ಮಲೆ ಮಾದೇಶನ ಹುಂಡಿಗೆ ಭರ್ಜರಿ ಆದಾಯ
ಇತ್ತೀಚೆಗೆ ಅಂತಾರಾಷ್ಟ್ರೀಯ ಸ್ಟಾಂಡರ್ಡ್ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ ಪಡೆದಿದ್ದ ಈ ಪ್ರಸಿದ್ಧ ದೇಗುಲ ಅತಿ ಹೆಚ್ಚು ಆದಾಯ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ.
ಮಂಗಳವಾರ (ಜೂ.13) ದೇಗುಲದ ದೊಡ್ಡ ಹುಂಡಿಯನ್ನು ತೆರೆದು ಎಣಿಕೆ ಮಾಡಲಾಯಿತು. ಒಟ್ಟು 82,63,994 ನಗದು, 700 ಗ್ರಾಂ ಬೆಳ್ಳಿ, 31 ಗ್ರಾಂ ಚಿನ್ನ ಸಂಗ್ರಹವಾಗಿದೆ.
ಕಳೆದ ಎರಡು ತಿಂಗಳಲ್ಲಿ ಈ ಮೊತ್ತ ಸಂಗ್ರಹವಾಗಿದೆ. ಎಣಿಕೆ ವೇಳೆಯಲ್ಲಿ ಸಾಲೂರು ಮಠದ ಗುರು ಸ್ವಾಮೀಜಿ, ಕಾರ್ಯನಿರ್ವಹಣಾಧಿಕಾರಿ ಶಿವಲಿಂಗೇಗೌಡ, ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಕುಮಾರಸ್ವಾಮಿ, ಸಿಬ್ಬಂದಿಗಳಾದ ಸದಾಶಿವಪ್ಪ, ಮಾಧವ ರಾಜು, ಕಪ್ಪಣ್ಣ, ಸರ್ಕಲ್ ಇನ್ಸ್ ಪೆಕ್ಟರ್ ಶಿವಸ್ವಾಮಿ ಹಾಗೂ ಎಸ್ ಬಿಎಂ ಬ್ಯಾಂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಮಂತ ದೇಗುಲಗಳು: ರಾಜ್ಯದಲ್ಲಿ ಒಟ್ಟು 34 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿದೆ. ಆದಾಯ ಗಳಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನದಲ್ಲಿದೆ. ಆಯಾ ದೇವಸ್ಥಾನಗಳ ಆದಾಯ ಗಳಿಕೆ ಮೇಲೆ ಅವುಗಳನ್ನು ವರ್ಗೀಕರಿಸಲಾಗಿದ್ದು, ಚಾಮರಾಜನಗರ ಜಿಲ್ಲೆಯ ಮಲೆ ಮಹಾದೇಶ್ವರ ದೇಗುಲ ಎರಡನೇ ಸ್ಥಾನದಲ್ಲಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಆದಾಯ 44.82 ಕೋಟಿ ರು. ವಾರ್ಷಿಕ ಆದಾಯದೊಂದಿಗೆ ಅಗ್ರಸ್ಥಾನದಲ್ಲಿದೆ. ಕೊಳ್ಳೆಗಾಲದ ಮಲೆ ಮಹದೇಶ್ವರ 26.50 ಕೋಟಿ ರು. ಎರಡನೇ ಸ್ಥಾನದಲ್ಲಿದೆ. ಧಾರ್ಮಿಕವಾಗಿ ಅತಿಹೆಚ್ಚು ಆದಾಯ ಬರುವ ದೇವಸ್ಥಾನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವುದು ವಿಶೇಷ.
ಬೆಂಗಳೂರಿನ ಬನಶಂಕರಿ ದೇಗುಲ ಕೂಡಾ ಶ್ರೀಮಂತ ದೇಗುಲ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಟಾಪ್ 10 ಪಟ್ಟಿಯಲ್ಲಿ 7 ದೇಗುಲಗಳು ಅಮ್ಮ(ದೇವಿ)ನವರ ದೇಗುಲಗಳಾಗಿದ್ದರೆ ಉಳಿದವು ಪುರುಷ ದೇವರ ದೇವಸ್ಥಾನಗಳಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಕೊಳ್ಳೆಗಾಲದ ಮಲೆ ಮಹದೇಶ್ವರ,ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇಗುಲಗಳನ್ನು ಹೊರತುಪಡಿಸಿದರೆ ಉಳಿದವು ಅಮ್ಮನವರ ದೇಗುಲಗಳಾಗಿದೆ.
ಶ್ರೀ ಕೊಲ್ಲೂರು ಮೂಕಾಂಬಿಕೆ, ಕಟೀಲು ಶ್ರೀ ದುರ್ಗಾ ಪರಮೇಶ್ವರಿ, ಮೈಸೂರು ಶ್ರೀ ಚಾಮುಂಡೇಶ್ವರಿ, ಯಲ್ಲಮ್ಮನಗುಡ್ಡ ಶ್ರೀ ರೇಣುಕಯಲ್ಲಮ್ಮ, ಮಂದರ್ತಿ ಶ್ರೀ ದುರ್ಗಾ ಪರಮೇಶ್ವರಿ, ಬೆಂಗಳೂರಿನ ಶ್ರೀ ಬನಶಂಕರಿ, ಶ್ರೀ ಹುಲಿಗಮ್ಮ ಅತ್ಯಂತ ಶ್ರೀಮಂತ ದೇಗುಲಗಳಾಗಿದೆ.
ಗಡಿಭಾಗದ ಶಾಪಗ್ರಸ್ತ ಜಿಲ್ಲೆಗೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಕಾಲಿಟ್ಟ ಬಳಿಕ ಎಲ್ಲವೂ ಒಳ್ಳೆಯದಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಸದಾನಂದ ಗೌಡರ ರಾಜಕೀಯ ಭವಿಷ್ಯ ಕೂಡಾ ಭದ್ರವಾಗುತ್ತಿದೆ.ಮುಖ್ಯಮಂತ್ರಿಗಳು ಮಹದೇಶ್ವರನಿಗೆ ಪೂಜೆ ಸಲ್ಲಿಸಿದ ಮೇಲೆ ಭಕ್ತರ ಸಂಖ್ಯೆ ಹೆಚ್ಚಳವಾಗಿರುವುದು, ಆದಾಯ ಗಳಿಕೆ ಏರಿಕೆ ಕಂಡಿರುವುದು ಕಾಕತಾಳೀಯವಾದರೂ ನಂಬಬಹುದಾದ ಸಂಗತಿಯಾಗಿದೆ.