ಗಂಡ ನಿರ್ವೀರ್ಯ, 'ಕನ್ಯೆ' ಹೆಂಡತಿ ಕೋರ್ಟಿಗೆ ಮೊರೆ
ಮದುವೆಯ ನಂತರ ನಾವಿಬ್ಬರು ಒಂದು ಬಾರಿಯೂ ಸಂಧಿಸಿಲ್ಲ. ದೈಹಿಕವಾಗಿ ನನ್ನನ್ನು ತೃಪ್ತಿಪಡಿಸಲು ಗಂಡ ಯಾವಾಗಲೂ ಹಿಂಜರಿಯುತ್ತಿದ್ದ. ಬೇಕಿದ್ದರೆ, ನನ್ನ ಕನ್ಯತ್ವವನ್ನು ಸಾಬೀತುಪಡಿಸಲು ನಾನು ಯಾವುದೇ ವೈದ್ಯಕೀಯ ಪರೀಕ್ಷೆಗೂ ಸಿದ್ಧಳಿದ್ದೇನೆ ಎಂದು ಮಹಿಳೆ ಕೋರ್ಟಿನ ಮುಂದೆ ಅಲವತ್ತುಕೊಂಡಿದ್ದಾಳೆ.
ಗಂಡ ಮಾತ್ರ, ನನ್ನಿಂದ ಯಾವ ತಪ್ಪೂ ಆಗಿಲ್ಲ. ನಾವಿಬ್ಬರು ಅನೇಕ ಬಾರಿ ಸಂಭೋಗಿಸಿದ್ದೇವೆ. ಮದುವೆ ಮುರಿದು ಬೀಳುವುದಕ್ಕೆ ನಾನು ಕಾರಣ ಅಲ್ಲವೇ ಅಲ್ಲ ಎಂದು ಪೊಲೀಸರೆದಿರು ಗಂಡ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕನ್ಯತ್ವ ಪರೀಕ್ಷೆಗೆ ಸಿದ್ಧಳಿರುವುದಾಗಿ ಹೆಂಡತಿ ಹೇಳಿದ್ದಾಳೆ.
ಹೆಂಡತಿ ಹೇಳುವುದೇನೆಂದರೆ... : ಮದುವೆಯ ಸಂದರ್ಭದಲ್ಲಿ ಸ್ವರ್ಗವೇ ಧರೆಗಿಳಿದುಬಂದಂತಿತ್ತು. ನಂತರ ನಾವಿಬ್ಬರೂ ಮಧುಚಂದ್ರಕ್ಕಾಗಿ ಹಾರಿದ್ದು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಿಗೆ. ಸ್ವರ್ಗ ಸುಖದ ಕನಸು ಕಾಣುತ್ತಿದ್ದ ನನಗೆ, ತನ್ನ ದೌರ್ಬಲ್ಯದ ಮುಖಾಂತರ ನರಕ ಸೃಷ್ಟಿಸಿದ್ದು ಗಂಡ. ಮಧುಚಂದ್ರದಲ್ಲಿ ವಿಚಿತ್ರವಾಗಿ ನಡೆದುಕೊಳ್ಳಲು ಪ್ರಾರಂಭಿಸಿದ. ತಾನು ಎಷ್ಟೇ ಸನಿಹವಾದರೂ ದೂರ ಸರಿಯುತ್ತಿದ್ದ. ಆದರೆ, ಇತರ ಮಹಿಳೆಯರೊಡನೆ ಬೆರೆಯುತ್ತಿದ್ದ.
ಆತ ಮಾನಸಿಕವಾಗಿ ನಿರ್ವೀರ್ಯ ಎಂಬುದು ಸಾಬೀತಾಗುತ್ತ ಹೋಯಿತು. ಸಂಭೋಗ ನಡೆಸಲು ಯಾವುದೇ ಉತ್ಸಾಹ ತೋರಿಸುತ್ತಿರಲಿಲ್ಲ. ಅಸಲಿಗೆ, ಹದಿನೈದು ದಿನಗಳ ಹನಿಮೂನಿನಲ್ಲಿ ಇಬ್ಬರೂ ಒಂದು ಬಾರಿಯೂ ಸಂಧಿಸಲೇ ಇಲ್ಲ. ಮಧುಚಂದ್ರದ ನಂತರ ಮತ್ತೆ ಒಂದು ವಾರಗಳ ಕಾಲ ಗೋವಾಗೆ ಪ್ರವಾಸಕ್ಕೆಂದು ಹೋದಾಗಲೂ ಇದೇ ಅನುಭವವಾಯಿತು. ನಾನು ದೈಹಿಕ ಸುಖಗಳಿಂದ ವಂಚಿತಳಾಗುತ್ತ ಸಾಗಿದೆ. ಕಳೆದ ಒಂಬತ್ತು ತಿಂಗಳಲ್ಲಿ ನಮ್ಮಿಬ್ಬರ ನಡುವೆ ಗಂಡ ಹೆಂಡತಿ ಎಂಬ ಸಂವೇದನೆ ಇರಲೇ ಇಲ್ಲ. ಇದರಿಂದ ನಾನು ಅನುಭವಿಸಿದ ಮಾನಸಿಕ ತುಮುಲ ಅಷ್ಟಿಷ್ಟಲ್ಲ ಎಂದು ಆಕೆ ತನ್ನ ಮನವಿಯಲ್ಲಿ ಹೇಳಿದ್ದಾಳೆ.
ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಪ್ರಕಾರ, ಗಂಡ ಹೆಂಡತಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ. ಇದರಿಂದ ಎಲ್ಲ ಸತ್ಯಾಂಶಗಳು ಹೊರಬೀಳಲಿ. ನನ್ನ ಕನ್ಯತ್ವ ಸಾಬೀತುಪಡಿಸಲು ನ್ಯಾಯಾಲಯ ಅನುಮತಿ ನೀಡಲಿ. ನನ್ನನ್ನು ಮದುವೆಯ ಬಂಧದಿಂದ ಮುಕ್ತಗೊಳಿಸಿ ನನಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾಳೆ. ಕೋರ್ಟ್ ಗಂಡನಿಗೆ ನೋಟೀಸ್ ಜಾರಿ ಮಾಡಿದೆ.