನಾಮೆ ನೀಡಿದ್ದೇವೆ. ಇದು ಬೆದರಿಕೆಯಲ್ಲ. ಕೇಂದ್ರ ನಾಯಕರ ವಿಳಂಬ ಧೋರಣೆಗೆ ಶಾಸಕರು ಬೇಸತ್ತಿದ್ದಾರೆ ಎಂದು ಸಿಎಂ ಉದಾಸಿ ಹೇಳಿದ್ದಾರೆ.