ಕೆಂಪೇಗೌಡನನ್ನು ರಮ್ಯಾ ಆ ರೀತಿ ಕೊಂದಿದ್ದು ಏಕೆ?
ಕೆಂಪೇಗೌಡನ ಹತ್ಯೆ ಹಿಂದೆ ರಮ್ಯಾ ಅಲ್ಲದೆ ಇನ್ನಿಬ್ಬರ ಕೈವಾಡ ಇರುವುದು ಪತ್ತೆ ಹಚ್ಚಿದ ಪೊಲೀಸರು ಮೊದಲಿಗೆ ಬಾಬುಸ್ವಾಮಿಯನ್ನು ಬಂಧಿಸಿ ಬಾಯ್ಬಿಡಿಸಿದರು. ಬಾಬುಸ್ವಾಮಿ ಕೊಲೆ ಸಂಚು, ಕೊಲೆ ನಂತರದ ಕತೆಯನ್ನು ವಿಸ್ತಾರವಾಗಿ ಹೇಳಿ ಮುಗಿಸಿದ. ಇದರಿಂದ ಪೊಲೀಸರಿಗೆ ಕೊಲೆಗೆ ಸಹಾಯ ಮಾಡಿದ ರಮ್ಯಾಳ ಸಂಬಂಧಿಕರ ವಿವರಗಳು ಲಭ್ಯವಾಯಿತು. ಆದರೆ, ಕೊಲೆಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿರಲಿಲ್ಲ.
ಮೇಲ್ನೋಟಕ್ಕೆ ರಮ್ಯಾ ಹಾಗೂ ಬಾಬುಸ್ವಾಮಿ ನಡುವಿನ ಅನೈತಿಕ ಸಂಬಂಧವೇ ಕಾರಣ ಎಂದು ಶಂಕಿಸಲಾಗಿತ್ತು. ಆದರೆ, ಅಸಲಿ ವಿಷಯವೇ ಬೇರೆಯಾಗಿತ್ತು.
ಸುಮಾರು 6 ವರ್ಷಗಳ ಹಿಂದೆ ಸೋದರ ಮಾವ ಕೆಂಪೇಗೌಡನನ್ನು ಮದುವೆಯಾಗಿ ಬೆಂಗಳೂರಿಗೆ ಬಂದ ರಮ್ಯಾಳಿಗೆ ನಗರ ಜೀವನದ ಅರಿವಿರಲಿಲ್ಲ. ಚಿಕ್ಕಂದಿನಿಂದ ನೋಡಿದ್ದ ಮಾವನಿಗೂ ಮದುವೆಯಾದ ಮೇಲೆ ಗಂಡನಾಗಿ ಬದಲಾದ ಮಾವನಿಗೂ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿತ್ತು.
ಪ್ರತಿನಿತ್ಯ ಕುಡಿದು ಬಂದು ದೈಹಿಕವಾಗಿ, ಮಾನಸಿಕವಾಗಿ ಹಿಂಸಿಸುತ್ತಿದ್ದ ಕೆಂಪೇಗೌಡ, ಮರ್ಯಾದಾ ಪುರುಷನಾಗಿರಲಿಲ್ಲ. ಹಿಂಸೆಯನ್ನು ಸಹಿಸದೆ ತವರಿಗೆ ಹೋಗಿ ಎಲ್ಲವನ್ನು ಹೇಳುತ್ತೇನೆ ಎಂದು ಪ್ರತಿಭಟಿಸಿದ ರಮ್ಯಾಳಿಗೆ ಕೆಂಪೇಗೌಡ ಜೀವ ಬೆದರಿಕೆ ಒಡ್ಡಿದ್ದ. ಇಡೀ ಫ್ಯಾಮಿಲಿ ಸುಟ್ಟು ಬಿಡುತ್ತೇನೆ ಎಂದು ಆರ್ಭಟಿಸಿದ್ದ.
ಹೊರಗಡೆ ಒಂದು ಥರಾ ಮನೆಯಲ್ಲಿ ಒಂದು ಥರಾ ಆಡುವ ಮಾವನನ್ನು ನೋಡಿ ರಮ್ಯಾ ಮಂಕಾಗಿ ಬಿಟ್ಟಳು. ತನ್ನ ಹೆಸರಿನಲ್ಲೇ ಗಾರ್ಮೆಂಟ್ಸ್ ಫ್ಯಾಕ್ಟರಿ ತೆರೆದ ಮಾವನ ವರ್ತನೆ ರಮ್ಯಾಳಿಗೆ ನಿಗೂಢವಾಗತೊಡಗಿತು.
ಕೊನೆಗೆ ಕೆಂಪೇಗೌಡನಿಗೆ ಇನ್ನೊಂದು ಹುಡುಗಿ ಜೊತೆ ಅಕ್ರಮ ಸಂಬಂಧ ಇರುವುದು ಕೂಡಾ ರಮ್ಯಾಳಿಗೆ ತಿಳಿಯಿತು. ಮೊದಲೇ ನೊಂದಿದ್ದ ರಮ್ಯಾಳಿಗೆ ಇದು ಸಹಿಸಲು ಸಾಧ್ಯವಾಗಲಿಲ್ಲ. ಆ ಸಮಯಕ್ಕೆ ಸಿಕ್ಕ ಬಾಬುಸ್ವಾಮಿ ಜೊತೆಗೂಡಿ ಮರ್ಡರ್ ಪ್ಲ್ಯಾನ್ ಮಾಡಿಬಿಟ್ಟಳು.
ಮುದ್ದೆಯಲ್ಲಿ ವಿಷ ಇಟ್ಟು ಕೊಂದರೂ ತೃಪ್ತಿಯಾಗಲಿಲ್ಲ. ಅವನನ್ನೇ ಸರ್ವಸ್ವ ಎಂದು ತಿಳಿದ ನನಗೆ ಮೋಸವಾಗಿದ್ದನ್ನು ಸಹಿಸಲಾಗಲಿಲ್ಲ. ನನ್ನ ಕೋಪವನ್ನು ಅವನ ದೇಹ ಕತ್ತರಿಸುವ ಮೂಲಕ ತೀರಿಸಿಕೊಂಡೆ ಎಂದು ರಮ್ಯಾ ಹೇಳಿಕೆ ಕೊಟ್ಟಿದ್ದಾಳೆ.
ಆದರೆ, ಬಾಬುಸ್ವಾಮಿ ಜೊತೆ ಅಕ್ರಮ ಸಂಬಂಧ ಇರುವ ಬಗ್ಗೆ ರಮ್ಯಾಳಿಂದ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ರಮ್ಯಾಳಿಗೆ ಬಾಬುಸ್ವಾಮಿ ಜೊತೆ ಯಾವುದೇ ಅನೈತಿಕ ಸಂಬಂಧ ಇಲ್ಲ. ಆದರೂ, ಕೆಂಪೇಗೌಡನನ್ನು ಕೊಲ್ಲಲು ಏಕೆ ಸಹಾಯ ಮಾಡಿದ ಎಂಬುದು ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.