ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ : ಕಾಗೇರಿ
ಯಾದಗಿರಿಯ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಸರಿಸಾಟಿಯಾದ ಯಾವ ಅಭ್ಯರ್ಥಿಯೂ ಕಣದಲ್ಲಿ ಇಲ್ಲ, ಈ ಬಾರಿಯು ಕೂಡ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲ್ಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮರನಾಥ ಪಾಟೀಲರು ಸರಳ ಸೃಜನಶೀಲ ವ್ಯಕ್ತಿ ಸಾರ್ವಜನಿಕರ ಮಧ್ಯದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಶಿಕ್ಷಣ ಪ್ರೇಮಿಗಳಾಗಿದ್ದಾರೆ. ಎಚ್ಡಿಬಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಅವರು ಪದವಿಧರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ವ್ಯಕ್ತಿಯಾಗಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಸುಮಾರು 1 ಲಕ್ಷ ಕೋಟಿ ರು.ಗಳ ಬೃಹತ್ ಬಜೆಟ್ ನೀಡಿದೆ. ಅದರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸುಮಾರು 15 ಸಾವಿರ ಕೋಟಿ ರು. ಬಜೆಟ್ನಲ್ಲಿ ನೀಡಿದೆ. ನಮ್ಮ ಸರಕಾರ ಪ್ರಸಕ್ತ ವರ್ಷದಲ್ಲಿ ಶಿಕ್ಷಕರಿಗಾಗಿ 6ನೇ ವೇತನ ಜಾರಿ ಮಾಡಿದೆ ಎಂದರು.
ಶಾಲಾ ಆರಂಭೋತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ವಿಧಾನ ಕಾರ್ಯ ರೂಪದಲ್ಲಿದೆ. ಹಿಂದೆ ಶೈಕ್ಷಣಿಕ ವರ್ಷಗಳಿಗಿಂತಲೂ ಈ ಸಾಲಿನ ಶೈಕ್ಷಣಿಕ ವರ್ಷ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಯಾದಗಿರಿ ಜಿಲ್ಲೆ ಶೈಕ್ಷಣಿಕದಲ್ಲಿ ಹಿಂದುಳಿದ್ದು ಈ ಭಾಗದ ಅಧಿಕಾರಿಗಳು ಜನಪ್ರತಿನಿಧಿಗಳು ಪಾಲಕರು ಹೆಚ್ಚಿನ ಶ್ರಮ ವಹಿಸಿ ಯಾದಗಿರಿ ಮುಂದೆ ತರಬೇಕೆಂದು ಅಭಿಪ್ರಾಯಪಟ್ಟರು.
ಇಡೀ ದೇಶದಲ್ಲಿಯೇ ಶಿಕ್ಷಣದ ಹಕ್ಕನ್ನು ಜಾರಿಗೆ ತಂದ ಕೀರ್ತಿ ಕರ್ನಾಟಕದ್ದು. ಈ ವಿಷಯದಲ್ಲಿ ಕೇಂದ್ರ ಸರಕಾರ ಅಭಿನಂದನಾರ್ಹ. ಎಲ್ಲ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗಬೇಕು. ದಾಖಲಾತಿಗಾಗಿ ವಿವಿಧ ಯೋಜನೆಗಳನ್ನು ಸರಕಾರ ಹಮ್ಮಿಕೊಂಡಿದೆ. ಬಿಜೆಪಿ ಸಕಾರಕ್ಕೆ ಸಾಮಾಜಿಕ ಜವಾಬ್ದಾರಿ ಇದೆ ಎನ್ನುವುದಕ್ಕೆ ಶಿಕ್ಷಣ ಹಕ್ಕು ಕಾಯ್ದೆ ಒಂದು ನಿದರ್ಶನವಷ್ಟೆ. ಶಿಕ್ಷಣದಿಂದಲೇ ಸಾಮಾಜಿಕ ಜಾಗೃತಿ ಉಂಟು ಮಾಡುವುದು ನಮ್ಮ ಸರಕಾರದ ಉದ್ದೇಶ ಎಂದು ಅವರು ವಿವರಿಸಿದರು.
ನೀತಿ ಸಂಹಿತೆ ಗಾಳಿಗೆ ತೂರಿದ ಕಾಗೇರಿ : ಯಾದಗಿರಿಯ ಸರಕಾರಿ ಜ್ಯೂನಿಯರ್ ಕಾಲೇಜ್ನಲ್ಲಿ ಈಶಾನ್ಯ ಪದವೀಧರ ಚುನಾವಣಾ ಭಾಷಣ ಮಾಡುವ ಮೂಲಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರಕಾರಿ ಕಟ್ಟಡ ಅಥವಾ ಸ್ಥಳಗಳನ್ನು ಬಳಸಿ ಕೊಳ್ಳುವಂತಿಲ್ಲ. ಆದರೆ ಕಾಗೇರಿಯವರು ಸರಕಾರಿ ಕಾಲೇಜಿನಲ್ಲೇ ಚುನಾವಣಾ ಪ್ರಚಾರ ಭಾಷಣ ಮಾಡಿದ್ದು ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ವಿರೋಧಿಗಳು ದೂರಿದ್ದಾರೆ.