ಯುಟಿಲಿಟಿ ಬಿಲ್ದಿಂಗ್ ಅಡ ಇಡಲಿರುವ ಬಿಬಿಎಂಪಿ
ಮಂಗಳವಾರ (ಮೇ.29) ಈ ಬಗ್ಗೆ ನಿರ್ಣಯ ಕೈಗೊಳ್ಳಲು ಸಭೆ ಕರೆದಿದ್ದ ಮೇಯರ್ ಡಿ ವೆಂಕಟೇಶ್ ಮೂರ್ತಿ ಅವರಿಗೆ ಭಾರಿ ಮುಖಭಂಗವಾಗಿದೆ. ನಗರದ ಪಾರಂಪರಿಕ ಕಟ್ಟಡಗಳನ್ನು ಅಡಮಾನ ಇಡುವುದನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕ ಗುಣಶೇಖರ್ ಅವರ ನೇತೃತ್ವದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲಾಯಿತು.
ಕಟ್ಟಡಗಳನ್ನು ಅಡ ಇಟ್ಟು ಸಾಲ ಪಡೆಯಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದರ ಬದಲು ರಾಷ್ಟ್ರೀಕೃತ ಬ್ಯಾಂಕ್ ನಿಂದ ಪಡೆದ ಸಾಲ ತೀರಿಸಲು ಬಿಲ್ಡಿಂಗ್ ಅಡ ಇಡಲು ಹೊರಟಿರುವುದು ಸರಿಯಿಲ್ಲ ಎಂದು ಗುಣಶೇಖರ್ ಹೇಳಿದ್ದಾರೆ.
ಕಂದಾಯ, ಜಾಹೀರಾತು, ನಗರ ಯೋಜನೆಗಳಿಂದ ಆದಾಯ ಸಂಗ್ರಹಿಸಬಹುದಾಗಿತ್ತು. ಆದರೆ, ಸಾಲ ತೀರಿಸಲು ಕಟ್ಟಡ ಅಡ ಇಡುವುದು ಅಪಮಾನಕರ ಎಂದು ಕಾಂಗ್ರೆಸ್ ನ ಗುಣಶೇಖರ್ ಹೇಳಿದ್ದಾರೆ.
ಜೆಡಿಎಸ್ ನ ಬಿಬಿಎಂಪಿ ಸದಸ್ಯ ತಿಮ್ಮೇಗೌಡ ಕೂಡಾ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಪ್ಪುಬಾವುಟ ಪ್ರದರ್ಶಿಸಿದರು. ಸಾವಿರಾರು ಕೋಟಿ ಸಾಲ ತಂದರೂ ಸಮಸ್ಯೆ ಬಗೆಹರಿಯುವುದಿಲ್ಲ. ಮೊದಲಿಗೆ ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕಿ ಎಂದು ತಿಮ್ಮೇಗೌಡ ಆಗ್ರಹಿಸಿದ್ದಾರೆ.
ಅನುದಾನ ಕೇಳಿ ಪಡೆಯಿರಿ: ಶಾಸಕರು ಕೋಟಿಗಟ್ಟಲೇ ಅನುದಾನ ತರುತ್ತಾರೆ. ಅದರಲ್ಲಿ ಬಿಬಿಎಂಪಿಗೂ ನೀಡಲಿ, ಸಾರಿಗೆ ಇಲಾಖೆ ಆರ್ ಟಿಒನಿಂದ ಕೋಟಿಗಟ್ಟಲೇ ಆದಾಯ ಬರುತ್ತಿದೆ. ಆದರೆ, ಸರ್ಕಾರ ಬಿಬಿಎಂಪಿಗೆ ಏನನ್ನೂ ಕೊಡುತ್ತಿಲ್ಲ. ಸರ್ಕಾರದಿಂದ ಅನುದಾನ ಪಡೆಯುವಂತೆ 198 ಸದಸ್ಯರು ಆಗ್ರಹಿಸಬೇಕು ಎಂದು ಜೆಡಿಎಸ್ ನ ಮಾಜಿ ನಾಯಕ ಪದ್ಮನಾಭ ರೆಡ್ಡಿ ಹೇಳಿದರು.
ಪ್ರತಿಪಕ್ಷ ಸದಸ್ಯರ ಧಿಕ್ಕಾರ, ಗಲಾಟೆ, ಗದ್ದಲ, ಸಭಾತ್ಯಾಗಕ್ಕೆ ಸೊಪ್ಪು ಹಾಕದ ಆಡಳಿತಾರೂಢ ಬಿಜೆಪಿ 137 ವಿಷಯಗಳಿಗೆ ಅನುಮೋದನೆ ಪಡೆದು ಸಭೆಯನ್ನು ಮುಂದೂಡಿತು.