ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತನನ್ನು ಗೋಷ್ಠಿಯಿಂದ ಹೊರದಬ್ಬಿದ ನಿತ್ಯಾನಂದ

By Prasad
|
Google Oneindia Kannada News

Swamy Nithyananda sends journalist out of press conference
ಬಿಡದಿ, ಜೂ. 7 : ಆರತಿ ರಾವ್ ಎಂಬುವವರು ಮಾಡಿರುವ ಅತ್ಯಾಚಾರದ ಆರೋಪಕ್ಕೆ ಪ್ರತಿಯಾಗಿ ಬಿಡದಿ ಧ್ಯಾನಪೀಠಂ ಆಶ್ರಮದಲ್ಲಿ ಸ್ವಾಮಿ ನಿತ್ಯಾನಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಪತ್ರಕರ್ತರೊಬ್ಬರು ಕೇಳುತ್ತಿದ್ದ ಪ್ರಶ್ನೆಗಳಿಂದ ರೊಚ್ಚಿಗೆದ್ದ ನಿತ್ಯಾನಂದ ಪತ್ರಕರ್ತರನ್ನು ಪತ್ರಿಕಾಗೋಷ್ಠಿಯಿಂದ ಹೊರಹಾಕಿದ ಘಟನೆ ಗುರುವಾರ ನಡೆದಿದೆ.

ಮಾಧ್ಯಮಮಿತ್ರರಿಂದ ಪುಂಖಾನುಪುಂಖವಾಗಿ ಬರುತ್ತಿದ್ದ ಎಲ್ಲಾ ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರಿಸುತ್ತಿದ್ದ ನಿತ್ಯಾನಂದ, ಸುವರ್ಣ ನ್ಯೂಸ್ ಚಾನಲ್ಲಿನ ಪತ್ರಕರ್ತ ಅಜಿತ್ ಅವರು, ಅಮೆರಿಕದ ನಿವಾಸಿ ವಿನಯ್ ಭಾರದ್ವಾಜ್ ಎಂಬುವವರು ನಿತ್ಯಾನಂದನ ವಿರುದ್ಧ ಕೇಸಿನ ಸಮನ್ಸ್ ಪ್ರತಿಯನ್ನು ತೋರಿಸುತ್ತಿದ್ದಂತೆ ಕೆರಳಿ ಕೆಂಡವಾದ ನಿತ್ಯಾನಂದ ತನ್ನ ಹಿಂಬಾಲಕರನ್ನು ಛೂಬಿಟ್ಟು ಅಜಿತ್ ಅವರನ್ನು ಹೊರಹಾಕಿಸುವಲ್ಲಿ ಯಶಸ್ವಿಯಾದರು.

ನಡೆದಿದ್ದೇನೆಂದರೆ, ವಿನಯ್ ಭಾರದ್ವಾಜ್ ಎಂಬುವವರೊಬ್ಬರು ಹೂಡಿದ್ದ ಕೇಸಿನಲ್ಲಿ ನೀಡಲಾಗಿದ್ದ ಸಮನ್ಸ್ ನಿತ್ಯಾನಂದ ಸ್ವೀಕರಿಸುತ್ತಿಲ್ಲ ಎಂದು ಅಜಿತ್ ಆರೋಪಿಸಿದರು. ಅದಕ್ಕೆ ಉತ್ತರವಾಗಿ, ನಾನೇನು ತಪ್ಪಿಸಿಕೊಂಡಿಲ್ಲ ಇಲ್ಲೇ ಇದ್ದೇನೆ, ನನಗೆ ಸಮನ್ಸ್ ಬಂದೇ ಇಲ್ಲ. ಸಮನ್ಸ್ ಬಂದರೆ ಖಂಡಿತ ಸೂಚಿಸುತ್ತೇನೆ ಎಂದು ನಿತ್ಯಾನಂದ ಉತ್ತರಿಸಿದರು.

ಆಗ, ಅಜಿತ್ ಅವರು, ಇಲ್ಲ ಸಮನ್ಸ್ ಸ್ವೀಕರಿಸಿಲ್ಲ, ಸಮನ್ಸ್ ತಂದವರನ್ನು ಆಶ್ರಮದ ಗೇಟಿನ ಒಳಗೇ ಬಿಟ್ಟಿಲ್ಲ ಎಂದು ಹೇಳುತ್ತ, ಸಮನ್ಸ್ ಪ್ರತಿಯನ್ನು ತೆಗೆದು ತೋರಿಸಿದಾಗ ನಿತ್ಯಾನಂದ ತಿರುಗಿಬಿದ್ದು, ಇದು ಪತ್ರಕರ್ತರಿಗೆ ಮಾತ್ರ ಕರೆಯಲಾಗಿದ್ದ ಪತ್ರಿಕಾಗೋಷ್ಠಿ. ಲಾಯರ್‌ನಂತೆ ವರ್ತಿಸುವವರನ್ನು ಒಳಗೆ ಬಿಡಲು ಅವಕಾಶ ಮಾಡಿಕೊಡುವುದಿಲ್ಲ. ಅವರು ತಂದಿದ್ದ ಸಮನ್ಸ್ ಸ್ವೀಕರಿಸುವುದಿಲ್ಲ. ಅಮಲಾ, ಅಚಲಾ, ರಾಗಸುಧಾ ಅವರನ್ನು ಪತ್ರಿಕಾಗೋಷ್ಠಿಯಿಂದ ಹೊರಹಾಕಿ ಎಂದು ಸಿಡಿದೆದ್ದರು. ಕೆಲ ಪತ್ರಕರ್ತರು ಕೂಡ ಅಜಿತ್ ಅವರು ಸಮನ್ಸ್ ತಂದಿಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಆಗ ಇದ್ದಕ್ಕಿದ್ದಂತೆ ಅಜಿತ್ ರತ್ ಧಾವಿಸಿದ ಕೆಲ ಹೆಂಗಸು ಸನ್ಯಾಸಿನಿಯರು ರಣಚಂಡಿಯಂತೆ ವಾಗ್ವಾದ ಮಾಡಲು ಶುರು ಮಾಡಿದರು. ಗಂಡಸು ಅನುಯಾಯಿಗಳು ಶಾಂತವಾಗಿದ್ದರೆ, ಅಚಲಾ ಎಂಬಾಕೆ ರುದ್ರಿಯಂತೆ ಕೂಗಾಡುತ್ತ ಅಜಿತ್ ಅವರನ್ನು 'ಹೂ ದ ಹೆಲ್ ಆರ್ ಯೂ, ಗೆಟೌಟ್' ಎಂದು ಕೂಗಿ ಹೊರಹಾಕಿದರು. ವಾಗ್ವಾದ ಮಿತಿಮೀರಿ ಪತ್ರಕರ್ತರ ಮೇಲೆ ನಿತ್ಯಾನಂದ ಶಿಷ್ಯಂದಿರು ಹಾರಾಡಲು ಶುರು ಮಾಡಿದರು. ಆಗ ಪತ್ರಿಕಾಗೋಷ್ಠಿಯನ್ನೇ ರದ್ದುಗೊಳಿಸಿದ ನಿತ್ಯಾನಂದ ಎಲ್ಲ ಪತ್ರಕರ್ತರನ್ನು ಹೊರಹೋಗಲು ಸೂಚಿಸಿದರು. ಪತ್ರಕರ್ತರು ಕೂಡ ತಮ್ಮ ಮಾಧ್ಯಮಮಿತ್ರರ ಜೊತೆ ನಡೆಸಿದ ಅನುಚಿತ ವರ್ತನೆಯನ್ನು ವಿರೋಧಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ಆರತಿ ರಾವ್ ಎಂಬುವವರು ಸುವರ್ಣ ನ್ಯೂಸ್‌ಗೆ ನೀಡಿದ್ದ ಸಂದರ್ಶನದಲ್ಲಿ, ನಿತ್ಯಾನಂದ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದರು, ತಮ್ಮನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. ಯಾವುದೇ ರೀತಿಯ ಚಿಕಿತ್ಸೆ ನೀಡದೆ ತಮ್ಮ ಹಣವನ್ನೆಲ್ಲ ತಿಂದು ಹಾಕಿದ್ದರು ಎಂದು ಆರೋಪಿಸಿದ್ದರು. ನಿತ್ಯಾನಂದನಿಂದ ನನ್ನ ಜೀವನವೇ ಹಾಳಾಗಿದೆ ಎಂದು ಆರತಿ ಅವರು ಸಂದರ್ಶನದಲ್ಲಿ ಅಳಲು ತೋಡಿಕೊಂಡಿದ್ದರು.

ಆರತಿ ಜೊತೆ ಲೈಂಗಿಕ ಸಂಬಂಧವಿಲ್ಲ : ಆರತಿ ಜೊತೆ ತಮಗೆ ಯಾವುದೇ ದೈಹಿಕ ಸಂಬಂಧವಿರಲಿಲ್ಲ, ಆಕೆಯ ಮೇಲೆ ಅತ್ಯಾಚಾರವನ್ನೂ ಮಾಡಿಲ್ಲ. ಅನೇಕ ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆರತಿಗೆ ಹರ್ಪಿಸ್2 ಎಂಬ ಗುಹ್ಯ ರೋಗವಿತ್ತು. ಆಕೆಯ ಜೊತೆ ಲೈಂಗಿಕ ಸಂಪರ್ಕವಿದ್ದರೆ ನನಗೂ ಆ ರೋಗ ಬರಬೇಕಿತ್ತು. ಆದರೆ, ನನಗೆ ಅಂತಹ ರೋಗವಾವುದೂ ಇಲ್ಲ. ಬೇಕಿದ್ದರೆ ರಕ್ತ ಪರೀಕ್ಷೆಗೆ ನಾನು ಸಿದ್ಧ. ಬೇಕಿದ್ದರೆ ಕೋರ್ಟಿನಲ್ಲಿ ಆರತಿಯನ್ನು ಎದುರಿಸಲೂ ನಾನು ಸಿದ್ಧ. ಆದರೆ, ಅವರೇ ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಅವರ ಮೇಲೆ ತಮಿಳುನಾಡಿನಲ್ಲಿಯೂ ಕೇಸ್ ಹಾಕಲಾಗಿದೆ. ಆರತಿ ಮಾಡಿರುವ ಆರೋಪಗಳೆಲ್ಲ ಸುಳ್ಳು ಎಂದು ನಿತ್ಯಾನಂದ ಹೇಳಿದರು.

ಇದು ಸರಿಯಾ? : ಕೋರ್ಟ್ ಸಿಬ್ಬಂದಿ ಮಾಡಬೇಕಾದ ಕೆಲಸ ಪತ್ರಕರ್ತ ಮಾಡಿದ್ದು ಸರಿಯಾ? ಸಮನ್ಸ್ ತೋರಿಸಿದ ಮಾತ್ರಕ್ಕೆ ತಾವೇ ಕರೆಸಿದ ಪತ್ರಕರ್ತನನ್ನು ನಿತ್ಯಾನಂದ ಹೊರಹಾಕಿದ್ದು ಸರಿಯಾ? ಪತ್ರಕರ್ತರ ಮೇಲೆ ಭಯೋತ್ಪಾದಕರಂತೆ ಮುಗಿಬಿದ್ದ ಸನ್ಯಾಸಿನಿಯರ ವರ್ತನೆ ಸರಿಯಾ? ಪತ್ರಕರ್ತರ ವಿರುದ್ಧವೇ ಕೆಲ ಪತ್ರಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಾ? ಇನ್ನು ಮುಂದೆ ಪತ್ರಕರ್ತರು ನಿತ್ಯಾನಂದನ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಬೇಕಾ?

English summary
Swamy Nithyananda of Bidadi Dhyanapeetham ashram sends journalist out of press conference called to deny allegation made by Arati Rao. When journalist from Suvarna News 24/7 channel showed a summons pertaining to a case filed against him, Nithyananda cancelled the meet and asked the journalist to go out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X