ಪೆಟ್ರೋಲ್ : ಡಿವಿಎಸ್ ಗೌಡ್ರು ಮಾತು ಉಳಿಸಿಕೊಳ್ತಾರಾ?
ವಿಧಾನ ಪರಿಷತ್ ಚುನಾವಣೆಯ ನಂತರ ತೆರಿಗೆ ಇಳಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಸದಾನಂದ ಗೌಡ ರಾಜ್ಯದ ಜನತೆಗೆ ವಾಗ್ದಾನ ನೀಡಿದ್ದರು. ಈಗ ವಿಧಾನ ಪರಿಷತ್ ಚುನಾವಣೆ ಮುಗಿದಿದೆ, ನಿರೀಕ್ಷೆಗೂ ಮೀರಿ ಸೀಟುಗಳನ್ನು ಗೆದ್ದಿದ್ದರಿಂದ ಸದಾನಂದ ಗೌಡರ ಮುಖಕಮಲ ಅರಳಿದೆ. ಈ ಸಂದರ್ಭದಲ್ಲಿ ಜನತೆಗೆ ನೀಡಿದ ವಾಗ್ದಾನ ಉಳಿಸಿಕೊಳ್ಳಬೇಕಾಗಿದೆ.
ಪೆಟ್ರೋಲ್ ಬೆಲೆ ಏರಿಕೆಯಿಂದ ರಾಜ್ಯದ ಜನಸಾಮಾನ್ಯರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದು ತಿಳಿದಿದೆ. ಆದರೆ, ಸಂಪುಟ ಸಚಿವರು ಮತ್ತು ಹಣಕಾಸು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಧ್ಯಮಕ್ಕೆ ಗೌಡರು ತಿಳಿಸಿದರು. ಕರ್ನಾಟಕ ಅತಿ ಹೆಚ್ಚು ಮೌಲ್ಯ ವರ್ಧಿತ ತೆರಿಗೆ ಮತ್ತು ಪ್ರವೇಶ ತೆರಿಗೆ ವಿಧಿಸುತ್ತಿರುವುದರಿಂದ ಪೆಟ್ರೋಲ್ ಮೇಲೆ ಅತಿ ಹೆಚ್ಚು ದುಡ್ಡನ್ನು ರಾಜ್ಯದ ಜನರು ಸುರಿಯುತ್ತಿದ್ದಾರೆ.
ಶುಕ್ರವಾರದಿಂದ 2 ರು. ಕಡಿತ : ಪೆಟ್ರೋಲ್ ಬೆಲೆ ಏರಿಕೆಯಿಂದ ಬಸವಳಿದಿರುವ ಜನತೆಗೆ ಶುಕ್ರವಾರ ಶುಭ ಸುದ್ದಿ ಸಿಗುವ ಸಾಧ್ಯತೆಯಿದೆ. ಹದಿನೈದು ದಿನಗಳಿಗೊಮ್ಮೆ ಪರಿಷ್ಕರಿಸಲಾಗುವ ಪೆಟ್ರೋಲ್ ಬೆಲೆ ಪರಿಷ್ಕರಣೆಯನ್ನು ಜೂನ್ 15, ಶುಕ್ರವಾರದಂದು ನಡೆಸಲಾಗುತ್ತಿದ್ದು, ಸರಕಾರ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಮೇಲಿನ ದರವನ್ನು ಕನಿಷ್ಠ 2 ರು.ನಷ್ಟು ಇಳಿಸುವ ಸಾಧ್ಯತೆಯಿದೆ.
ಮೇ 23ರಂದು ಪೆಟ್ರೋಲ್ ದರವನ್ನು ಲೀಟರಿಗೆ 7.54 ರು. ಏರಿಸಿದ ಮೇಲೆ ಎರಡನೇ ಬಾರಿಗೆ ದರ ಕಡಿತವಾಗುತ್ತಿದೆ. ಜೂ.3ರಂದು ಲೀಟರಿಗೆ 2 ರು.ನಷ್ಟು ಇಳಿಸಲಾಗಿತ್ತು. ಈಗ ಶುಕ್ರವಾರ, ಜೂ.15 ಮಧ್ಯರಾತ್ರಿಯಿಂದ ಮತ್ತೆ 2. ರು.ನಷ್ಟು ಬೆಲೆ ಇಳಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿರುವುದರಿಂದ ಪೆಟ್ರೋಲ್ ಬೆಲೆ ಇಳಿಸುವ ಬಗ್ಗೆ ಜೂ.12ರಂದು ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೂಚನೆ ನೀಡಿದ್ದವು.
ಪ್ರತಿ ಹದಿನೈದು ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ರುಪಾಯಿ ಬೆಲೆಯ ಆಧಾರದ ಮೇಲೆ ಪೆಟ್ರೋಲ್ ಬೆಲೆಯನ್ನು ತೈಲ ಕಂಪನಿಗಳು ಏರಿಸುವ ಅಥವಾ ಇಳಿಸುವ ನಿರ್ಧಾರ ತೆಗೆದುಕೊಳ್ಳುತ್ತವೆ. ಜೂನ್ 2ರಂದು ಪೆಟ್ರೋಲ್ ಬೆಲೆ ಇಳಿಸಿದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಪೆಟ್ರೋಲ್ ಬೆಲೆ 116 ಡಾಲರ್ ಇತ್ತು. ಈಗ ಅದು ಬ್ಯಾರಲ್ಲಿಗೆ 96 ಡಾಲರ್ಗೆ ಬಂದು ತಲುಪಿದೆ. ಕಳೆದ 1 ವರ್ಷದಲ್ಲಿ ಕಚ್ಚಾ ತೈಲದ ಬೆಲೆ ಇಷ್ಟೊಂದು ಇಳಿದಿರುವುದು ಇದೇ ಮೊದಲು.