ಸುರೇಶ್ ರಾಜೀನಾಮೆ ಅಂಗೀಕರಿಸೊಲ್ಲ: ಸದಾನಂದ
ತನಿಖೆಯ ಜರೂರತ್ತೂ ಇಲ್ಲ: ಶನಿವಾರ ಬೆಳ್ಳಂಬೆಳಗ್ಗೆಯೇ ಮುಖ್ಯಮಂತ್ರಿ ನಿವಾಸಕ್ಕೆ ಬಂದು ರಾಜೀನಾಮೆ ಪತ್ರ ಸಲ್ಲಿಸಿ, ಖಾಸಗಿ ಕಾರಿನಲ್ಲಿ ವಾಪಸಾಗಿರುವ ಸುರೇಶ್ ಕುಮಾರ್ ಅವರ ನಡೆಯನ್ನು ಅಪಾರವಾಗಿ ಪ್ರಶಂಸಿಸಿದ ಸದಾನಂದ ಗೌಡರು, ತಮ್ಮ ಸಹೋದ್ಯೋಗಿ ಸುರೇಶ್ ಅವರೇನೂ ಮಹಾಪರಾಧ ಮಾಡಿಲ್ಲ.
ಜಿ ಕೆಟಗರಿಯಲ್ಲಿ ಬಿಡಿಎ ನಿವೇಶನ ಪಡೆಯುವುದು ಶಾಸಕನಾಗಿ ಪ್ರತಿಯೊಬ್ಬರಿಗೂ ಅದೊಂದು ರೀತಿಯ ಹಕ್ಕು ಇದೆ. ಅಷ್ಟಕ್ಕೂ ಅವರೇನೂ ಎಕರೆಗಟ್ಟಲೆ ಜಮೀನನ್ನೇನು ಪಡೆದಿಲ್ಲ. ಅವರೊಬ್ಬ ಪ್ರಾಮಾಣಿಕ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಸದಾನಂದರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಅನಗತ್ಯ ಆರೋಪದಿಂದ ಅವರ (ಸುರೇಶ್) ಮನಸ್ಸಿಗೆ ನೋವಾಗಿದೆ. ಇದರಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ. ಆದರೆ, ಅದನ್ನು ತಾನು ಅಂಗೀಕರಿಸುವುದಿಲ್ಲ ಹಾಗೂ ಈ ಬಗ್ಗೆ ಬಹಿರಂಗ ಚರ್ಚೆಗಳ ಅಗತ್ಯವಿಲ್ಲ' ಎಂದು ಸದಾನಂದರು ತಿಳಿಸಿದ್ದಾರೆ.
'ಸುರೇಶ್ ವಿರುದ್ಧದ ಆರೋಪ ಕುರಿತು ನಾನು ಮಾಹಿತಿ ಪಡೆದಿದ್ದೇನೆ. ಈ ಆರೋಪದಲ್ಲಿ ಗಂಭೀರವಾದ ಯಾವುದೇ ತಪ್ಪುಗಳು ಕಂಡು ಬಂದಿಲ್ಲ. ಹೀಗಾಗಿ ಆರೋಪದ ಕುರಿತು ತನಿಖೆ ಕೈಗೊಳ್ಳುವ ಜರೂರತ್ತೂ ಇಲ್ಲ' ಎಂದು ಸದಾನಂದರು ತಿಳಿಸಿದ್ದಾರೆ .
ಸುರೇಶ್ ಗೆ ಕಾಂಗ್ರೆಸ್ ನಾಯಕರ ಬೆಂಬಲ: ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಅಕ್ರಮ ನಿವೇಶನ ಆರೋಪವನ್ನು ಪಕ್ಕಕ್ಕಿಟ್ಟು, ಸಜ್ಜನ, ಪ್ರಮಾಣಿಕ ಸುರೇಶ್ ಅವರು ರಾಜೀನಾಮೆ ನೀಡುವ ಅಗತ್ಯವೇ ಇಲ್ಲ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಸುರೇಶ್ ಬೆಂಬಲಕ್ಕೆ ನಿಂತಿದ್ದಾರೆ.
ವಿ ಆರ್ ಸುದರ್ಶನ್: ಸುರೇಶ್ ಕುಮಾರ್ ಅವರು ಒಳ್ಳೆಯ ವ್ಯಕ್ತಿ. ಆರೋಪ ಬಂದ ತಕ್ಷಣ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಕಾನೂನುಪ್ರಕಾರ ಹೋರಾಟ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿ ಆರ್ ಸುದರ್ಶನ್ ಪ್ರತಿಕ್ರಿಯಿಸಿದ್ದಾರೆ.
ಡಿಕೆ ಶಿವಕುಮಾರ್: ಸುರೇಶ್ ಕುಮಾರ್ ಅವರು ಏನು, ಅವರದು ಎಂಥ ಮನಸು ಎಂಬುದು ನನಗೆ ಚೆನ್ನಾಗಿ ಗೊತ್ತು. ನಾನು ಅವರೂ ಹಳೆಯ ಗೆಳೆಯರು. ಯಾವುದೇ ಕಾರಣ ಅಕ್ರಮ ನಿವೇಶನದ ಆರೋಪದಿಂದಾಗಿ ರಾಜೀನಾಮೆ ನೀಡುವ ಅಗತ್ಯವೇ ಇಲ್ಲ ಎಂದು ಡಿಕೆಶಿ ಅವರು ಸುರೇಶ್ ಗೆ ಅಖಂಡ ಬೆಂಬಲ ಸೂಚಿಸಿದ್ದಾರೆ.
ಅಸಲಿಗೆ ಸುರೇಶ್ ಅಂತಹ ಸಜ್ಜನ ವ್ಯಕ್ತಿ ರಾಜೀನಾಮೆ ನೀಡಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ ಇನ್ನೂ ಎಂತೆಂಥಾವರೆಲ್ಲ ಸೈಟುಗಳನ್ನು ಪಡೆದಿದ್ದಾರೆ ಎಂಬುದರ ವಿವರವೇ ನನ್ನ ಬಳಿ ಇದೆ. ಅಂಥಾದ್ದರಲ್ಲಿ ಇದ್ಯಾವುದು ಸಣ್ಣ ವಿಷಯ ಎಂದು ಡಿಕೆಶಿ ನುಡಿದಿದ್ದಾರೆ.
ಮುಖ್ಯಮಂತ್ರಿ ಸದಾನಂದ ಗೌರು ತಮ್ಮ ಸಂಪುಟ ಸಹೋದ್ಯೋಗಿ ಸುರೇಶ್ ಅವರನ್ನು ಸಮರ್ಥಿಸಿಕೊಂಡ ಧಾಟಿಯಲ್ಲೇ ಡಿಕೆಶಿ ಸಹ ಸುರೇಶ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಶಾಸಕನಾಗಿ ದುಡಿಯುವ ರಾಜಕಾರಣಿಗೆ ಒಂದು ಚಿಕ್ಕ ಬಿಡಿಎ ಸೈಟು ಖರೀದಿಸುವ ಹಕ್ಕೂ ಇಲ್ವೇ. ನಾನೇ ಈ ಹಿಂದೆ ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕೈಗಾರಿಕಾ ಸೈಟನ್ನೇ ಪಡೆದಿದ್ದೇನೆ ಎಂದು ತಮ್ಮದೇ ದೃಷ್ಟಾಂತವನ್ನು ನೀಡಿದ್ದಾರೆ.
ಆದರೆ ಕಾಂಗ್ರೆಸ್ಸಿನ ಹಿರಿಯ ನಾಯಕಿ ಮೋಟಮ್ಮ ಅವರು ಸುರೇಶ್ ನಡೆಯನ್ನು ಸ್ವಾಗತಿಸಿದ್ದಾರೆ. ಆರೋಪ ಬಂದ ತಕ್ಷಣ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿರುವುದು ಅತ್ಯಂತ ಸಮಂಜಸವಾಗಿದೆ. ಅವರು ಅಕ್ರಮ ನಿವೇಶನ ಪಡೆದಿರುವುದ ತಪ್ಪು. ಆ ಬಗ್ಗೆ ಕಾನೂನು ರೀತ್ಯ ಹೋರಾಟ ನಡೆಸಿ, ತಮ್ಮ ಸಾಚಾತನ ಸಾಬೀತುಪಡಿಸಿಕೊಳ್ಳಲಿ' ಎಂದು ಮೋಟಮ್ಮ ಹೇಳಿದ್ದಾರೆ.