ನಿತ್ಯಾನಂದ ಬಂಧನಕ್ಕೆ ಸಿಎಂ ಸದಾನಂದ ಆದೇಶ
ಇದಕ್ಕೂ ಮುನ್ನ ಸೋಮವಾರ(ಜೂ.11) ಬೆಳಗ್ಗೆ ರಾಮನಗರ ಎಸ್ ಪಿ ಅನುಪಮ್ ಅಗರವಾಲ್ ಹಾಗೂ ಡಿಸಿ ಶ್ರೀರಾಮ್ ರೆಡ್ಡಿ ಅವರು ನಿತ್ಯಾನಂದನ ಆಶ್ರಮದಲ್ಲಿ ನಡೆದ ಗಲಭೆ, ಅನೈತಿಕ ಚಟುವಟಿಕೆಗಳ ಕುರಿತ ಆರೋಪಗಳ ಬಗ್ಗೆ ನಡೆಸಲಾದ ತನಿಖಾ ವರದಿಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರಿಗೆ ಸಲ್ಲಿಸಿದರು.
ನಂತರ ಡಿವಿ ಸದಾನಂದ ಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಆರ್ ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು. ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸದಾನಂದ, ನಿತ್ಯಾನಂದನ ಬಂಧನಕ್ಕೆ ಆದೇಶಿಸಿದ್ದಾರೆ.
ರಾಮನಗರ ಎಸ್ ಪಿ ಅನುಪಮ್ ಅಗರವಾಲ್ ಅವರ ನೇತೃತ್ವದಲ್ಲಿ ಆಶ್ರಮದ ಶೋಧ ಕಾರ್ಯ ಮುಂದುವರೆಯಲಿ, ಆಶ್ರಮಕ್ಕೆ ಬೀಗ ಹಾಕಿ, ಆಶ್ರಮದಲ್ಲಿ ಸಿಗುವ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಿ. ಯಾವುದೇ ಶಿಷ್ಯರಿಗೆ ಪ್ರವೇಶ ನಿರಾಕರಿಸಿ. ಪ್ರಾದೇಶಿಕ ಆಯುಕ್ತರಿಂದ ತನಿಖೆ ಮುಂದುವರೆಯಲಿ ಎಂದು ರಾಮನಗರ ಡಿಸಿಗೆ ಸದಾನಂದ ಗೌಡ ಸೂಚಿಸಿದ್ದಾರೆ.
ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ನಡೆಯುತ್ತಿರುವ ಆಕ್ಷೇಪಾರ್ಹ ಚಟುವಟಿಕೆಗಳು, ಪತ್ರಕರ್ತರ ಮೇಲೆ ನಡೆದ ದಬ್ಬಾಳಿಕೆ, ನಿತ್ಯಾನಂದ ಶಿಷ್ಯಂದಿರ ಗೂಂಡಾಗಿರಿ, ನಿತ್ಯಾನಂದನ ವಿರುದ್ಧ ಇಡೀ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ಬಿಡದಿಯ ಧ್ಯಾನಪೀಠಂ ಆಶ್ರಮವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಚಿಂತಿಸುತ್ತಿದೆ. ಸ್ವಾಮಿ ನಿತ್ಯಾನಂದನ ಬಿಡದಿ ಆಶ್ರಮದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸರ್ಕಾರ ಚಿಂತಿಸುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು ತಿಳಿಸಿದ್ದರು.
ನಿತ್ಯಾನಂದನನ್ನು ಮುಟ್ಟಲು ಸಾಧ್ಯವೇ?: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಕೋರ್ಟಿನಿಂದ ಜಾಮೀನು ಪಡೆದಿರುವ ಚಾಣಾಕ್ಷ ಸ್ವಾಮೀಜಿ ನಿತ್ಯಾನಂದ ಎಲ್ಲಿದ್ದಾರೆ ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ. ಈ ನಡುವೆ ಕರ್ನಾಟಕ ಸರ್ಕಾರ ನಿತ್ಯಾನಂದನ ಬಂಧನಕ್ಕೆ ಆದೇಶ ಹೊರಡಿಸಿದ್ದರೂ, ಬಂಧಿಸಲು ಸದ್ಯಕ್ಕೆ ಸಾಧ್ಯವಿಲ್ಲ.
ಮೊದಲು ನಿತ್ಯಾನಂದನ ಜಾಮೀನು ರದ್ದಾಗಬೇಕು. ಇದಕ್ಕೆ ಕಾನೂನು ಮೂಲಕ ಸರ್ಕಾರ ಹೋರಾಟ ನಡೆಸಬೇಕಾಗುತ್ತದೆ. ಸಿಎಂ ಸದಾನಂದ ಗೌಡ ಕೂಡಾ ಈ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುವಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ.
ಪ್ರತಿಭಟನೆಗೆ ಸಿಕ್ಕ ಫಲ: ಪತ್ರಕರ್ತರ ಮೇಲೆ ನಡೆದ ದಬ್ಬಾಳಿಕೆಯನ್ನು ವಿರೋಧಿಸಿ ಕರ್ನಾಟಕದಾದ್ಯಂತ ಭಾರೀ ಪ್ರತಿಭಟನೆಗಳು ನಡೆಸಲಾಗಿತ್ತು. ಕರ್ನಾಟಕದ ನೆಲ ಬಳಸಿಕೊಂಡು, ನೀರು, ಗಾಳಿ ಸೇವಿಸುತ್ತಿದ್ದರೂ ಕನ್ನಡ ವಿರೋಧಿ ಸಂಸ್ಕೃತಿಯನ್ನು ಬೆಳೆಸುತ್ತಿರುವ ನಿತ್ಯಾನಂದನನ್ನು ಮತ್ತು ಆತನ ಶಿಷ್ಯರನ್ನು ಕರ್ನಾಟಕದಿಂದ ಓಡಿಸಬೇಕು. ಆತನನ್ನು ಬಂಧಿಸಿ ಆಶ್ರಮಕ್ಕೆ ಬೀಗ ಜಡಿಯಬೇಕು ಎಂದು ಋಷಿಕೇಶ್ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
ಜಿಲ್ಲಾಧಿಕಾರಿ ಶಿವರಾಮ್ ರೆಡ್ಡಿ ಅವರು ಜೂನ್ 13ರವರೆಗೆ ಬಿಡದಿ ಆಶ್ರಮದ ಸುತ್ತಮುತ್ತ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದಾರೆ. ಸರ್ಕಾರದ ಆದೇಶ ಹೊರ ಬಿದ್ದ ಮೇಲೆ ನವಕರ್ನಾಟಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹತ್ತು ಹಲವು ಸಂಘಟನೆಗಳು ಹರ್ಷ ವ್ಯಕ್ತಪಡಿಸಿ, ಸರ್ಕಾರದ ಆದೇಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.