ಸಿಬಿಐ ಲಕ್ಷ್ಮಿನಾರಾಯಣಗೆ ಕೇಂದ್ರದಿಂದ ವಿಶೇಷ ಭದ್ರತೆ
ಮೊದಲನೆಯದಾಗಿ, ಜಗನ್ ಮೋಹನ್ ರೆಡ್ಡಿಯನ್ನು ಬಂಧಿಸಿದರು. ನಂತರ ತಮ್ಮದೇ ಜಡ್ಜ್ ಪಟ್ಟಾಭಿಯ ವಿರುದ್ಧ ಕೇಸು ದಾಖಲಿಸಿದರು. ಈ ಮಧ್ಯೆ, ಅಕ್ರಮ ಗಣಿವೀರ ಗಾಲಿ ಜನಾರ್ದನ ರೆಡ್ಡಿ ಕೇಸ್ ಮೇಲೆ ಸಿಬಿಐ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದ್ದೂ ಸಿಬಿಐ ಲಕ್ಷ್ಮಿನಾರಾಯಣ ಪ್ರಾಣ ಬೆದರಿಕೆಯನ್ನು ಹೆಚ್ಚಿಸಿದೆ.
ಇವೆರಡೂ ಪ್ರಕರಣಗಳು ಸಿಬಿಐ ಲಕ್ಷ್ಮಿನಾರಾಯಣಗೆ ಜೀವ ಬೆದರಿಕೆಯೊಡ್ಡಿದೆ ಎಂದು ಕೆಂದ್ರ ಗುಪ್ತಚರ ಮೂಲಗಳು ರಾಜ್ಯ ಸರಕಾರವನ್ನು ಎಚ್ಚರಿಸುತ್ತಿದ್ದಂತೆ ಗಾಬರಿಗೆ ಬಿದ್ದ ರಾಜ್ಯ ಸರಕಾರ ತಕ್ಷಣ ಸಿಬಿಐ ಲಕ್ಷ್ಮಿನಾರಾಯಣಗೆ ವಿಶೇಷ ಭದ್ರತೆಯನ್ನು ಕಡ್ಡಾಯಗೊಳಿಸಿದೆ.
ಏಕೆಂದರೆ ಈ ಹಿಂದೆಯೇ ಸಿಬಿಐ ಲಕ್ಷ್ಮಿನಾರಾಯಣಗೆ 'ವೈ' ಶ್ರೇಣಿಯ ಭದ್ರತೆ ಕಲ್ಪಿಸಲಾಯಿತು. ಗನ್ ಮ್ಯಾನ್ ನೀಡಲಾಗಿತ್ತು. ಬುಲೆಟ್ ಪ್ರೂಫ್ ಕಾರನ್ನು ನೀಡಲಾಯಿತು.
ಆದರೆ low profile maintain ಮಾಡುವ ಲಕ್ಷ್ಮಿನಾರಾಯಣ ಅವರು ಅದೆಲ್ಲ ನನಗೆ ಬೇಡವೇ ಬೇಡ. ನನ್ನೊಂದಿಗೆ ನನ್ನ ಅಧಿಕಾರಿಗಳು ಇದ್ದರೆ ಸಾಕು. ಎಲ್ಲಾ ಆ 'ಏಡುಕೊಂಡಲವಾಡು' ನೋಡಿಕೊಳ್ಳುತ್ತಾನೆ ಎಂದು ರಾಜ್ಯ ಸರಕಾರ ತೋರಿದ ಕಾಳಜಿಯನ್ನು ನಯವಾಗಿ ನಿರಾಕರಿಸಿದ್ದರು. ಅಂದಹಾಗೆ, ತಿರುಪತಿ ತಿಮ್ಮಪ್ಪನ ಪರಮ ಭಕ್ತ ಈ ಲಕ್ಷ್ಮಿನಾರಾಯಣ.
ಆದರೆ ಬದಲಾದ ವಿಷ ಗಾಲಿಯಿಂದ ಈಗ ಶಸ್ತ್ರಸಜ್ಜಿತ ಆರು ಮಂದಿ ಎಸ್ಕಾರ್ಟ್ ಪೊಲೀಸರು ಸಿಬಿಐ ಲಕ್ಷ್ಮಿನಾರಾಯಣಗೆ ನೆರಳಾಗಿ ಭದ್ರತೆ ಒದಗಿಸಲಿದ್ದಾರೆ. ಇನ್ನು, ಅವರ ಮನೆಯ ಬಳಿ ಮತ್ತು ನಾಂಪಲ್ಲಿಯಲ್ಲಿರುವ ಸಿಬಿಐ ಕಚೇರಿಯ ಸುತ್ತಲೂ ಪೊಲೀಸ್ ಚೌಕಿ ಹಾಕಲಾಗಿದೆ.