ಎಲ್ಲದ್ದಕ್ಕೂ ಸೋಮನಹಳ್ಳಿ ಕೃಷ್ಣ ಕಾರಣ ಎಂದ್ರೆ ಕಷ್ಟ
ಪ್ರಥಮ ವರದಿ ಸಲ್ಲಿಸಿದ ಮೇಲೂ ಮತ್ತೊಂದು ವರದಿಯನ್ನು ಸಲ್ಲಿಸಿರುವುದು ಅವಾಸ್ತವಿಕ ಹಾಗೂ ಅಪ್ರಸ್ತುತವಾಗಿದೆ. ನನ್ನ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ರೀತಿ ಕ್ರಮ ಕೈಗೊಳ್ಳಲಾಗಿದೆ. ಸಿಇಸಿಗೆ ಬಿಜೆಪಿ ಸರ್ಕಾರ ಸಲ್ಲಿಸಿರುವ ಹೆಚ್ಚುವರಿ ಅಭಿಪ್ರಾಯ ರೂಪದ ವರದಿಯನ್ನು ಕೂಡಲೇ ಹಿಂಪಡೆಯುವಂತೆ ಸದಾನಂದ ಗೌಡರನ್ನು ಎಸ್ ಎಂ ಕೃಷ್ಣ ಆಗ್ರಹಿಸಿದ್ದಾರೆ.
ಅಕ್ರಮ ಗಣಿಗಾರಿಕೆಯ ಸುಳಿಯಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿಗಳಾದ ಎಸ್ಎಂ ಕೃಷ್ಣ, ಧರ್ಮ ಸಿಂಗ್ ಮತ್ತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಚುರುಕು ಮುಟ್ಟಿಸಿದೆ. ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಸದಾನಂದ ಗೌಡರ ಸರ್ಕಾರ 11 ಪುಟಗಳ ಪರಿಷ್ಕೃತ ವರದಿಯನ್ನು ಕೇಂದ್ರಿಯ ಉನ್ನತಾಧಿಕಾರಿಗಳ ಸಮಿತಿ(CEC)ಗೆ ಸಲ್ಲಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮೇಲೆ ಸಿಬಿಐ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿಗಳ ಮೇಲೆ ಹೆಚ್ಚಿನ ತನಿಖೆ ಆಗ್ರಹಿಸುವಂತೆ ಸದಾನಂದ ಗೌಡರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿತ್ತು.
ಮೂವರು ಮಾಜಿ ಸಿಎಂಗಳ ಮೇಲೆ ಸಿಬಿಐ ತನಿಖೆ ನಡೆಸುವ ಬಗ್ಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯ ಸರ್ಕಾರವನ್ನು ಸಿಇಸಿ ಕೋರಿತ್ತು. ಆದರೆ, ಈ ಬಗ್ಗೆ ಕೇಂದ್ರ ಉನ್ನತಾಧಿಕಾರಿಗಳ ಸಮಿತಿಯೇ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿ ಸದಾನಂದ ಗೌಡರ ಸರ್ಕಾರ ನುಣುಚಿಕೊಂಡಿದೆ.
ಸಿಇಸಿ ಮನವಿ ಇಲ್ಲದೆ ಹೆಚ್ಚುವರಿ ಅಭಿಪ್ರಾಯವನ್ನು ಬಿಜೆಪಿ ಸರ್ಕಾರ ಏಕೆ ನೀಡಿದೆ? ಡಿಸೆಂಬರ್ 16, 2002ರಲ್ಲಿ 26,464.58 ಚದರ ಕಿಮೀ ಭೂ ಪ್ರದೇಶದಲ್ಲಿ 11,620.56 ಚದರ ಕಿಮೀ ಪ್ರದೇಶ ಡಿ ರಿಸರ್ವ್ ಮಾಡಲು ಅಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದು ನನ್ನ ವೈಯಕ್ತಿಕ ತೀರ್ಮಾನವಲ್ಲ. ಮೊದಲ ವರದಿಯಲ್ಲಿ ಈ ಬಗ್ಗೆ ಪ್ರ್ತಸ್ತಾಪಿಸಿದ ಸರ್ಕಾರ ಮತ್ತೊಮ್ಮೆ ವರದಿಯನ್ನು ತಿರುಚಿ ಅರಣ್ಯ ಭೂಮಿಯನ್ನು ಡಿ ರಿಸರ್ವ್ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದೆ.ಮತ್ತೊಮ್ಮೆ ಕಳುಹಿಸಿರುವುದು ಏಕೆ ಎಂದು ಕೃಷ್ಣ ಪ್ರಶ್ನಿಸಿದ್ದಾರೆ.
ಮೈಸೂರು ಮಿನಿರಲ್ಸ್ ಸಂಸ್ಥೆಗೆ ಅಪಾರ ನಷ್ಟವಿದ್ದಕ್ಕೂ ನನಗೂ ಸಂಬಂಧವಿಲ್ಲ. ರಾಜ್ಯ ಸರ್ಕಾರದ ಕೈಗಾರಿಕ ಮತ್ತು ವಾಣಿಜ್ಯ ಇಲಾಖೆ ವ್ಯಾಪ್ತಿಗೆ ಬರುವ ಈ ಸಂಸ್ಥೆ ಪ್ರತ್ಯೇಕ ನಿರ್ದೇಶಕ ಮಂಡಳಿ ಹೊಂದಿದೆ. ರಾಜ್ಯದಲ್ಲಿ ಈ ರೀತಿ 150ಕ್ಕೂ ಅಧಿಕ ಸ್ವಾಯುತ್ತ ಸಂಸ್ಥೆಗಳಿದೆ. ಆ ಸಂಸ್ಥೆಗಳ ಏಳಿಗೆ, ನಷ್ಟ ಕುರಿತು ಆಯಾ ನಿರ್ದೇಶಕರ ಮಂಡಳಿ ನಿರ್ಣಯ ಕೈಗೊಳ್ಳುತ್ತದೆ. ಆದರೆ, ಎಲ್ಲದ್ದಕ್ಕೂ ಮುಖ್ಯಮಂತ್ರಿಯೇ ಕಾರಣ ಎಂದು ಸಿಇಸಿಗೆ ತಪ್ಪು ಮಾಹಿತಿ ನೀಡಿರುವುದು ಸರಿಯಿಲ್ಲ ಎಂದು ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.