ಸಿಟಿ ರವಿ ವಿರುದ್ಧ ರಂಗಕ್ಕಿಳಿದ ಜಡ್ಜ್ ಸುಧೀಂಧ್ರ
ಸಿಟಿ ವಿರುದ್ಧದ ಭೂಹಗರಣ ಪ್ರಕರಣದಲ್ಲಿ ಖುದ್ದು ತಮ್ಮ ಪೊಲೀಸರೇ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ತನ್ನ ಸುಪರ್ದಿಯಲ್ಲಿ ನೇರವಾಗಿ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ. ಅದರಂತೆ, ಜುಲೈ 2ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರವಿಗೆ ಕೋರ್ಟ್ ಬುಲಾವ್ ನೀಡಿದೆ. ಶಾಸಕ ರವಿ ಸೇರಿದಂತೆ ಪ್ರಕರಣದಲ್ಲಿನ ಒಟ್ಟು ನಾಲ್ವರು ಆರೋಪಿಗಳಿಗೆ ನ್ಯಾ ಸುಧೀಂದ್ರರಾವ್ ಅವರು ಸಮನ್ಸ್ ಜಾರಿಗೊಳಿಸಿದ್ದಾರೆ.
ವಿರುದ್ಧದ ಭೂಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ತನಿಖೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು ಆರೋಪಿಗಳು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಗೋಚರವಾಗಿದೆ. ಹಾಗಾಗಿ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿ ನ್ಯಾಯಾಲಯವೇ ನೇರವಾಗಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡು ವಿಚಾರಣೆ ನಡೆಸಲಿದೆ ಎಂದು ಈ ಕುರಿತ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
ಇದರಿಂದ, ಈ ಭೂಹಗರಣದಲ್ಲಿ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಎರಡು ಬಾರಿ ಕ್ಲೀನ್ಚಿಟ್ ಪಡೆದುಕೊಂಡಿದ್ದ ಸಿ. ಟಿ. ರವಿ ಮತ್ತು ಕುಟುಂಬದವರು ಇದೀಗ ಇಕ್ಕಟ್ಟಿಗೆ ಸಿಲುಕಿದ್ದು, ನ್ಯಾಯಾಲಯದ ವಿಚಾರಣೆ ಎದುರಿಸಬೇಕಿದೆ.
ಎರಡು ಬಾರಿಯೂ ಬಿ ರಿಪೋರ್ಟ್: ಶಾಸಕ ಸಿ.ಟಿ. ರವಿ ಅವರು ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಚಿಕ್ಕಮಗಳೂರಿನಲ್ಲಿ 39,000 ಅಡಿ ವಿಸ್ತೀರ್ಣದ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರಸಭೆ ಸದಸ್ಯ ದೇವಿಪ್ರಸಾದ್ ಲೋಕಾಯುಕ್ತ ಕೋರ್ಟ್ಗೆ 2011ರ ಡಿಸೆಂಬರ್ನಲ್ಲಿ ದೂರು ನೀಡಿದ್ದರು.
ಈ ಪ್ರಕರಣದಲ್ಲಿ ಸಿ.ಟಿ. ರವಿ ಪತ್ನಿ ಪಲ್ಲವಿ ರವಿ, ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತ ಲಕ್ಷ್ಮಿನಾರಾಯಣ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು.
ಆದರೆ, ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ಏ.3 ರಂದು ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿ ನ್ಯಾಯಾಲಯಕ್ಕೆ ಶಾಸಕ ಸಿ.ಟಿ. ರವಿ ಪರಬಿ ರಿಪೋರ್ಟ್ ಸಲ್ಲಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿತ್ತು.
ಆದರೆ, ಮರು ತನಿಖೆ ನಡೆಸಿದ ಪೊಲೀಸರು ಮತ್ತೆ ಮೇ 30ರಂದು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇದೀಗ ನೇರವಾಗಿ ಪ್ರಕರಣದ ವಿಚಾರಣೆ ಆರಂಭಿಸಲು ಆದೇಶಿಸಿದೆ.