ಗಾಲಿ ರೆಡ್ಡಿಗೆ ಬೇಲು, ಬ್ರದರ್ಸ್ ಗೆ ಜೈಲು ಭೀತಿ ಏಕೆ?
ಈ ಪ್ರಕರಣಕ್ಕೆ ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮರಾವ್, ಕರ್ನಾಟಕದ ಇಬ್ಬರು ಶಾಸಕರು ಸೇರಿದಂತೆ ಎಂಟು ಜನರ ವಿರುದ್ಧ ಆಂಧ್ರಪ್ರದೇಶದ ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ) ಶನಿವಾರ(ಜೂ.9) ಎಫ್ಐಆರ್ ದಾಖಲಿಸಿದೆ.
ಸಿಬಿಐಗೆ ಏಕೆ ನೀಡಲಿಲ್ಲ?: ಸಿಬಿಐ ನ್ಯಾಯಾಧೀಶ ಪಟ್ಟಾಭಿರಾಮರಾವ್ ಸೇರಿದಂತೆ ಕರ್ನಾಟಕದ ಪ್ರಮುಖ ಶಾಸಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದರೂ ಸಿಬಿಐ ತನಿಖೆಗೆ ಏಕೆ ವಹಿಸಿಲ್ಲ ಎಂಬ ಕೂಗು ಎದ್ದಿದೆ. ಆದರೆ,ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿಗೆ ಎಫ್ ಐಆರ್ ದಾಖಲಿಸಿದ್ದು ಸಿಬಿಐ ಎನ್ನುವುದನ್ನು ಮರೆಯುವಂತಿಲ್ಲ.
ಸಿಬಿಐ ಎಫ್ ಐಆರ್ ಆಧಾರದ ಮೇಲೆ ಮುಂದಿನ ತನಿಖೆ ನಡೆಸುವಂತೆ ಎಸಿಬಿಗೆ ನ್ಯಾ. ಈಶ್ವರಯ್ಯ ಅವರನ್ನೊಳಗೊಂಡ ಹೈಕೋರ್ಟ್ ನ್ಯಾಯಾಧೀಶರ ಸಮಿತಿ ಈ ಆದೇಶ ನೀಡಿದೆ.
ಏನು ಆರೋಪ?: ನ್ಯಾ ಪಟ್ಟಾಭಿರಾಮರಾವ್ ಹಾಗೂ 8 ಜನರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1)(ಸಿ) ಹಾಗೂ 13(1)(ಡಿ)(ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ), ಐಪಿಸಿ ಸೆಕ್ಷನ್ 120ಬಿ(ಒಳಸಂಚು, ಪಿತೂರಿ), 409(ವಿಶ್ವಾಸ ದ್ರೋಹ), 420(ವಂಚನೆ) ಹಾಗೂ 417(ವಂಚನೆಗೆ ಪ್ರೋತ್ಸಾಹ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗಾಲಿ ಜನಾರ್ದನರೆಡ್ಡಿ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(1)(ಡಿ), ಐಪಿಸಿ ಸೆಕ್ಷನ್ 120 ಬಿ ಹಾಗೂ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.
ಬಂಧನ ಸಾಧ್ಯತೆ?: ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು, ಮೊಬೈಲ್ ಫೋನ್ ಸಂದೇಶ, ಬ್ಯಾಂಕ್ ಕಡತಗಳ ದಾಖಲೆಗಳ ಆಧಾರದ ಮೇಲೆ ಸಿಬಿಐ ಸಲ್ಲಿಸಿದ ಎಫ್ ಐಆರ್ ನ ಆಧಾರ ಮೇಲೆ ಎಸಿಬಿ ಮತ್ತೊಂದು ಎಫ್ ಐಆರ್ ದಾಖಲಿಸುವ ಸಾಧ್ಯತೆಯಿದೆ. ಈ ಬಗ್ಗೆ ಎಸಿಬಿ ನಿರ್ದೇಶಕ ಪ್ರಸಾದ್ ರಾವ್ ಕೂಡಾ ಸ್ಪಷ್ಟಪಡಿಸಿದ್ದಾರೆ.
ಮೊದಲ ಎಫ್ ಐಆರ್ ನಲ್ಲಿ 8 ಜನರ ಹೆಸರಿದೆ. ಇನ್ನೊಂದು ಎಫ್ ಐಆರ್ ನಲ್ಲಿ 5 ಜನರ ಹೆಸರಿದೆ. ಜಾಮೀನಿಗಾಗಿ ಲಂಚ ಡೀಲ್ ಕುದುರಿಸಿದ ಪ್ರಮುಖ ಆರೋಪಿ ಆಂಧ್ರಪ್ರದೇಶ ಸಚಿವ ಎರಸು ಪ್ರತಾಪ್ ರೆಡ್ಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿಯ ಇಬ್ಬರು ರಾಜಕಾರಣಿಗಳ ಮೇಲೆ ಎರಡನೆ ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
ಲಂಚ ನೀಡುವ ಬಗ್ಗೆ ಸ್ಪಷ್ಟನೆ ಇನ್ನೂ ಸಿಗದ ಕಾರಣ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಬಂಧಿಸುವ ಎಲ್ಲಾ ಲಕ್ಷಣಗಳು ಇದೆ.