ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಭಾರೀ ಮುಖಭಂಗ
ಮೋಟಮ್ಮ, ಇಕ್ಬಾಲ್ ಅಹಮದ್ ಸರಡಗಿ, ಗೋವಿಂದರಾಜ್ ಮತ್ತು ಎಂ ಆರ್ ಸೀತಾರಾಮ್ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.
ಇಬ್ರಾಹಿಂಗೆ ವಿಧಾನಪರಿಷತ್ ಟಿಕೆಟ್ ಕೊಡಿಸಲು ಸಿದ್ದು ದೆಹಲಿ ಮಟ್ಟದಲ್ಲಿ ಭಾರೀ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ಬುಧವಾರ ( ಮೇ 30) ದೆಹಲಿಗೆ ತೆರಳಿ ಮತ್ತೆ ಲಾಭಿ ನಡೆಸಲು ಪ್ರಯತ್ನಿಸಿದ್ದರೂ ಹೈಕಮಾಂಡ್ ಪರಮೇಶ್ವರ್ ಅವರಿಗೆ ಮಾತ್ರ ದೆಹಲಿಗೆ ಬುಲಾವ್ ನೀಡಿತ್ತು. ರಾಜ್ಯ ನಾಯಕರ ಯಾವುದೇ ಒತ್ತಡಕ್ಕೆ ಸೊಪ್ಪು ಹಾಕದ ಹೈಕಮಾಂಡ್ ತನ್ನ ಪಟ್ಟಿಯನ್ನು ಅಂತಿಮಗೊಳಿಸಿದೆ.
ಈ ಮಧ್ಯೆ ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಹೊಣೆಯನ್ನು ದೇವೇಗೌಡರಿಗೆ ವಹಿಸಿದೆ. ಪಕ್ಷದ ಮೂಲಗಳ ಪ್ರಕಾರ ಐವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಸಿ ನಾರಾಯಾಣ ಸ್ವಾಮಿ, ಬಸವರಾಜ್ ಪಾಟೀಲ್ ಯತ್ನಾಳ್, ಅಫ್ಸರ್, ಸೂರ್ಯನಾರಾಯಣ ರೆಡ್ಡಿ ಹಾಗೂ ಮನೋಹರ್ ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.
ಆಡಳಿತ ಬಿಜೆಪಿ ಆರು ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಅವರೆಂದರೆ, ವಿಮಲಾಗೌಡ, ಡಿ ಎಸ್ ವೀರಯ್ಯ, ಭಾನುಪ್ರಕಾಶ್, ರಘುನಾಥ್ ಮಲ್ಯಾಪುರೆ, ಸೋಮಪ್ಪ ಬೇವಿನಮರದ ಮತ್ತು ಯಡಿಯೂರಪ್ಪ ಆಪ್ತ ಬಿ ಜೆ ಪುಟ್ಟಸ್ವಾಮಿ.