ಧರ್ಮಸ್ಥಳ ಮಂಜುನಾಥನ ಮೇಲಾಣೆ ಪತ್ನಿಯ ನಾ ಕೊಂದಿಲ್ಲ
ಇದೇ ಜೂನ್ 10ಕ್ಕೆ ನನ್ನ ಪತ್ನಿ ಸಾವಿಗೀಡಾಗಿ ನಾಲ್ಕು ವರ್ಷ ತುಂಬುತ್ತೆ. ನಮ್ಮ ಕುಟುಂಬ ಇದರ ನೋವಿನಿಂದ ಇನ್ನೂ ಹೊರಬಂದಿಲ್ಲ. ನಮ್ಮ ಮನೆ ದೈವದ ಅಣತಿಯಂತೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಬಳಿ ಸಮಾಲೋಚಿಸಿ ಅವರ ಒಪ್ಪಿಗೆ ಪಡೆದು ನನ್ನ ತಾಯಿ ಮತ್ತು ಮಕ್ಕಳ ಸಮ್ಮುಖದಲ್ಲಿ ಮಂಜುನಾಥನ ಮುಂದೆ ಪ್ರಮಾಣ ಮಾಡಿದ್ದೇನೆ.
ಕಳೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆಯ ಸಮಯದಲ್ಲಿ ನನ್ನ ರಾಜಕೀಯ ವಿರೋಧಿಗಳು ನನ್ನ ಈ ಕುಟುಂಬದ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿಕೊಂಡರು. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಮಾನಸಿಕವಾಗಿ ನನ್ನನ್ನು ಕುಗ್ಗಿಸಿದ್ದಾರೆ.
ನನಗೆ ಮತ ಹಾಕಿದ ಸಾರ್ವಜನಿಕರು ನನ್ನನ್ನು ಅನುಮಾನದಿಂದ ನೋಡುವಂತೆ ಮಾಡಲು ನನ್ನ ವಿರೋಧಿಗಳು ಶಕ್ತರಾಗಿದ್ದಾರೆ. ಇದರಿಂದ ನೊಂದು ನನ್ನ ತಾಯಿ ಮತ್ತು ಕುಲದೈವದ ನುಡಿಯಂತೆ ಮಂಜುನಾಥನ ಮತ್ತು ಕ್ಷೇತ್ರದ ಶಕ್ತಿ ಅಣ್ಣಪ್ಪ ಪಂಜುರ್ಲಿಯ ಮುಂದೆ ಲಿಖಿತವಾಗಿ 'ನನ್ನ ಪತ್ನಿಯ ಕೊಲೆಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ' ಎಂದು ಪ್ರಮಾಣ ಮಾಡಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ.
ನನ್ನ ಪತ್ನಿಯ ಸಾವು ಮತ್ತು ನಂತರ ಬೆಳವಣಿಗೆಯಿಂದ ನನ್ನ ಇಬ್ಬರ ಮಕ್ಕಳ ಮೇಲೆ ಕೂಡಾ ಪ್ರತೀಕೂಲ ಪ್ರಭಾವಬೀರಿದೆ. ಶಾಲೆಯಲ್ಲಿ ಇತರ ಮಕ್ಕಳ ನಿಮ್ಮಪ್ಪ ಕೊಲೆಗಾರನೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ಎಲ್ಲಾ ಘಟನೆಗಳಿಂದ ಮಾನಸಿಕವಾಗಿ ಬೆಂದು ಹೋಗಿದ್ದೇನೆ. ಚುನಾವಣೆಯ ಸಂದರ್ಭದಲ್ಲಿ ನನ್ನನ್ನು ಆರೋಪಿಯಾಗಿ ಬಿಂಬಿಸಿ ಜಾಹೀರಾತು ನೀಡಿ ನನ್ನ ತೇಜೋವಧೆ ಮಾಡಿದ್ದಾರೆ ಎಂದು ಶಾಸಕರು ದುಃಖ ವ್ಯಕ್ತಪಡಿಸಿದ್ದಾರೆ.
ಈ ಹಿಂದೇನೇ ಹೇಳಿದ ಹಾಗೆ ನಾನು ಯಾವುದೇ ತನಿಖೆಗೂ ಸಿದ್ದ. ಸಿಬಿಐ ತನಿಖೆ ಆಗುವ ಹಾಗಿದ್ದರೆ ಅದಕ್ಕೂ ನಾನು ರೆಡಿ, ತಮ್ಮ ರಾಜಕೀಯ ದುರ್ಲಾಭಕ್ಕೆ ನನ್ನ ಕುಟುಂಬದ ವಿಚಾರವನ್ನು ಪದೇ ಪದೇ ಬಳಸುತ್ತಿರುವುದರಿಂದ ಮಂಜುನಾಥನ ಮುಂದೆ ಪ್ರಮಾಣ ಮಾಡಿದ್ದೇನೆ ಎಂದು ರಘುಪತಿ ಭಟ್ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.