ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧದ ಪ್ರಕರಣವೇನು?
2008ರಲ್ಲಿ ವಿಶ್ವೇಶ್ವರ ಭಟ್ ಅವರು ಸಂಪಾದಕರಾಗಿದ್ದ ದಿನಪತ್ರಿಕೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಅಕ್ರಮಗಳ ಕುರಿತು ವರದಿಯೊಂದು ಪ್ರಕಟವಾಗಿತ್ತು. ಅದರಲ್ಲಿ ಬೆಂಗಳೂರು ವಿವಿ ಸಿಂಡಿಕೇಟಿನ ಸದಸ್ಯರಾದ ಎಪಿ ರಂಗನಾಥ್ ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗಿತ್ತು. ಅದರ ವಿರುದ್ಧ ವಕೀಲರೂ ಆಗಿರುವ ಎಪಿ ರಂಗನಾಥ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಬಗ್ಗೆ ಜ್ಞಾನಭಾರತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅದರ ಸಲುವಾಗಿ ಕೋರ್ಟಿಗೆ ಹಾಜರಾಗುವಂತೆ ವಿಶ್ವೇಶ್ವರ ಭಟ್ ಅವರಿಗೆ ಈ ಹಿಂದೆಯೇ ಸಮನ್ಸ್ ಜಾರಿ ಮಾಡಲಾಗಿತ್ತು. ಏಳು ಬಾರಿ ಸಮನ್ಸ್ ಹೊರಡಿಸಿದ್ದರೂ ಭಟ್ ಅದನ್ನು ಸ್ವೀಕರಿಸಿರಲಿಲ್ಲ. ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಸತತ ಗೈರು ಹಾಜರಿನಿಂದಾಗಿ ಮ್ಯಾಜಿಸ್ಟ್ರೇಟ್ ರುಡಾಲ್ಫ್ ಪೆರೇರಾ ಅವರು ಭಟ್ ವಿರುದ್ಧ ಜಾಮೀನು ರಹಿತ ವಾರಂಟ್ (NBW) ಹೊರಡಿಸಿದ್ದರು.
ಹಾಗಾಗಿ, ಇಂದು ಬೆಳಗ್ಗೆ 11 ಗಂಟೆಗೆ ವಿಶ್ವೇಶ್ವರ ಭಟ್ ತಮ್ಮ ವಕೀಲರ ಸಮೇತ ಕೋರ್ಟಿಗೆ ಹಾಜರಾದರು. ಆದರೆ, ಸಮಯಕ್ಕೆ ಸರಿಯಾಗಿ ಕೋರ್ಟಿಗೆ ಬಾರದೆ ನ್ಯಾಯಾಲಯದ ಅಮೂಲ್ಯ ಸಮಯವನ್ನು ಭಟ್ ಹಾಳು ಮಾಡುತ್ತಿದ್ದಾರೆ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಆನಂತರ, ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3.30ಕ್ಕೆ ಮುಂದೂಡಲಾಯಿತು.
ಈ ಮಧ್ಯೆ, ವಿಶ್ವೇಶ್ವರ ಭಟ್ ಅವರು ಹಲಸೂರು ಗೇಟ್ ಪೊಲೀಸರ ವಶ ಮತ್ತು ರಕ್ಷಣೆಯಲ್ಲಿ ಇದ್ದರು. ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣವು ವಕೀಲರ ಸಮುದಾಯ, ಕೆಲ ಪತ್ರಕರ್ತರು ಮತ್ತು ಭಟ್ ಅವರ ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಈ ಮಧ್ಯೆ, ಭಟ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಮುಂದಾದಾಗ ಭಟ್ ಪರ ವಕಾಲತ್ತು ವಹಿಸಬಾರದು ಎಂದು ಕೆಲ ವಕೀಲರು ತಗಾದೆ ತೆಗೆದರು. ಅಂತಿಮವಾಗಿ ನ್ಯಾಯಾಧೀಶರು ಭಟ್ಟರಿಗೆ ಜಾಮೀನು ಮಂಜೂರು ಮಾಡಿದರು. ಇದೆ ವೇಳೆ, ಕೋರ್ಟ್ ಆವರಣದಿಂದ ಹೊರಬರುತ್ತಿದ್ದ ವೇಳೆ ಭಟ್ಟರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆಯೂ ನಡೆಯಿತು.