ಜಗನ್ ಆಸ್ತಿ ಗಳಿಕೆ ಅಂಬಾನಿಗಿಂತ ವೇಗವಾಗಿತ್ತು!
ಬರೀ ಒಂದು ಅಂಬಾನಿ ಮನೆತನವೇಕೆ? ಅದು ಟಾಟಾ ಮತ್ತು ಬಿರ್ಲಾಗಳಿಗಿಂತ ವೇಗವಾಗಿ ಕ್ರೋಡೀಕರಣ ಸಂಪತ್ತು ಮಹಾಸ್ವಾಮಿ. ಆದರೆ ಅದೆಲ್ಲ ಅಕ್ರಮವಾಗಿ ಗಳಿಸಿದ ಆಸ್ತಿ. ಅದಕ್ಕೇ ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಕೇಸು ಹಾಕಿದ್ದೇವೆ ಎಂದು ಸಿಬಿಐ ವಿಶೇಷ ಕೋರ್ಟಿಗೆ ತಿಳಿಸಿದೆ.
ಆದರೆ ಸ್ವಾಮಿ ಈ ಜಗನ್ ಇದ್ದಾರಲ್ಲಾ, ಅವರು ಹೀಗೆ ಅಕ್ರಮವಾಗಿ ಆಸ್ತಿಪಾಸ್ತಿ ಮಾಡಿಕೊಂಡಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ 12,000 ಕೋಟಿ ರುಪಾಯಿ ನಷ್ಟವುಂಟಾಗಿದೆ ಸ್ವಾಮಿ. ಕೇವಲ ನಾಲ್ಕು ವರ್ಷಗಳಲ್ಲಿ ಈ ಪುಣ್ಯಾತ್ಮ 350 ಕೋಟಿ ರುಪಾಯಿ ಗುಡ್ಡೆಹಾಕಿದ್ದಾರೆ. ಇದು white-collar crime ಅಲ್ಲದೇ ಮತ್ತೇನು ಸ್ವಾಮಿ. ಇದು ನಿಜಕ್ಕೂ ದುರದೃಷ್ಟಕರ ಎಂದು ಸಿಬಿಐ ವಿಶೇಷ ಕೋರ್ಟಿಗೆ ಹೇಳಲಾಗಿದೆ.
'ಇಷ್ಟೆಲ್ಲ ಅಕ್ರಮ ನಡೆದಿದೆ ಎಂದು ಹೇಳುತ್ತಿದ್ದರೂ ಅವರನ್ನು ತಕ್ಷಣ ಸೂಕ್ತ ಸಮಯದಲ್ಲಿ ಸಿಬಿಐ ಬಂಧಿಸಲಿಲ್ಲವೇಕೆ? ಆದ್ದರಿಂದ ಈಗ ಜಗನ್ ಕಸ್ಟಡಿ ಕೇಳುವುದು ತರವಲ್ಲ. ಆದ್ದರಿಂದ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದೇವೆ. ತನಿಖೆಯನ್ನು ಮುಂದುವರಿಸಿ' ಎಂದು ವಿಶೇಷ ಕೋರ್ಟ್ ನ್ಯಾಯಾಧೀಶರು ಸಿಬಿಐ ಕಿವಿಹಿಂಡಿದರು.