ಲಂಚ ತಗೊಂಡಿದ್ದು ನಿಜ, ಸಂಪಂಗಿಗೆ ಜೈಲು: ಕೋರ್ಟ್
ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಸಂಪಂಗಿಗೆ ಒಂದು ವರ್ಷ ಕಠಿಣ ಶಿಕ್ಷೆ, ಒಂದೂವರೆ ವರ್ಷ ಸಾದಾ ಜೈಲುವಾಸ ಮತ್ತು 1 ಲಕ್ಷ ರುಪಾಯಿ ದಂಡ ವಿಧಿಸಿ ನ್ಯಾಯಾಧೀಶ ಎನ್.ಕೆ. ಸುಧೀಂಧ್ರ ರಾವ್ ಅವರು ಇದೀಗತಾನೆ ತೀರ್ಪು ಪ್ರಕಟಿದ್ದಾರೆ. ಇನ್ನು, ಪ್ರಕರಣದ ಎರಡನೆಯ ಆರೋಪಿ ಮುಸ್ತಾಫ್ ಪಾಷಾನನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿದೆ.
ತೀರ್ಪು ಪ್ರಕಟವಾಗುತ್ತಿದ್ದಂತೆ ಸಂಪಂಗಿ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕಂಡುಬಂದಿತು. ಸಂಪಂಗಿಯನ್ನು ವಶಕ್ಕೆ ತೆಗೆದುಕೊಂಡ ಲೋಕಾಯುಕ್ತ ಪೊಲೀಸರು ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಟ್ಟುಬರಲು ಸಿದ್ಧತೆ ನಡೆಸಿದ್ದಾರೆ.
ಶಾಸಕರೊಬ್ಬರು ಲಂಚ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವುದು ಕರ್ನಾಟಕದಲ್ಲಿ ಇದೇ ಮೊದಲ ಪ್ರಕರಣ. ಲೋಕಾಯುಕ್ತ ನ್ಯಾಯಾಲಯದ ಈ ಆದೇಶ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲವನ್ನುಂಟುಮಾಡಿದೆ. ದೂರುದಾರ ಕೆಜಿಎಫ್ನ ಉದ್ಯಮಿ ಹುಸೇನ್ ಮೊಯಿನ್ ಫರೂಕ್ ಅವರು ತೀರ್ಪಿನ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯಾ. ಹೆಗ್ಡೆಗೆ ಸಂತೋಷ: ಅಂದಿನ ಲೋಕಾಯುಕ್ತರಾಗಿದ್ದ ಪ್ರಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದ ನ್ಯಾ. ಸಂತೋಷ್ ಹೆಗ್ಡೆ ಅವರು ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳಿಗೆ ಇದೊಂದು ಪಾಠವಾಗಿದೆ ಎಂದಿದ್ದಾರೆ. ಇದೇ ವೇಳೆ ಹೈದರಾಬಾದಿನಲ್ಲಿ ಸಿಬಿಐ ಜಡ್ಜ್ ಪಟ್ಟಾಭಿ ವಿರುದ್ಧ ಆರೋಪ ಬಂದ ತಕ್ಷಣ ಅವರನ್ನು ಅಮಾನತು ಮಾಡಿರುವ ಬಗ್ಗೆ ಮೆಚ್ಚುಗೆ ಸೂಚಿಸಿದ ಹೆಗ್ಡೆ ಅವರು ಇವೆರಡು ತಾಜಾ ಪ್ರಕರಣಗಳಿಂದ ಜನರಿಗೆ ನ್ಯಾಯಾಂಗದಲ್ಲಿ ವಿಶ್ವಾಸ ಹೆಚ್ಚಿದಂತಾಗಿದೆ ಎಂದಿದ್ದಾರೆ.
ನಿವೇಶನ ವಿವಾದ ಇತ್ಯರ್ಥಪಡಿಸಲು ಶಾಸಕ ಸಂಪಂಗಿ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕೆಜಿಎಫ್ನ ಉದ್ಯಮಿ ಹುಸೇನ್ ಮೊಯಿನ್ ಫರೂಕ್ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 2009ರ ಜನವರಿ 29ರಂದು ಶಾಸಕರ ಭವನದಲ್ಲಿ ಫರೂಕ್ ಅವರಿಂದ ರೂ 50,000 ನಗದು ಮತ್ತು ರೂ 4.5 ಲಕ್ಷ ಮೌಲ್ಯದ ಚೆಕ್ ಪಡೆಯುತ್ತಿದ್ದ ಆರೋಪದ ಮೇಲೆ ಸಂಪಂಗಿ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸರು, 2009ರ ಆಗಸ್ಟ್ನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂಧ್ರ ರಾವ್ ಅವರು ಇಂದು (ಶನಿವಾರ) ಆದೇಶ ಪ್ರಕಟಿಸಿದರು.