ರುಪಾಯಿ ಚಿಹ್ನೆಗೆ ವಾಸ್ತು ದೋಷ? ಮೈ ಗಾಡ್!
ಇದಕ್ಕೆ ಮೂಲಕ ಕಾರಣ ಇತ್ತೀಚೆಗೆ ರೂಪಿಸಲಾಗಿರುವ ರುಪಾಯಿಯ ಹೊಸ ಚಿಹ್ನೆಯ ವಾಸ್ತು ದೋಷ ಅಂತಾರೆ ಗೌಹಾತಿಯ ವಾಸ್ತು ಶಾಸ್ತ್ರಜ್ಞ. 50 ವರ್ಷದ ವಾಸ್ತು ಶಾಸ್ತ್ರಜ್ಞ ರಾಜಕುಮಾರ್ ಜಾಂಝರಿ ಅವರ ಪ್ರಕಾರ, ರುಪಾಯಿಯ ಹೊಸ ಚಿಹ್ನೆ ಸರಿಯಿಲ್ಲ. ಆಂಗ್ಲ ಆರ್ ಅಕ್ಷರದ ಕತ್ತನ್ನು ಸೀಳಿದ್ದರಿಂದ ರುಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ತರ್ಕಿಸಿದ್ದಾರೆ.
ರುಪಾಯಿಯ ಈ ಹೊಸ ಚಿಹ್ನೆಯನ್ನು ರೂಪಿಸಿದವರು ಐಐಟಿ-ಗೌಹಾತಿಯ ವಿನ್ಯಾಸ ಇಲಾಖೆಯಲ್ಲಿ ಸಹಾಯಕ ಪ್ರೊಫೆಸರಾಗಿರುವ ಧರ್ಮಲಿಂಗಂ ಉದಯ ಕುಮಾರ್. 2010ರಲ್ಲಿ ಹುಟ್ಟಿದ, ದೇವನಾಗರಿ ಲಿಪಿಯ 'ರ' ಮತ್ತು ಆಂಗ್ಲ ಅಕ್ಷರ 'R' ಸಂಗಮದ ಈ ಚಿಹ್ನೆ 10, 20, 50 100, 500 ಮತ್ತು 1000 ರು ಮೌಲ್ಯದ ನೋಟುಗಳ ಮೇಲೆ ರಾರಾಜಿಸುತ್ತಿದೆ. ಮತ್ತು ಕತ್ತಿನ ಜಾಗದಲ್ಲಿ ಒಂದು ಅಡ್ಡಗೆರೆಯನ್ನು ಎಳೆಯಲಾಗಿದೆ.
"ಅಂದಿನಿಂದ ಇಂದಿನವರೆಗೆ ರುಪಾಯಿ ತನ್ನ ಮೌಲ್ಯವನ್ನು ಶೇ.23ರಷ್ಟು ಕಳೆದುಕೊಂಡಿದೆ. ಅಂದು ಡಾಲರ್ ಎದುರಿಗೆ 48 ಇದ್ದ ರು. ಬೆಲೆ ಇಂದು ಡಾಲರ್ಗೆ ಪ್ರತಿಯಾಗಿ 56 ರು. ತಲುಪಿದೆ. ಇದರ ಬಗ್ಗೆ ಕಳೆದ ವರ್ಷದ ಡಿಸೆಂಬರ್ನಲ್ಲಿ ಪತ್ರ ಬರೆದಿದ್ದೆ. ಅದೇ ಪತ್ರದ ಪ್ರತಿಯನ್ನು ವಿತ್ತ ಸಚಿವ ಮತ್ತು ರಿಸರ್ವ್ ಬ್ಯಾಂಕ್ ಇಂಡಿಯಾಗೂ ಕಳುಹಿಸಲಾಗಿತ್ತು" ಎಂದು ರಾಜಕುಮಾರ್ ಅವರು ನುಡಿದಿದ್ದಾರೆ.
"ರುಪಾಯಿಯ ಹೊಸ ಚಿಹ್ನೆ ರೂಪ ತಾಳುವ ಮೊದಲು 2009ರಲ್ಲಿ ಭಾರತ ಆರ್ಥಿಕ ಹೊಡೆತವನ್ನು ಸಮರ್ಥವಾಗಿ ಎದುರಿಸಿತ್ತು. ಚಿಹ್ನೆ ರೂಪಿಸಿದ ನಂತರರ ಮತ್ತೆ ಆರ್ಥಿಕ ಬಿಕ್ಕಟ್ಟು ಎದುರಾಗುವ ಅಪಾಯ ಬಂದಿದೆ. ರುಪಾಯಿ ಚಿಹ್ನೆಯ ವಾಸ್ತವನ್ನು ಬದಲಿಸುವುದೇ ಉಳಿದಿರುವ ಏಕೈಕ ಮಾರ್ಗ" ಎಂದು ವಾದವನ್ನು ರಾಜಕುಮಾರ್ ಮುಂದಿಟ್ಟಿದ್ದಾರೆ. ಈ ವಾದದ ಬಗ್ಗೆ ಪ್ರತಿಕ್ರಿಯಿಸಿರುವ ಧರ್ಮಲಿಂಗ್ ಉದಯ ಕುಮಾರ್ ಅವರು, ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದಿದ್ದಾರೆ.
ಈ ವಾದವನ್ನು ನೀವು ನಂಬುತ್ತೀರಾ? ರಾಜಕುಮಾರ್ ಜಾಂಝರಿ ಅವರ ವಾದದಲ್ಲಿ ಹುರುಳಿದೆಯಾ? ರುಪಾಯಿ ಚಿಹ್ನೆ ವಿನ್ಯಾಸ ಬದಲಿಸಿದರೆ ಭಾರತದ ಆರ್ಥಿಕ ಸ್ಥಿತಿ ಸುಧಾರಿಸುವುದಾ?