ಕೆಜಿಎಫ್ ಶಾಸಕ ಸಂಪಂಗಿಗೆ ಜಾಮೀನು ಮಂಜೂರು
ಸಂಪಂಗಿಗೆ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಫಾರೂಕ್ ಹೇಳಿದ್ದಾರೆ.
2009ರಲ್ಲಿ ದಾಖಲಿಸಿದ್ದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾ ಎನ್.ಕೆ. ಸುಧೀಂಧ್ರ ರಾವ್ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಸಂಪಂಗಿಗೆ ಒಂದು ವರ್ಷ ಕಠಿಣ ಶಿಕ್ಷೆ, ಒಂದೂವರೆ ವರ್ಷ ಸಾದಾ ಜೈಲುವಾಸ ಮತ್ತು 1 ಲಕ್ಷ ರುಪಾಯಿ ದಂಡ ವಿಧಿಸಿದ್ದರು. ಸಂಪಂಗಿ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ದಾಖಲಿಸಲಾಗಿತ್ತು.
ಆದರೆ, ಲೋಕಾಯುಕ್ತ ಕೋರ್ಟ್ ಆದೇಶವನ್ನು ಹೈಕೋರ್ಟಿನಲ್ಲಿ ಸಂಪಂಗಿ ಪ್ರಶ್ನಿಸಿದ್ದರು. ಸಂಪಂಗಿ ಅರ್ಜಿ ವಿಚಾರಣೆ ನಡೆಸಿದ ಬಿವಿ ಪಿಂಟೋ ಅವರಿದ್ದ ಏಕಸದಸ್ಯ ಪೀಠ ಮೇಲ್ಕಂಡ ತೀರ್ಪು ನೀಡಿ ಮುಂದಿನ ವಿಚಾರಣೆಯನ್ನು ಜೂ.18ಕ್ಕೆ ಮುಂದೂಡಿದೆ.
ಲೋಕಾಯುಕ್ತ ಕೋರ್ಟ್ ಆದೇಶದಂತೆ 90,000 ರು ದಂಡ ಕಟ್ಟಬೇಕು, ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗಬಾರದು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸಂಪಂಗಿ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ ಎಂದು ನ್ಯಾ ಪಿಂಟೋ ಅಭಿಪ್ರಾಯಪಟ್ಟಿದ್ದಾರೆ.