ಬಿಎಸ್ವೈ: ಹಿರೇಮಠರಿಗೂ ಸಿಬಿಐ ಮೇಲೆಯೇ ಅನುಮಾನ!
ಹುಬ್ಬಳ್ಳಿ, ಜೂನ್ 25: ಗಣಿ ಲಂಚ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡುತ್ತಿದ್ದಂತೆ ವಸ್ತುನಿಷ್ಠ ವಿಶ್ಲೇಷಣೆಯಲ್ಲಿ ದಟ್ಸ್ ಕನ್ನಡ ತನ್ನ ಅನುಮಾನದ ಮುಳ್ಳನ್ನು ಸಿಬಿಐ ತನಿಖೆಯತ್ತ ತಿರುಗಿಸಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಪ್ರಕರಣದ ದೂರುದಾರರಾದ ಖುದ್ದು ಹಿರೇಮಠರೇ ಸಿಬಿಐ ದಾಖಲಿಸಿದ FIR ಬಗ್ಗೆ ಈಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜ ಪರಿವರ್ತನಾ ಸಮುದಾಯದ ಎಂಬ NGO ಸಂಸ್ಥೆಯ ಮೂಲಕ ಭ್ರಷ್ಟಾಚಾರದ ವಿರುದ್ಧ ಖಡಕ್ಕಾಗಿ ಹೋರಾಡುತ್ತಿರುವ ಎಸ್ಆರ್ ಹಿರೇಮಠ್ ಅವರು ಸಿಬಿಐ ಸಲ್ಲಿಸಿರುವ FIR ಬಗ್ಗೆ ಕಿಡಿಕಾರಿದ್ದಾರೆ. CBI ತನ್ನ ಕಾರ್ಯಭಾರವನ್ನು ಸಮರ್ಪಕವಾಗಿ ನಿಭಾಯಿಸಿಲ್ಲ. ಸುಪ್ರೀಂಕೋರ್ಟ್ ತನಗೆ ಒಪ್ಪಿಸಿರುವ ಪ್ರಕರಣದ ಆಳ ಅಗಲವನ್ನು ಅದು ಅರಿತಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರಿಗೆ ನೀಡಿರುವ ಲಂಚದ ಬಗ್ಗೆ Central Empowered Committee (CEC) ಎತ್ತಿರುವ ಅನೇಕ ವಿಷಯಗಳನ್ನು CBI ನಿರ್ಲ್ಯಕ್ಷಿಸಿದೆ. ಏಪ್ರಿಲ್ 20ರಂದು ತಾನು CECಗೆ ಸಲ್ಲಿಸಿದ್ದ ಮಾಹಿತಿಯಲ್ಲಿ ಅಡಕವಾಗಿದ್ದ ಅನೇಕ ಮಾಹಿತಿಗಳು CBI ಸಲ್ಲಿಸಿರುವ FIRನಲ್ಲಿ ಕಾಣಿಸಿಕೊಂಡೇ ಇಲ್ಲ.
ಯಡಿಯೂರಪ್ಪ, ಅವರ ಪುತ್ರರಾದ ವಿಜಯೇಂದ್ರ, ರಾಘವೇಂದ್ರ, ಅವರ ಅಳಿಯ ಸೋಹನ್ ಕುಮಾರ್ ಮತ್ತು ಜಿಂದಾಲ್ ಕಂಪನಿಯ ಪಾತ್ರದ ಬಗ್ಗೆ ಎಳೆಎಳೆಯಾಗಿ ಬಿಡಿಸಿ ಹೇಳಿದ್ದೆ. ಉಹುಃ ಅವು ಯಾವುವೂ ಮೇ 15ರಂದು CBI ಸಲ್ಲಿಸಿರುವ FIRನಲ್ಲಿ ಪ್ರಸ್ತಾಪವಾಗೇ ಇಲ್ಲ ಎಂದು ಎಸ್ಆರ್ ಹಿರೇಮಠ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಉದಾಹರಣೆಗೆ ಹೇಳುವುದಾದರೆ ಚಿತ್ರದುರ್ಗದ ಗಣಿ ಉದ್ಯಮಿ ಪ್ರವೀಣ್ ಚಂದ್ರಗೆ ಪರವಾನಿಗಿ ನೀಡುವ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಮೀಪದ ಬಂಧುಗಳು ನಡೆಸುತ್ತಿರುವ ಸಂಸ್ಥೆಗಳಿಗೆ 6 ಕೋಟಿ ರು. ದೇಣಿಗೆ ಸಂದಾಯವಾಗಿದೆ ಎಂದು ಉಲ್ಲೇಖಿಸಿದ್ದ CEC, ಆ ಬಗ್ಗೆ CBI ತನಿಖೆಯಾಗಬೇಕು ಎಂದು ಶಿಫಾರಸ್ಸು ಮಾಡಿತ್ತು. ಆದರೆ CBI ಸಲ್ಲಿಸಿರುವ FIRನಲ್ಲಿ ಅಪ್ಪಿತಪ್ಪಿಯೂ ಇದು ಪ್ರಸ್ತಾಪವಾಗೇ ಇಲ್ಲ! ಎಂದು ಎಸ್ಆರ್ ಹಿರೇಮಠ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಂದು ಉದಾಹರಣೆಯೆಂದರೆ, ಯಡಿಯೂರಪ್ಪ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡ ಅನೇಕ ಭೂ ಡಿನೋಟಿಫಿಕೇಷನ್ ಬಗ್ಗೆಯೂ ತನಿಖೆ ನಡೆಸುವಂತೆ CEC ಶಿಫಾರಸ್ಸು ಮಾಡಿತ್ತು. ಆದರೆ ಉಹೂಃ CBI ಸಲ್ಲಿಸಿರುವ FIRನಲ್ಲಿ ಇದೂ ಕಾಣಿಸಿಕೊಂಡಿಲ್ಲ.
ಇವೇ ಮುಂತಾದ ಇನ್ನೂ ಹಲವಾರು ಲೋಪಗಳನ್ನು ಎತ್ತಿಹಿಡಿದಿರುವ ಎಸ್ಆರ್ ಹಿರೇಮಠ್ ಅವರು ಇದೀಗ ಮತ್ತೊಮ್ಮೆ CEC ಕದ ತಟ್ಟಿದ್ದಾರೆ. CBI ಈ ಯಾವುದೇ ಅಂಶಗಳನ್ನು ಕಡೆಗಣಿಸದೆ ಎಲ್ಲ ಶಿಫಾರಸ್ಸುಗಳ ಬಗ್ಗೆಯೂ ಆಮೂಲಾಗ್ರ ತನಿಖೆ ನಡೆಸುವಂತೆ ಸುಪ್ರೀಂಕೋರ್ಟಿಗೆ ಪುನಃ ಮನವಿ ಮಾಡಬೇಕೆಂದು ಎಸ್ಆರ್ ಹಿರೇಮಠ್ ಅವರು CECಗೆ ಕೋರಿದ್ದಾರೆ.
ಹಾಗೆಯೇ, ಸರಕಾರಿ ಸಂಸ್ಥೆಯಾದ ಮೈಸೂರು ಮಿನರಲ್ಸ್ ಲಿಮಿಟೆಡ್ ಸಂಸ್ಥೆ ಮತ್ತು ಕಲ್ಯಾಣಿ ಸ್ಟೀಲ್, ಕಲ್ಯಾಣಿ ಫೆರ್ರಸ್ ಹಾಗೂ ಮುಕುಂದ್ ಸ್ಟೀಲ್ಸ್ ನಡುವಣ ಕಾನೂನುಬಾಹಿರ ಒಪ್ಪಂದಗಳನ್ನೂ ಮರೆಮಾಚದೆ ತನಿಖೆ ನಡೆಸಬೇಕು. ಹಾಗೂ ರಾಮಗಢ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಭಾರಿ ಅಕ್ರಮ ಗಣಿಗಾರಿಕೆಯ ಬಗ್ಗೆಯೂ ತನಿಖೆ ನಡೆಸುವಂತೆ CEC ಗಮನ ಸೆಳೆಯಬೇಕು ಎಂದು ಎಸ್ಆರ್ ಹಿರೇಮಠ್ ಅವರು ಸುಪ್ರೀಂ ಮನವಿ ಮಾಡಿದ್ದಾರೆ.