ಬಿಟಿಎಸ್ ಬಸ್ ಮಿಸ್ ಆದದ್ದು ಹೇಗೆ? ಮತ್ತು ಯಾಕೆ?
ಬೆಂಗಳೂರು, ಮೇ. 31 : ಬಿಎಂಟಿಸಿ ಬಸ್ ಅಂದ್ರೆ ರಶ್ಶೋ ರಶ್ಶು, ಗಿಜಿಗಿಜಿ, ಕಿರಿಕಿರಿ, ಚಿಲ್ರೆ ಪಿರಿಪಿರಿ ಅಂತ ಗೊಣಗುವವರಿಗೆ ಮತ್ತು ಅದನ್ನು ದಿನನಿತ್ಯ ಬಳಸುವವರಿಗೆ ಬಿಎಂಟಿಸಿ ಬಸ್ ಮಹತ್ವ ಏನೆಂಬುದು ಬಂದ್ ದಿನ ಗೊತ್ತಾಗಿರುತ್ತದೆ. ಬಿಎಂಟಿಸಿ ಬಸ್ ಅಂದ್ರೆ ಜನರನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಬಿಟ್ಟುಬರುವ ಸೇವೆ ಮಾತ್ರವಲ್ಲ, ಅದು ಬೆಂಗಳೂರಿನ ಜೀವನಾಡಿ. ಬಸ್ ಸೇವೆ ನಿಂತು ಹೋದರೆ ಜೀವನವೇ ನಿಂತ ನೀರಾದಂತಾಗುತ್ತದೆ.
ಬೆಂಗಳೂರಿನಲ್ಲಿ ದಿನನಿತ್ಯ 37 ಡಿಪೋಗಳಲ್ಲಿರುವ ಅಂದಾಜು 6 ಸಾವಿರ ಬಸ್ಸುಗಳು ಹಗಲು ರಾತ್ರಿ ಸಂಚರಿಸಿ 45 ಲಕ್ಷ ಜನರನ್ನು ಅವರ ಗಮ್ಯಕ್ಕೆ ತಲುಪಿಸುತ್ತವೆ. ಬಸ್ಸು ಬರಲು ಹತ್ತು ಹದಿನೈದು ನಿಮಿಷ ಅತ್ತಇತ್ತ ಆದರೂ ಬಾಲಸುಟ್ಟ ಬೆಕ್ಕಿನಂತೆ ಆಡುವ ನಾವು, ಬಸ್ಸು ಇಡೀ ದಿನ ಬರದೇ ಇದ್ದರೆ ಹೇಗೆ ಎಂದು ಯಾವತ್ತೂ ಚಿಂತಿಸುವುದಿಲ್ಲ. ಆ ಬಗ್ಗೆ ಚಿಂತಿಸಲು, ಬಿಎಂಟಿಸಿ ಬಸ್ಸುಗಳ ಚಾಲಕರ ಮನಸ್ಸನ್ನು ಅರಿಯಲು ಭಾರತ್ ಬಂದ್ ಒಂದು ಅವಕಾಶ ಮಾಡಿಕೊಟ್ಟಿದೆ.
ಕಿಡಿಗೇಡಿಗಳ ಕೃತ್ಯದಿಂದ ಬಸ್ಸುಗಳು ಧಗಧಗನೆ ಉರಿಯುವ ಸಂದರ್ಭದಲ್ಲಿ, ಬಸ್ಸಿಗಾಗಿ ನಿಲ್ದಾಣದಲ್ಲಿ ಸಾವಿರಾರು ಜನ ಕಾದು ನಿಂತಿರುವ ಸಮಯದಲ್ಲಿ, ಬಂದ್ ಇದೆ ಎಂದು ಗೊತ್ತಿದ್ದೂ ಖಾಕಿ ಸಮವಸ್ತ್ರ ತೊಟ್ಟು ಸರಿಯಾದ ಸಮಯಕ್ಕೆ ಹಾಜರಾದ ಬಸ್ ಸಿಬ್ಬಂದಿಗಳು ಬಸ್ಸನ್ನು ಹೊರತೆಗೆಯಲು ಕಾದು ಕುಳಿತಿರುವ ಘಳಿಗೆಯಲ್ಲಿ ಯಶವಂತಪುರದ ಡಿಪೋ ಹೊಕ್ಕ ಒನ್ಇಂಡಿಯಾ ಕನ್ನಡ ಸಂಪಾದಕರಾದ ಶಾಮ ಸುಂದರ ಅವರೊಂದಿಗೆ ಬಿಎಂಟಿಸಿ ಸಿಬ್ಬಂದಿಗಳು ಮನಬಿಚ್ಚಿ ಮಾತನಾಡಿದ್ದಾರೆ.
"ತಮ್ಮ ಸ್ವಂತ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳನ್ನು ಅದರ ಮಾಲಿಕರು ಎಷ್ಟು ಪ್ರೀತಿಸುತ್ತಾರೋ ಅದಕ್ಕಿಂತ ಹೆಚ್ಚು ಪ್ರೀತಿ ನಮಗೆ ನಮ್ಮ ಆರು ಚಕ್ರಗಳ ವಾಹನದ ಮೇಲಿರುತ್ತದೆ. ಅಲ್ಲಿ ಬಸ್ಸು ಹೊತ್ತಿ ಉರಿಯುತ್ತಿದ್ದರೆ ಇಲ್ಲಿ ನಮ್ಮ ಹೊಟ್ಟೆ ಉರಿಯುತ್ತಿರುತ್ತದೆ. ಬೆಂಕಿ ಹಚ್ಚುವವರಿಗೆ ಒಂದು ಬೆಂಕಿ ಕಡ್ಡಿ, ಆದರೆ ನಮಗೆ ಮಾತ್ರ 40 ಲಕ್ಷ ರು. ಭಸ್ಮವಾಗಿರುತ್ತದೆ. ಬಸ್ಸು ಸರಕಾರದ್ದಲ್ಲ ಇದು ನಮ್ಮ ಆಸ್ತಿ, ನಮ್ಮ ಹೆಮ್ಮೆ, ನಮಗೆ ಅನ್ನ ನೀಡುವ ದೇವರು" ಅನ್ನುತ್ತಾರೆ ಬಸ್ ಡ್ರೈವರ್ ರುದ್ರಯ್ಯ. ರುದ್ರಯ್ಯ ಮಾತ್ರವಲ್ಲ ಅಲ್ಲಿರುವ ಎಲ್ಲ 250 ಬಸ್ಸುಗಳನ್ನು ಚಲಾಯಿಸುವ ಎಲ್ಲ 700 ಸಿಬ್ಬಂದಿಗಳಿಗೂ ತಮ್ಮ ಬಸ್ಸುಗಳ ಮೇಲೆ ಇನ್ನಿಲ್ಲದ ಮಮಕಾರ.
"ನಮಗೂ ಬಸ್ ನಿಲ್ದಾಣದಲ್ಲಿ ಪರದಾಡುತ್ತಿರುವ ಪ್ರಯಾಣಿಕರ ಬಗ್ಗೆ ಕನಿಕರ, ಕಾಳಜಿಯಿದೆ. ಇಲ್ಲದಿದ್ದರೆ, ಬಂದ್ ಇದೆ ಅಂತ ಗೊತ್ತಿದ್ದೂ ನಾವ್ಯಾಕೆ ಸಮವಸ್ತ್ರ ಧರಿಸಿ ಡ್ಯೂಟಿಗೆ ಬರುತ್ತಿದ್ದೆವು? ಬಂದ್ ಇದ್ದರೂ ತೊಂದರೆಯಿಲ್ಲ, ನಾವು ಬಸ್ ಹೊರತೆಗೆಯಲು ಸದಾ ಸಿದ್ಧ ಆದರೆ, ಅನ್ಯಾಯವಾಗಿ ಬೆಂಕಿ ಹಚ್ಚಿದರೆ ಯಾರು ಜವಾಬ್ದಾರರು? ಕೊನೆಗೆ ಸಂಕಷ್ಟಕ್ಕೊಳಗಾಗುವವರು ಯಾರು?" ಅಂತ ನಿರ್ವಾಹಕ ನಾಗರಾಜು ಅವರು ಪ್ರಶ್ನಿಸುತ್ತಾರೆ. ಪರಿಸ್ಥಿತಿ ಈಗ ತಿಳಿಹೋಗಬಹುದು ಆಗ ತಿಳಿಹೋಗಬಹುದು ಎಂದು ಎಲ್ಲ ಸಿಬ್ಬಂದಿಗಳು ಕಾದು ಕುಳಿತಿದ್ದಾರೆ.
ಇದು ಇದೊಂದೇ ಡಿಪೋದಲ್ಲಿ ಕಂಡುಬರುವ ಚಿತ್ರಣವಲ್ಲ. ಎಲ್ಲ 37 ಡಿಪೋಗಳಲ್ಲಿ ಇದೇ ಪರಿಸ್ಥಿತಿ. ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಪ್ರಯಾಣಿಕರಿಗಾಗಿ ಬಸ್ ಹೊರತೆಗೆಯಲು ಅಧಿಕಾರಿಗಳೇನೋ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಆದರೆ, ಮತ್ತಾರೋ ಕಿಡಿಗೇಡಿಗಳು ಕಲ್ಲು ತೂರಿದರೆ, ಬೆಂಕಿ ಇಟ್ಟರೆ ನೋವಿಗೀಡಾಗುವವರು ಈ ಸಿಬ್ಬಂದಿಗಳೆ. ಹೀಗಾಗಿ ಅಲ್ಲಿ ಪ್ರಯಾಣಿಕರು ಪರದಾಡುತ್ತಿದ್ದರೂ ಬಸ್ ಸೇವೆ ಶುರು ಮಾಡಲು ಸಿಬ್ಬಂದಿಗಳು ಹಿಂಜರಿಯುತ್ತಾರೆ. ಬಸ್ ಕೈಕೊಟ್ಟಾಗ ಸಿಬ್ಬಂದಿಗಳನ್ನು ದೂಷಿಸುವ ನಾವು ಅವರ ಮನದ ಇಂಗಿತವನ್ನೂ ಅರಿಯಬೇಕಲ್ಲವೆ?