ಡಿಕೆಶಿ, ಸಿಟಿ ರವಿಗೂ ಶುರುವಾಯ್ತು ಬಂಧನದ ಭೀತಿ
ಎರಡೆರಡು ಬಾರಿ ಕ್ಲೀನ್ಚಿಟ್ 'ಗಿಟ್ಟಿಸಿ' ಭೂಹಗರಣ ಆರೋಪದಿಂದ ಮುಕ್ತಿ ಪಡೆದಿದ್ದರೂ ಖುದ್ದು ಲೋಕಾಯುಕ್ತ ನ್ಯಾಯಾಧೀಶ ಎನ್ ಕೆ ಸುಧೀಂದ್ರ ರಾವ್ ಅವರೇ ತಮ್ಮ ವಿರುದ್ಧ ರಂಗಕ್ಕಿಳಿದಿರುವುದರಿಂದ ಕಂಗಾಲಾಗಿರುವ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಅನಿವಾರ್ಯವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜ್ಯ ಗೃಹ ನಿರ್ಮಾಣ ಮಂಡಳಿಯಿಂದ ಅಕ್ರಮ ನಿವೇಶನ ಪಡೆದಿರುವುದು ಹಾಗೂ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಬಂಧನ ಭೀತಿಯಿಂದಾಗಿ ರವಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಲಾಗಿದೆ. ಪ್ರಕರಣದ ಸಂಬಂಧ ಜುಲೈ 2ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಟಿ ರವಿಗೆ ಲೋಕಾಯುಕ್ತ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.
ಡಿಕೆಶಿಯೂ ನಿರೀಕ್ಷಣಾ ಜಾಮೀನಿಗೆ ಮೊರೆ: ಸರಕಾರಿ ಭೂಮಿಯನ್ನು ಕಾನೂನು ಬಾಹಿರವಾಗಿ ಖರೀದಿಸಿ, ಅಭಿವೃದ್ದಿ ಪಡಿಸಲು ಸಚಿವ ಸ್ಥಾನ ದುರುಪಯೋಗಪಡಿಸಿಕೊಂಡ ಪ್ರಕರಣ ಹಿನ್ನೆಲೆಯಲ್ಲಿ ಶಾಸಕ ಡಿಕೆ ಶಿವಕುಮಾರ್ ಸಹ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಮೊರೆಹೋಗಿದ್ದಾರೆ.
ಪ್ರಕರಣ ಕುರಿತು ಲೋಕಾಯುಕ್ತ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಡಿಕೆಶಿ ಸಹ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ ಸುಭಾಷ್ ಬಿ. ಆದಿ ಅವರು, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದರು. ಜತೆಗೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದರು.
ಡಿಕೆಶಿ ಪ್ರಕರಣವೇನು: ಎನ್ಜಿಇಎಫ್ ಬಡಾವಣೆ ನಿರ್ಮಾಣಕ್ಕಾಗಿ ಕೆ.ಆರ್. ಪುರ ತಾಲ್ಲೂಕಿನ ಬೆನ್ನಿಗಾನಹಳ್ಳಿಯ ಸರ್ವೆ ನಂಬರ್ 50/2ರಲ್ಲಿ 4.20 ಎಕರೆ ಭೂಮಿಯನ್ನು ಬಿಡಿಎಸ್ವಾಧೀನಪಡಿಸಿಕೊಂಡಿತ್ತು. ಆದರೆ, 2002-2004ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್ ಈ ಜಮೀನು ಬಿಡಿಎ ವಶದಲ್ಲಿರುವುದನ್ನು ತಿಳಿದಿದ್ದರೂ, ಮೂಲ ಮಾಲೀಕ ಬಿ.ಕೆ. ಶ್ರಿನಿವಾಸ್ರಿಂದ 2003ರ ಡಿ.12 ರಂದು ಅಕ್ರಮವಾಗಿ ಖರೀದಿಸಿದ್ದರು.
ಜತೆಗೆ, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಕಾನೂನು, ನಿಯಮಗಳನ್ನು ಉಲ್ಲಂಘಿಸಿ ಮತ್ತು ಕೆ.ಆರ್. ಪುರ ಉಪ ನೋಂದಣಿ ಕಚೇರಿಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಶಿವಕುಮಾರ್ ಎರಡೇ ದಿನಗಳಲ್ಲಿ ಖಾತೆ ಬದಲಾವಣೆ ಮಾಡಿದ್ದರು. ನಂತರ, ಒಬ್ಬ ಬಿಲ್ಡರ್ ಜತೆ ಜಂಟಿ ಪಾಲುದಾರಿಕೆ ಒಪ್ಪಂದ ಮಾಡಿಕೊಂಡು ವಸತಿ ಸಮುಚ್ಚಯ ನಿರ್ಮಿಸಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಈ ಪ್ರಕರಣ ಕುರಿತು ಡಿಕೆ ಶಿವಕುಮಾರ್ ಹಾಗೂ ಮತ್ತಿತರರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ಹೂಡಿದ್ದಾರೆ. ಕೋರ್ಟ್ ಆದೇಶದಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇದರಿಂದ ಡಿಕೆಶಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.