ಕೇರಳದ ರಾಮಲಕ್ಷಣ ದೇಗುಲದಲ್ಲಿ ಅನಂತ ನಿಧಿ ಪತ್ತೆ?
ತ್ರಿಶೂರು, ಮೇ 29: ತಿರುವನಂತಪುರದ ಅನಂತಪದ್ಮನಾಭ ದೇಗುಲ ಮಾದರಿಯಲ್ಲೇ ರಾಜ್ಯದ ತ್ರಿಶೂರು ಜಿಲ್ಲೆಯ ತಿರುವಿಲ್ವಮಲೆಯಲ್ಲಿರುವ 600 ವರ್ಷ ಪುರಾತನ ವಿಲ್ವಾದ್ರಿನಾಥ (Vilwadrinatha- ರಾಮ, ರಾಮಭದ್ರಸ್ವಾಮಿ) ದೇಗುಲದಲ್ಲಿ ಕೂಡ ಅಪಾರ ಪ್ರಮಾಣದ ಸಂಪತ್ತು ಇದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ಅನಂತಪದ್ಮನಾಭ ದೇಗುಲದಂತೆ ವಿಲ್ವಾದ್ರಿನಾಥ ದೇಗುಲದಲ್ಲೂ ನೆಲಮಾಳಿಗೆಯಿದೆ. ಸಂಪತ್ತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಇತ್ತೀಚಿಗೆ ಈ ನೆಲಮಾಳಿಗೆ ಪ್ರವೇಶ ಮಾಡುವ ಯತ್ನ ನಡೆದಿತ್ತಾದರೂ ಅದು ವಿಫಲಗೊಂಡಿದೆ. ಹೀಗಾಗಿ ಇದೀಗ ಇಡೀ ದೇಗುಲಕ್ಕೆ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ.
ವಿಲ್ವಾದ್ರಿನಾಥ ದೇಗುಲ ಕೇರಳದ ಪ್ರಸಿದ್ಧ ರಾಮಕ್ಷೇತ್ರ. ಇಲ್ಲಿ ರಾಮನಷ್ಟೇ ಆತನ ಸೋದರ ಲಕ್ಷ್ಮಣನನ್ನೂ ಪೂಜಿಸುತ್ತಾರೆ. ಬೃಹತ್ ಬಂಡೆಯ ಮೇಲೆ ಈ ದೇಗುಲ ನಿರ್ಮಿಸಲಾಗಿದ್ದು, ಈ ದೇಗುಲ ಪೂರ್ಣ ಬೆಟ್ಟವನ್ನು ಆವರಿಸಿಕೊಂಡಿದೆ. ಈ ದೇಗುಲದ ಒಳಗೆ 10 ಅಡಿ ಆಳದಲ್ಲಿ ನೆಲ ಮಾಳಿಗೆ ಇದೆ. ಈ ವಿಷಯ ಸುಮಾರು 10 ವರ್ಷಗಳ ಕೆಳಗೆ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ದೇಗುಲದ ಉಸ್ತುವಾರಿ ಹೊತ್ತಿರುವ ಕೊಚ್ಚಿನ್ ದೇವಸ್ವಂ ಬೋರ್ಡ್ (Cochin Devaswom Board) ಕೆಲ ವರ್ಷಗಳ ಹಿಂದೆ ಪುರಾತತ್ವ ಇಲಾಖೆ ನೆರವಿನೊಂದಿಗೆ ನೆಲಮಾಳಿಗೆ ತೆರೆಯಲು ಯತ್ನಿಸಿತ್ತು.
ಈ ರಾಮನ ಕ್ಷೇತ್ರದಲ್ಲಿ ರಾಮನ ಚಿನ್ನದ ಬಿಲ್ಲು ಮತ್ತು ಇತರೆ ಬೆಲೆ ಕಟ್ಟಲಾಗದ ಅಪಾರ ಪ್ರಮಾಣದ ಆಭರಣ ಇದೆ ಎನ್ನುವ ದಂತಕತೆ ಹಿಂದಿನಿಂದಲೂ ಇದೆ. ಕೊಚ್ಚಿಯ ರಾಜರು ತಮ್ಮ ಸಂಪತ್ತನ್ನು ಇದರಲ್ಲಿ ಅಡಗಿಸಿಟ್ಟಿದ್ದಾರೆ ಎನ್ನುವ ಕಥೆಯೂ ಚಾಲ್ತಿಯಲ್ಲಿದೆ.
18ನೇ ಶತಮಾನದಲ್ಲಿ ಮೈಸೂರು ಹುಲಿ ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಾಗ ಹಲವು ರಾಜರು ಅರಮನೆಯ ಸಂಪತ್ತನ್ನು ದೇವಸ್ಥಾನಗಳಲ್ಲಿ ಅಡಗಿಸಿಟ್ಟಿದ್ದರು. ಅದೇ ರೀತಿ ಕೊಚ್ಚಿ ರಾಜ ಕೂಡ ಈ ಮಾದರಿಯಲ್ಲಿ ನೆಲಮಾಳಿಗೆಯೊಳಗೆ ಸಂಪತ್ತು ಇಟ್ಟಿದ್ದಾರೆ. ತಿರುವಾಂಕೂರು ರಾಜರಷ್ಟೇ ಕೊಚ್ಚಿ ರಾಜರೂ ಸಿರಿವಂತರಾಗಿದ್ದರು. ಹೀಗಾಗಿ ದೇಗುಲದ ನೆಲ ಮಾಳಿಗೆಯಲ್ಲಿ ಅಪಾರ ಪ್ರಮಾಣದ ಸಂಪತ್ತು ಇರುವ ಎಲ್ಲಾ ಸಾಧ್ಯತೆಯೂ ಇದೆ ಎನ್ನುತ್ತಾರೆ ನಾರಾಯಣಿ ಅಮ್ಮ ಎಂಬ 80 ವರ್ಷದ ಭಕ್ತೆ.
ಗರ್ಭಗುಡಿಯ ಸುತ್ತ ಇರುವ ಪ್ರಾಕಾರದ ಒಂದೆಡೆ ನೆಲಮಾಳಿಗೆಗೆ ಹೋಗುವ ಬಾಗಿಲು ಇದೆ. ಇದಕ್ಕೆ ದಪ್ಪ ಮರದ ಬಾಗಿಲು ಇದ್ದು ಕಳೆದ ಹಲವಾರು ವರ್ಷಗಳಿಂದ ಈ ಬಾಗಿಲು ತೆರೆದಿಲ್ಲ. ನೆಲಮಾಳಿಗೆಗೆ ಇಳಿಯಬೇಕಾದರೆ ನಾಲ್ಕು ಅಡಿ ಉದ್ದ ಮತ್ತು ಎರಡು ದಪ್ಪವಿರುವ ಕಲ್ಲನ್ನು ಸರಿಸಿ ಹೋಗಬೇಕು. ಈ ಕಲ್ಲನ್ನು ಸರಿಸಲು ಮಾಡಿರುವ ಪ್ರಯತ್ನಗಳು ಫಲ ನೀಡಿಲ್ಲ.
ವಿಲ್ವಾದ್ರಿನಾಥ ದೇಗುಲದ ನೆಲ ಮಾಳಿಗೆಯಲ್ಲಿ ಭಾರೀ ಸಂಪತ್ತು ಇರಬಹುದು ಎಂಬುದು ಊಹೆ. ಆದರೆ ಏನೇನು ಇದೆ ಎಂಬುದರ ಬಗ್ಗೆ ಯಾರಿಗೂ ನಿಖರ ಮಾಹಿತಿ ಇಲ್ಲ. ಆದರೆ ದೇಗುಲದಲ್ಲಿರುವ ಪುರಾತನ ಕಾಲದ ತಾಳೆಗರಿಗಳಲ್ಲಿ (Thaliyolas) ಈ ಕುರಿತು ಯಾವುದಾದರೂ ಸುಳಿವು ಇರಬಹುದು. ಇದುವರೆಗೆ ಈ ತಾಳೆಗರಿಗಳನ್ನು ಯಾರೂ ನಿಖರವಾಗಿ ಓದುವ ಯತ್ನ ಮಾಡದೇ ಇರುವುದರಿಂದ ರಹಸ್ಯ ಬಯಲಾಗಿಲ್ಲ.